ಕುರುಬರ ಎಸ್ಟಿ ಹೋರಾಟ ಪಾದಯಾತ್ರೆ ಅಂತ್ಯ ; ಸರ್ಕಾರಕ್ಕೆ ಮನವಿ ಸಲ್ಲಿಕೆ
ಬೆಂಗಳೂರು, ಫೆಬ್ರವರಿ 7: ಕುರುಬರ ಎಸ್ಟಿ ಹೋರಾಟ ಸಮಿತಿಯ 21 ದಿನಗಳ ಪಾದಯಾತ್ರೆಯ ಸಮಾರೋಪ ಸಮಾರಂಭ ಬೆಂಗಳೂರಿನಲ್ಲಿ ಬೃಹತ್ ಸಮಾವೇಶದ ಮೂಲಕ ಅಂತ್ಯಗೊಂಡಿತು. ಎಸ್ಟಿ ಮೀಸಲಾತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಭಾನುವಾರ ಮಾದನಾಯಕನಹಳ್ಳಿ ಬಳಿಯ ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಿತು. ರಾಜ್ಯವ ವಿವಿದ ಜಿಲ್ಲೆಗಳಿಂದ ಲಕ್ಷಾಂತರ ಜನರು ಸಮಾವೇಶಕ್ಕೆ ಆಗಮಿಸಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾವೇಶದಿಂದ ದೂರ ಉಳಿದಿದ್ದು ಅಚ್ಚರಿಗೆ ಕಾರಣವಾಯಿತು.
ಕುರುಬ ಸಮಾಜದಿಂದ ಸಿದ್ದರಾಮಯ್ಯಗೆ ಬಹಿಷ್ಕಾರದ ಎಚ್ಚರಿಕೆ!
ಕರ್ನಾಟಕ ಸರ್ಕಾರದ ಪ್ರತಿನಿಧಿಯಾಗಿ ಕಂದಾಯ ಸಚಿವ ಆರ್. ಅಶೋಕ ಅವರು ಸಮಾವೇಶಕ್ಕೆ ಆಗಮಿಸಿದ್ದರು. ಕುರುಬರನ್ನು ಎಸ್ಟಿ ಪಟ್ಟಿಗೆ ಸೇರ್ಪಡೆ ಮಾಡಬೇಕು ಎನ್ನುವ ಮನವಿ ಪತ್ರವನ್ನು ಅವರು ಸ್ವೀಕರಿಸಿದರು. ಸಚಿವರಾದ ಕೆ. ಎಸ್. ಈಶ್ವರಪ್ಪ, ಎಂಟಿಬಿ ನಾಗರಾಜ್, ಆರ್. ಶಂಕರ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಎಸ್ಟಿ ಹೋರಾಟಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದೆ; ಶ್ರೀಗಳು
ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲು ಲಕ್ಷಾಂತರ ಜನರು ಆಗಮಿಸಿದ್ದರು. ಆದ್ದರಿಂದ, ತುಮಕೂರು ರಸ್ತೆಯಲ್ಲಿ ಜನದಟ್ಟಣೆ, ಸಂಚಾರ ದಟ್ಟಣೆ ಉಂಟಾಯಿತು. ಮುಂಜಾನೆಯಿಂದಲೇ ಬೇರೆ-ಬೇರೆ ಜಿಲ್ಲೆಗಳಿಂದ ಜನರು ಬಂದು ಜವಾವಣೆಗೊಂಡರು.
ಎಸ್ಟಿಗೆ ಕುರುಬ ಸಮಾಜ ಸೇರ್ಪಡೆಗೆ ಆಗ್ರಹಿಸಿ ಕಾಗಿನೆಲೆ ಶ್ರೀಗಳ ಪಾದಯಾತ್ರೆ
ಎಚ್. ವಿಶ್ವನಾಥ್ ಹೇಳಿಕೆ
ಸಮಾವೇಶದಲ್ಲಿ ಮಾತನಾಡಿದ ಎಚ್. ವಿಶ್ವನಾಥ್, "ಕುರುಬ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರಲು ಅಗತ್ಯ ವಾದ ಎಲ್ಲಾ ಪೂರಕ ಅಂಶಗಳನ್ನು ಹೊಂದಿರುವುದರಿಂದ ಯಾವ ಕುಲಶಾಸ್ತ್ರಿಯ ಅಧ್ಯಯನದ ಅಗತ್ಯ ಇಲ್ಲದೆ ರಾಜ್ಯ ಸರ್ಕಾರ ಕೂಡಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಕುರುಬ ಸಮಾಜ ಯಾರನ್ನು ತಮ್ಮ ತನು, ಮನ, ಧನ ಅರ್ಪಿಸಿ ಮುಖ್ಯಮಂತ್ರಿ ಮಾಡಿತೊ ಅವರು ಸಮಾವೇಶಕ್ಕೆ ಬಾರದಿರುವು ಅತೀವ ನೋವು ತಂದಿದೆ" ಎಂದು ಸಿದ್ದರಾಮಯ್ಯ ಹೆಸರನ್ನು ಪ್ರಸ್ತಾಪಿಸಿದೆ ಟೀಕಿಸಿದರು.
