ಎಚ್ಡಿಕೆ-ರಾಹುಲ್ ಭೇಟಿಯಿಂದ ಸಿದ್ದರಾಮಯ್ಯಗೆ ಗುದ್ದು!
Recommended Video
ನವ ದೆಹಲಿ, ಜೂನ್ 19: ಬಜೆಟ್ ಮಂಡಿಸುವ ಬಗ್ಗೆ ಪರ ವಿರೋಧ ಅಭಿಪ್ರಾಯಗಳು ಮೈತ್ರಿ ಸರ್ಕಾರದ ಮುಖಂಡರಲ್ಲಿ ಏರ್ಪಟ್ಟಿದ್ದ ಬೆನ್ನಲ್ಲೆ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದ ಕುಮಾರಸ್ವಾಮಿ ಬಜೆಟ್ ಮಂಡನೆಗೆ ಒಪ್ಪಿಗೆ ಪಡೆದಿದ್ದಾರೆ. ಆ ಮೂಲಕ ಬಜೆಟ್ ಮಂಡನೆಯ ವಿರುದ್ಧವಿದ್ದ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.
ನಿನ್ನೆ ನವ ದೆಹಲಿಯಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಕುಮಾರಸ್ವಾಮಿ ಅವರು, ಬಜೆಟ್ ಮಂಡನೆ ಹಾಗೂ ಬಜೆಟ್ನಲ್ಲಿ ಇರತಕ್ಕ ಸಂಭಾವ್ಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಒಪ್ಪಿಗೆ ಪಡೆದಿದ್ದಾರೆ.
ಕುಮಾರಸ್ವಾಮಿ Vs ಸಿದ್ದರಾಮಯ್ಯ 'ಬಜೆಟ್' ಜಟಾಪಟಿ: ನಾನಾ..ನೀನಾ..
ಮೈತ್ರಿ ಸರ್ಕಾರದ ಸಮನ್ವಯ ಸಮಿತಿಯ ಮುಖ್ಯಸ್ಥ ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಅವರು ಬಜೆಟ್ ಮಂಡಿಸುವ ಅವಶ್ಯಕತೆ ಇಲ್ಲ ಎಂದಿದ್ದರು. ಆದರೆ ಕುಮಾರಸ್ವಾಮಿ ಅವರು ಬಜೆಟ್ ಮಂಡಿಸಿಯೇ ಸಿದ್ಧ ಎಂದು ಹಠ ತೊಟ್ಟಿದ್ದರು. ಈಗ ಎಚ್ಡಿಕೆ ಅವರು ಕಾಂಗ್ರೆಸ್ ಹೈಕಮಾಂಡ್ನಿಂದಲೇ ಬಜೆಟ್ ಮಂಡನೆಗೆ ಅನುಮತಿ ಪಡೆದಿದ್ದಾರೆ.
ಸಾಲಮನ್ನಾ ಬಗ್ಗೆ ರಾಹುಲ್ ಉತ್ಸುಕ
ಅಷ್ಟೆ ಅಲ್ಲದೆ ಸಾಲಮನ್ನಾ ಬಗ್ಗೆಯೂ ರಾಹುಲ್ ಗಾಂಧಿ ಉತ್ಸುಕರಾಗಿದ್ದಾಗಿ ಹೇಳಿರುವ ಕುಮಾರಸ್ವಾಮಿ ಅವರು, ರಾಜ್ಯದ ಆರ್ಥಿಕ ಸ್ಥಿರತೆಗೆ ಧಕ್ಕೆ ಆಗದ ರೀತಿಯಲ್ಲಿ ಸಾಲಮನ್ನಾ ಮಾಡುವಂತೆ ಸೂಚನೆಯನ್ನು ನೀಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಕಳೆದ ಬಾರಿ ಸಹಕಾರಿ ಸಾಲಮನ್ನಾಕ್ಕೂ ರಾಹುಲ್ ಅವರೇ ಸೂಚಿಸಿದ್ದರು ಎಂದು ಅವರು ಹೇಳಿದರು.
ಎಚ್ಡಿಕೆ ಹೇಳಿಕೆಗೆ ಆಶ್ಚರ್ಯ
ಇದೇ ವೇಳೆ ಒಂದು ವರ್ಷದ ವರೆಗೆ ಮುಖ್ಯಮಂತ್ರಿಯಾಗಿರುತ್ತೇನೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ರಾಹುಲ್ ಗಾಂಧಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಕುಮಾರಸ್ವಾಮಿ ಅವರು ಆ ಹೇಳಿಕೆಯ ಸಂದರ್ಭದ ಬಗ್ಗೆ ಮಾಹಿತಿ ನೀಡಿ ಸ್ಪಷ್ಟೀಕರಣ ನೀಡಿದ್ದಾರೆ.
