ಅನ್ನಭಾಗ್ಯದ ಅಕ್ಕಿಗೆ ಹೇರಿದ್ದ ಕಡಿತ ವಾಪಸ್ ಪಡೆದ ಕುಮಾರಸ್ವಾಮಿ
ಬೆಂಗಳೂರು, ಜುಲೈ 12: ಬಜೆಟ್ನಲ್ಲಿ ರೈತರ ಸಾಲಮನ್ನಾಕ್ಕೆ ಸಂಪನ್ಮೂಲ ಕ್ರೂಡೀಕರಿಸಲು ಅನ್ನಭಾಗ್ಯದ ಅಕ್ಕಿಗೆ ಕಡಿತ ಮಾಡಿದ್ದ ಕುಮಾರಸ್ವಾಮಿ ಇಂದು ಅದನ್ನು ವಾಪಸ್ ಪಡೆದಿದ್ದಾರೆ.
ಅನ್ನಭಾಗ್ಯದಲ್ಲಿ ನೀಡಲಾಗುತ್ತಿದ್ದ 7 ಕೆಜಿ ಅಕ್ಕಿ ಬದಲಿಗೆ ಇನ್ನು ಮುಂದೆ 5 ಕೆಜಿ ಅಕ್ಕಿ ನೀಡಲಾಗುತ್ತದೆ ಎಂದು 5ನೇ ತಾರೀಖು ಮಂಡಿಸಿದ್ದ ಬಜೆಟ್ನಲ್ಲಿ ಕುಮಾರಸ್ವಾಮಿ ಹೇಳಿದ್ದರು ಆದರೆ ಈಗ ಅದನ್ನು ವಾಪಸ್ ಪಡೆದಿದ್ದಾರೆ.
ಮತ್ತೆ ಒಂದು ಲಕ್ಷ ಸಾಲಮನ್ನಾ ಮಾಡುತ್ತಿದ್ದಾರೆ ಕುಮಾರಸ್ವಾಮಿ
ಬಜೆಟ್ ಮೇಲಿನ ಪ್ರಶ್ನೆಗಳಿಗೆ ಉತ್ತರಿಸಿದ ಕುಮಾರಸ್ವಾಮಿ ಅವರು, ಅನ್ನಭಾಗ್ಯದ ಅಕ್ಕಿ ಕಡಿತ ಮಾಡಿರುವುದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಇದು ಬಡವರಪರ ಯೋಜನೆ ಹಾಗಾಗಿ ಇದನ್ನು ವಾಪಸ್ ಪಡೆಯುತ್ತಿದ್ದೇವೆ, ಇನ್ನು ಮುಂದೆ ಅನ್ನಭಾಗ್ಯದ ಮೂಲಕ 7 ಕೆಜಿ ಅಕ್ಕಿಯೇ ದೊರೆಯಲಿದೆ ಎಂದರು.
ಅನ್ನಭಾಗ್ಯ ಯೋಜನೆಯ ಅಕ್ಕಿಗೆ ಕಡಿತ ಹಾಕಿದ್ದಕ್ಕೆ ಕಾರಣ ನಿಡಿದ ಕುಮಾರಸ್ವಾಮಿ. ಯೋಜನೆ ರೂಪಿಸಿದಾಗ ಇದ್ದದ್ದಕ್ಕಿಂತಲೂ ಲಕ್ಷಾಂತರ ಪಡಿತರ ಚೀಟಿಗಳು ಈಗ ಹೆಚ್ಚಾಗಿವೆ. ಎಲ್ಲರಿಗೂ ಅಷ್ಟೆ ಅಕ್ಕಿ ನೀಡಲು ಹೆಚ್ಚುವರಿ 5000 ಕೋಟಿ ನೀಡಬೇಕಾಗುತ್ತದೆ ಹಾಗಾಗಿ ಅಕ್ಕಿಯ ಪರಮಾಣ ಕಡಿಮೆ ಮಾಡಲಾಗಿತ್ತು ಎಂದು ಅವರು ಸ್ಪಷ್ಟೀಕರಣ ನೀಡಿದರು.
ಅನ್ನಭಾಗ್ಯದ ಅಕ್ಕಿ ಕಡಿತದ ಹೊರತಾಗಿ ರೈತರ ಒಂದು ಲಕ್ಷದವರೆಗಿನ ಚಾಲ್ತಿ ಸಾಲವನ್ನು ಮನ್ನಾ ಮಾಡುವುದಾಗಿಯೂ ಕುಮಾರಸ್ವಾಮಿ ಘೋಷಣೆ ಮಾಡಿದರು.