ಎಸ್ಟಿ ಪಟ್ಟಿಗೆ ಸೇರಿಸಲಾಗಿದೆ
ಕುರುಬರ ಎಸ್ಟಿ ಹೋರಾಟ ಸಮಿತಿಯ ಅಧ್ಯಕ್ಷ ಕೆ. ವಿರೂಪಾಕ್ಷಪ್ಪ ಮಾತನಾಡಿ, "ಕುರುಬರ ಸಮನಾಂತರ ಪದಗಳನ್ನು ಈಗಾಗಲೇ ದೇಶದ ವಿವಿಧ ರಾಜ್ಯಗಳಲ್ಲಿ ಎಸ್ಟಿ ಪಟ್ಟಿಗೆ ಸೇರಿಸಲಾಗಿದೆ. ಅದನ್ನು ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಿಗೂ ವಿಸ್ತರಿಸಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕುರುಬರನ್ನು ಎಸ್ಟಿ ಪಟ್ಟಿಗೆ ಸೇರಿಸುವಂತೆ ಶಿಫಾರಸ್ಸು ಮಾಡಬೇಕು. ರಾಜಕೀಯವಾಗಿ ಉನ್ನತ ಸ್ಥಾನ ಪಡೆದರೂ ನಮ್ಮ ಸಮಾಜದ ನಾಯಕರ ಇಚ್ಛಾಶಕ್ತಿಯ ಕೊರತೆಯಿಂದ ಕುರುಬರು ಇನ್ನೂ ಎಸ್ಟಿ ಪಟ್ಟಿಗೆ ಸೇರಲಾಗಿಲ್ಲ" ಎಂದರು.
ಶ್ರೀ ಈಶ್ವರಾನಂದ ಸ್ವಾಮಿ
"ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮ್ಮ ಈ ಹೋರಾಟವನ್ನು ಲಘುವಾಗಿ ತಗೆದುಕೊಳ್ಳಬೇಡಿ. ನಮಗೆ ನ್ಯಾಯ ದೊರೆಯುವವರೆಗೆ ಹೋರಾಟ ಮುಂದುವರಿಯಲಿದೆ. ಯಾವುದಾದರೂ ಜಾತಿಯನ್ನು ಹೊಸದಾಗಿ ಎಸ್ಟಿ ಪಟ್ಟಿಗೆ ಸೇರ್ಪಡೆ ಮಾಡುವಾಗ ಕುಲಶಾಸ್ತ್ರಿಯ ಅಧ್ಯಯನ ಅಗತ್ಯ ವಿದೆಯೇ ಹೊರತು, ಈಗಾಗಲೇ ಸಮಾನಾಂತರ ಪದಗಳು ಎಸ್ ಟಿ ಪಟ್ಟಿಗೆ ಸೇರಿರುವ ಕುರುಬ ಸಮಾಜಕ್ಕಲ್ಲ. ಕುರುಬರು ದೇಶದ ಮೂಲ ನಿವಾಸಿಗಳು ಅವರನ್ನು ಮೊದಲು ಎಸ್ ಟಿ ಪಟ್ಟಿಗೆ ಸೇರಿಸ ಬೇಕಿತ್ತು" ಎಂದರು.
ಆದಷ್ಟು ಶೀಘ್ರ ಶಿಫಾರಸು
ಸಚಿವ ಆರ್. ಶಂಕರ್ ಮಾತನಾಡಿ, "ಮುಖ್ಯ ಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ವಿಶ್ವಾಸವಿದೆ. ಸಚಿವ ಸಂಪುಟದ ಮುಂದೆ ಸಿಎಂ ಕುರುಬರನ್ನು ಎಸ್ ಟಿ ಪಟ್ಟಿಗೆ ಸೇರ್ಪಡೆ ಮಾಡುವ ವಿಷಯವನ್ನು ತರುವಂತೆ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಆದಷ್ಟು ಶ್ರೀಘ್ರವೇ ಕುರುಬರನ್ನು ಎಸ್ ಟಿ ಪಟ್ಟಿಗೆ ಸೇರಿಸಬೇಕು. ಎಸ್ಟಿ ಪಟ್ಟಿಗೆ ಸೇರಿಸಿದರೆ ಕುರುಬರು ಬಿಜೆಪಿ ಪಕ್ಷ ದೊಂದಿಗೆ ಇರಲಿದ್ದಾರೆ" ಎಂದರು.
Recommended Video
ಕೇಂದ್ರಕ್ಕೆ ಶಿಫಾರಸು ಮಾಡಿ
ಕಾಗಿನೆಲೆಯ ನಿರಂಜನಾನಂದಪುರಿ ಶ್ರೀಗಳು ಮಾತನಾಡಿ, "ಮುಖ್ಯ ಮಂತ್ರಿಗಳೇ ನಾವು ಬೇರೆ ಸ್ವಾಮಿಗಳಂತೆ ಕೆಟ್ಟದಾಗಿ ಮಾತನಾಡುವವರು, ಬ್ಲಾಕ್ ಮೇಲ್ ಮಾಡುವವರು ಅಲ್ಲ. ನಾವು ಪ್ರೀತಿಯಿಂದ ಬೇಡುತ್ತಿದ್ದೇವೆ, ನಾಡ ದೊರೆಯಾಗಿ ಅದೇ ಪ್ರೀತಿಯಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ. ನಾವು ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಎಸ್ ಟಿ ಹಕ್ಕು ಪಡೆಯುತ್ತೇವೆ. ನಮ್ಮ ಹೋರಾಟ ಯಾರ ಪರವು, ಯಾರ ವಿರುದ್ಧವೂ ಅಲ್ಲ. ಯಾವ ಪಕ್ಷದ ಪರವೂ, ಯಾವ ಪಕ್ಷದ ವಿರುದ್ಧವೂ ಅಲ್ಲ" ಎಂದರು.