ಬಜೆಟ್ ನಲ್ಲಿ ಸಾಲಮನ್ನಾ ಘೋಷಿಸುತ್ತೇನೆ: ಕುಮಾರಸ್ವಾಮಿ
ವ್ಯಕ್ತಿಗಳ ಬಗ್ಗೆ ಚರ್ಚೆ ಇಲ್ಲ
ರಾಜ್ಯದ ರಾಜಕೀಯದ ಬಗ್ಗೆಯ ಚರ್ಚೆ ಮಾಡಿದ್ದಾಗಿ ಖುದ್ದು ಕುಮಾರಸ್ವಾಮಿ ಅವರೇ ಹೇಳಿದ್ದು, ಯಾವ -ಯಾವ ವಿಷಯಗಳ ಚರ್ಚೆ ನಡೆಯಿತು ಎಂಬುದನ್ನು ಹೇಳಲು ನಿರಾಕರಿಸಿದ್ದಾರೆ. ಆದರೆ ಸಿದ್ದರಾಮಯ್ಯ ಹಾಗೂ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.
ಸಿದ್ದರಾಮಯ್ಯರದ್ದು ಅನುಭವದ ಮಾತು
ರಾಹುಲ್ ಭೇಟಿ ಬಳಿಕ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಿದ ಕುಮಾರಸ್ವಾಮಿ ಅವರು, 'ಸಿದ್ದರಾಮಯ್ಯ ಅವರು ತಮ್ಮ ಅನುಭವದಿಂದ ಬಜೆಟ್ ಬಗ್ಗೆ ಮಾತನಾಡಿದ್ದಾರೆ, ಆದರೆ ರಾಹುಲ್ ಗಾಂಧಿ ಅವರ ಮುಂದೆ ಯಾವುದೇ ವ್ಯಕ್ತಿಗಳ ಚರ್ಚೆ ನಡೆದಿಲ್ಲ' ಎಂದಿದ್ದಾರೆ.
ರಾಹುಲ್ ಗಾಂಧಿ ಮತ್ತೊಮ್ಮೆ ಅಭಯ
ಐದು ವರ್ಷ ಕುಮಾರಸ್ವಾಮಿಯೇ ಮುಖ್ಯಮಂತ್ರಿ ಆಗಿ ಮುಂದುವರೆಯುವುದು ಖಂಡಿತ ಎಂದು ರಾಹುಲ್ ಗಾಂಧಿ ಅವರು ಮತ್ತೊಮ್ಮೆ ಕುಮಾರಸ್ವಾಮಿ ಅವರಿಗೆ ಅಭಯ ನೀಡಿದ್ದಾರೆ. ಅಲ್ಲದೆ ಕಾಂಗ್ರೆಸ್ ನಾಯಕರಿಂದ ಎದುರಾಗುವ ಸಮಸ್ಯೆಗಳನ್ನು ನಿವಾರಿಸಿಕೊಡುವುದಾಗಿಯೂ ಅಭಯ ನೀಡಿದ್ದಾರೆ.
ರಾಹುಲ್ ಅವರ ನೇರ ಬೆಂಬಲ
ಕುಮಾರಸ್ವಾಮಿ ಅವರು ರಾಹುಲ್ ಗಾಂಧಿ ಅವರ ನೇರ ಬೆಂಬಲ ಗಳಿಸಿದ್ದು, ಕಾಂಗ್ರೆಸ್ ನಾಯಕರು, ಶಾಸಕರಿಂದ ಎದುರಾಗುವ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಅವರು ನೇರವಾಗಿ ರಾಹುಲ್ ಗಾಂಧಿ ಅವರ ಮೊರೆ ಹೋಗುತ್ತಾರೆ. ಹೀಗಾಗಿ ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ನ ಸ್ಥಳೀಯ ನಾಯಕರ ವಿಶ್ವಾಸಗಳಿಸುವ ಬಗ್ಗೆ ಅಷ್ಟಾಗಿ ಚಿಂತೆ ಇಲ್ಲ ಎನ್ನಲಾಗಿದೆ.