ಕುರುಬ ಸಮುದಾಯದ ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಮೇಲೆ ಗರಂ
Recommended Video
ಬೆಂಗಳೂರು, ಜೂನ್ 07: ಸಿದ್ದರಾಮಯ್ಯ ಅವರು ಸೇರಿದಂತೆ ಒಟ್ಟು 9 ಮಂದಿ ಕುರುಬ ಸಮುದಾಯದ ಅಭ್ಯರ್ಥಿಗಳು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ ಆದರೆ ಅವರಿಗೆ ಸಿಕ್ಕಿರುವುದು ಕೇವಲ 1 ಸಚಿವ ಸ್ಥಾನ ಹಾಗಾಗಿ ಕುರುಬ ಸಮುದಾಯದ ಶಾಸಕರು ಸಮುದಾಯದ ಮುಖಂಡ ಸಿದ್ದರಾಮಯ್ಯ ಮೇಲೆ ಸಿಟ್ಟಾಗಿದ್ದಾರೆ.
ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸೇರಿ ಒಟ್ಟು 13 ಮಂದಿ ಕುರುಬ ಸಮುದಾಯದ ಶಾಸಕರು ಈ ಬಾರಿ ವಿಧಾನಸಭೆಯಲ್ಲಿದ್ದಾರೆ. ಅದರಲ್ಲಿ ಸಿಂಹಪಾಲು ಕಾಂಗ್ರೆಸ್ನದ್ದು ಅದಕ್ಕೆ ಸಿದ್ದರಾಮಯ್ಯ ಅವರ ಲಾಭಿಯೇ ಕಾರಣವಾಗಿತ್ತು. ಸಿದ್ದರಾಮಯ್ಯ ಹೆಚ್ಚಿನ ಜನ ಕುರುಬ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಿಸಲು ಸಫಲರಾಗಿದ್ದರು.
ನಮ್ಮನ್ನಾಳುವ ಮಂತ್ರಿಗಳಲ್ಲಿ ಪಿಯುಸಿ ಪಾಸಾದವರು ಎಷ್ಟು ಜನ?
ಆದರೆ ಚುನಾವಣೆ ನಂತರ ಸಿದ್ದರಾಮಯ್ಯ ಅವರ ಪರಿಸ್ಥಿತಿ ಬದಲಾಗಿದ್ದು ಸಿದ್ದರಾಮಯ್ಯ ಅವರ ಪ್ರಭಾವ ಕಡಿಮೆ ಆದಂತೆ ಕಾಣುತ್ತಿದೆ ಹಾಗಾಗಿ ಕುರುಬ ಸಮುದಾಯದ ಇಬ್ಬರಿಗೆ ಮಾತ್ರವೇ ಸಂಪುಟದಲ್ಲಿ ಅವಕಾಶ ದೊರೆತಿದೆ. ಅದರಲ್ಲಿಯೂ ಕಾಂಗ್ರೆಸ್ನ ಒಬ್ಬ ಕುರುಬ ಶಾಸಕರಿಗೆ ಮಾತ್ರವೇ ಸಚಿವರಾಗುವ ಭಾಗ್ಯ ದೊರೆತಿದೆ.
ಅದರಲ್ಲಿಯೂ ಕಾಂಗ್ರೆಸ್ನಿಂದ ಮೂರು ಭಾರಿ ಗೆದ್ದಿರುವ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜು ಅವರಂತೂ ಸಿದ್ದರಾಮಯ್ಯ ಅವರ ಮೇಲೆ ತೀವ್ರ ಅಸಮಾಧಾನಗೊಂಡಿದ್ದು, ಇಂದು ಎಂಬಿ ಪಾಟೀಲ್ ಅವರ ನಿವಾಸದಲ್ಲಿ ನಡೆದ ಅತೃಪ್ತರ ಸಭೆಯಲ್ಲಿ ಸಿದ್ದರಾಮಯ್ಯ ಅವರ ವಿರುದ್ಧವಾಗಿ ಖಾರವಾಗಿ ಮಾತನಾಡಿದ್ದಾರೆ.
ಸಂಪುಟ ಸಚಿವರು : ಜಾತಿವಾರು ಲೆಕ್ಕಾಚಾರದಲ್ಲಿ ಒಕ್ಕಲಿಗರಿಗೆ ಸಿಂಹಪಾಲು
ಕಳೆದ ಬಾರಿ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಮೇಲೆ ಹಾಗೂ ರಾಜ್ಯ ಕಾಂಗ್ರೆಸ್ ಮೇಲೆ ಉತ್ತಮ ಹಿಡಿತವಿತ್ತು ಆಗ ಹಲವರಿಗೆ ಕುರುಬ ಸಮುದಾಯದವರಿಗೆ ಸಚಿವ ಸ್ಥಾನ ಕೊಡಿಸಿದ್ದರು. ಈ ಬಾರಿ ಚುನಾವಣೆಗೆ ಟಿಕೆಟ್ ಕೂಡ ಕೊಡಿಸುವಲ್ಲಿ ಸಫಲರಾಗಿದ್ದರು. ಆದರೆ ಈಗ ಪರಿಸ್ಥತಿ ಬದಲಾದಂತಿದೆ.
ಎಂಟಿಬಿ ನಾಗರಾಜು ಅವರು ಹೇಳುವ ಪ್ರಕಾರ, ಇನ್ನೂ ಅವಕಾಶ ಇದ್ದು ತಾಳ್ಮೆಯಿಂದ ಇರುವಂತೆ ಮುಕ್ಯಮಂತ್ರಿಗಳು ಸಲಹೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ. ಅವರ ಮಾತು ನಿಜವಾದಲ್ಲಿ ಇನ್ನೊಬ್ಬ ಕುರುಬ ಶಾಸಕ ಸಂಪುಟ ಸೇರುವ ಸಾಧ್ಯತೆ ಇದೆ.