ಬನ್ನಿ ಭಕ್ತಾದಿಗಳೇ ಕುಂದೂರು ಜಾತ್ರೆಗೆ ಹೋಗೋಣ
ಹಾಸನ, ನ.21 : ಚನ್ನರಾಯಪಟ್ಟಣ ತಾಲ್ಲೂಕು ದಂಡಿಗನಹಳ್ಳಿ ಹೋಬಳಿಯಲ್ಲಿರುವ ಸಾವಿರಾರು ವರ್ಷಗಳ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಕುಂದೂರಿನಲ್ಲಿ ನವಂಬರ್ 27ರಿಂದ 30ರವರೆಗೆ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ ಮತ್ತು ಶ್ರೀ ರಂಗನಾಥಸ್ವಾಮಿಯವರ ಬೃಹತ್ ಜಾತ್ರಾ ಮಹೋತ್ಸವ ನಡೆಯಲಿದೆ.
ಕುಂದೂರು ಕ್ಷೇತ್ರವು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಅಧೀನಕ್ಕೊಳಪಟ್ಟ ನಂತರ ಕ್ಷೇತ್ರದಲ್ಲಿ ಸುಮಾರು ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಸುಮಾರು 70 ಲಕ್ಷ ರೂ.ಗಳ ವೆಚ್ಚದಲ್ಲಿ ಪ್ರಸಾದ ನಿಲಯ ಮತ್ತು ಶ್ರೀಗಳ ಕುಟೀರ ನಿರ್ಮಿಸಲಾಗಿದೆ ಹಾಗೂ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಕ್ಷೇತ್ರದ ಆದಿದೇವತೆ ಮೆಳೆಯಮ್ಮನವರ ದೇವಾಲಯವನ್ನು ಅಭಿವೃದ್ಧಿಪಡಿಸಲಾಗಿದೆ.
ಈ ಸಂಗತಿಯನ್ನು ಕುಂದೂರು ಮಠದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಮತ್ತು ಕುಂದೂರು ಮಠದ ಪರದೇಶಿ ರಾಮಯ್ಯ ಸ್ವಾಮೀಜಿ ತಿಳಿಸಿದರು. [ಶ್ರವಣಬೆಳಗೊಳದಲ್ಲಿ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ]
ಕುಂದೂರು ಮಠ ಸಹ ಆದಿಚುಂಚನಗಿರಿ ಮಠದಂತೆ ನಾಥ ಪರಂಪರೆಗೆ ಸೇರಿದ ಮಠವಾಗಿದೆ. ಸುಮಾರು 280 ಎಕರೆ ವಿಸ್ತೀರ್ಣದ ನಿಸರ್ಗ ರಮಣೀಯ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಕ್ಷೇತ್ರವನ್ನು ಮುಂದಿನ ದಿನಗಳಲ್ಲಿ ನಾಡಿನ ಪ್ರಮುಖ ಯಾತ್ರಾ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಈ ಕ್ಷೇತ್ರವು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಅಧೀನಕ್ಕೊಳಪಟ್ಟ ನಂತರ ನಡೆಸುತ್ತಿರುವ ಪ್ರಥಮ ಜಾತ್ರೆ ಇದಾಗಿದ್ದು, ಕ್ಷೇತ್ರದ ಇತಿಹಾಸ ಮತ್ತು ಪರಂಪರೆಗೆ ಕುಂದುಂಟಾಗದಂತೆ ಅದ್ಧೂರಿಯಾಗಿ ನಡೆಸಲಾಗುವುದು ಎಂದು ಹೇಳಿದರು.
ನವೆಂಬರ್ 27ರಂದು ಗೋಧೂಳಿ ಲಗ್ನದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಧರ್ಮ ಧ್ವಜಾರೋಹಣ ಮತ್ತು ನವಕಲಶಾರೋಹಣ ಮಾಡುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡುವರು. ನ.28ರಂದು ಉಪವಾಸ, ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ ರಥೋತ್ಸವ ಹಾಗೂ ಸಂಜೆ 6 ಗಂಟೆಗೆ ಶ್ರೀ ಸ್ವಾಮಿಯವರ ಸರ್ಪವಾಹನೋತ್ಸವ ನಡೆಯಲಿದೆ.
ನ.29ರಂದು ಶ್ರೀ ರಂಗನಾಥಸ್ವಾಮಿ ರಥೋತ್ಸವ, ಸಂಜೆ 4 ಗಂಟೆಗೆ ಗರುಡೋತ್ಸವ, 5 ಗಂಟೆಗೆ ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಪುತ್ಥಳಿಕೆ, ಪರದೇಶಿ ರಾಮಯ್ಯ ಸ್ವಾಮೀಜಿ ಮತ್ತು ನಿರ್ಮಲಾನಂದನಾಥ ಸ್ವಾಮೀಜಿಯವರ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಲಿದೆ. ಹಾಗೂ ಮೆಳೆಯಮ್ಮ ದೇವಿ ಪ್ರಸಾದ ನಿಲಯ ಮತ್ತು ಶ್ರೀಗಳ ಕುಟೀರದ ಉದ್ಘಾಟನೆ, ನಂತರ ಧಾರ್ಮಿಕ ಸಮಾರಂಭ, ಕುರುಕ್ಷೇತ್ರ ನಾಟಕ ಪ್ರದರ್ಶನ ಮತ್ತು ಹಾಸ್ಯ ಚಕ್ರವರ್ತಿ ಗಂಗಾವತಿ ಪ್ರಾಣೇಶ್ ಅವರಿಂದ ಹಾಸ್ಯ ರಸಸಂಜೆ ಕಾರ್ಯಕ್ರಮ ನಡೆಯಲಿದೆ.
ನ.30ರಂದು ಕುಂದೂರು ಮಹಾಸಂಸ್ಥಾನ ಮಠದ ಹಿಂದಿನ ಪೀಠಾಧ್ಯಕ್ಷರ ಪುಣ್ಯಾರಾಧನೆ ಮತ್ತು ಗುರುವಂದನಾ ಕಾರ್ಯಕ್ರಮ ಹಾಗೂ ರಾತ್ರಿ ಕುಂದೂರು ಗ್ರಾಮಸ್ಥರಿಂದ ಶ್ರೀ ದೇವಿ ಮಹಾತ್ಮೆ ಎಂಬ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ. ಕಬ್ಬಳಿ ಶಾಖಾ ಮಠದ ಶ್ರಿ ಶಿವಪುತ್ರ ಸ್ವಾಮೀಜಿ ಉಪಸ್ಥಿತರಿದ್ದರು.