ಕುರುಬ ಸಮುದಾಯದ ಅಧಿಕಾರಿಗಳ ವರ್ಗಾವಣೆ ನಿಲ್ಲಿಸುವಂತೆ ಒತ್ತಾಯ
ಬೆಂಗಳೂರು, ಜೂನ್ 28: ಹಿಂದುಳಿದ ವರ್ಗಗಳಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಕುರುಬ ಸಮುದಾಯದ ಅಧಿಕಾರಿಗಳನ್ನು ಉದ್ದೇಶಪೂರ್ವಕವಾಗಿ ವರ್ಗಾವಣೆ ಮಾಡುತ್ತಿರುವುದನ್ನು ಕರ್ನಾಟಕ ಪ್ರದೇಶ ಕುರುಬರ ಸಂಘ ಖಂಡಿಸಿದೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಡಾ. ರಾಜೇಂದ್ರ ಮಾತನಾಡಿ, ಕುರುಬ ಸಮುದಾಯದ ಅಧಿಕಾರಿಗಳನ್ನು ಅವಧಿಪೂರ್ಣ ವರ್ಗಾವಣೆ ಮಾಡುತ್ತಿರುವುದು ಸರ್ಕಾರದ ಸೇಡಿನ ಕ್ರಮ ಎಂಬ ಭಾವನೆ ಬಿತ್ತುವ ಅಪಾಯವಿದೆ. ಅಧಿಕಾರಗಳು ಕುರುಬ ಸಮುದಾಯದವರೆಂಬ ಕಾರಣಕ್ಕೆ ಮನಸೋಇಚ್ಛೆ ವರ್ಗಾಯಿಸುತ್ತಿರುವುದರಿಂದ ಸಮ್ಮಿಶ್ರ ಸರ್ಕಾರದ ಮೌಲ್ಯ ಮತ್ತು ನಂಬಿಕೆಯನ್ನು ಕಳೆದುಕೊಳ್ಳುತ್ತಿದೆ.
ಮುಂದುವರೆದ ವರ್ಗಾವಣೆ ಪರ್ವ, 9 ಐಎಎಸ್ ಅಧಿಕಾರಿಗಳ ವರ್ಗಾವಣೆ
ನಾಡಿನ ಅಭಿವೃದ್ಧಿಯಲ್ಲಿ ಅಧಿಕಾರಿಗಳ ಪಾತ್ರ ಮುಖ್ಯ. ಇವರುಗಳನ್ನು ಸೇಡಿನ ಕ್ರಮವಾಗಿ ಸ್ಥಳ ತೋರಿಸದೆ ವರ್ಗಾಯಿಸಿ ಅವಮಾನಗೊಳಿಸುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದೆ. ಕುರುಬ ಎಂಬ ಜಾತಿಯ ಕಾರಣಕ್ಕಾಗಿ ವರ್ಗಾಯಿಸುವುದರಿಂದ ಅವರುಗಳಲ್ಲಿರುವ ಆತ್ಮಸ್ಥೆರ್ಯ, ಸಾಮರ್ಥ್ಯ, ಪ್ರತಿಭೆ ಎಲ್ಲವೂ ಮುರುಟಿಹೋಗಿ ಬೀಡುವ ಅಪಾಯವಿದೆ.
ಇಂತಹ ಕಿರುಕುಳಗಳನ್ನು ನಿಲ್ಲಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸುತ್ತೇವೆ.ಹೀಗಾಗಿ ವರ್ಗಾವಣೆಗೊಂಡಿರುವ ಅಧಿಕಾರಿಗಳನ್ನು ಮರು ನಿಯುಕ್ತಿಗೊಳಿಸಲು ಮುಂದಾಗಬೇಕೆಂದು ಸಂಘ ಆಗ್ರಹಪಡಿಸುತ್ತದೆ ಎಂದರು.
ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಲೋಕೋಪಯೋಗಿ ಇಲಾಖೆ, ನೀರಾವರಿ ಇಲಾಖೆಯ ಸುಮಾರು 52 ಮುಖ್ಯ ಎಂಜಿನಿಯರುಗಳನ್ನು ಮತ್ತು ಐ.ಎ.ಎಸ್, ಐ.ಪಿ.ಎಸ್, ಕೆ.ಎ.ಎಸ್ ಅಧಿಕಾರಿಗಳನ್ನು ಸಮನ್ವಯ ಸಮಿತಿಯ ಗಮನಕ್ಕೂ ಬಾರದಿರುವ ರೀತಿಯಲ್ಲಿ ವರ್ಗಾವಣೆ ಮಾಡಲಾಗಿದೆ.
ಇದು ಸಮ್ಮಿಶ್ರ ಸರ್ಕಾರದ ರಾಜನೀತಿಯೇ ಎಂದು ಪ್ರಶ್ನಿಸಿದೆ. ಸಮ್ಮಿಶ್ರ ಸರ್ಕಾರ ರಚನೆಗೆ ಸಂಪೂರ್ಣ ಸಹಮತ ನೀಡಿದ್ದ ಮಾಜಿಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರನ್ನು ಸಮನ್ವಯ ಸಮಿತಿಯ ಅಧ್ಯಕ್ಷರನ್ನಾಗಿಸಿ ಎಲ್ಲಾ ನಿರ್ಣಯಗಳನ್ನು ತಾವೆ ಕೈಗೊಂಡು ಕಡೆಗಣಿಸುವುದು ಸೂಕ್ತವಲ್ಲ ಎಂದು ಹೇಳಿದೆ.