ರಾಹುಲ್ ಸೇರಿದಂತೆ ಕುಮಾರಣ್ಣನ ಪ್ರಮಾಣಕ್ಕೆ ಗಣ್ಯಾತಿಗಣ್ಯರ ಆಗಮನ
ಬೆಂಗಳೂರು, ಮೇ 19 : ಜಾತ್ಯತೀತ ಜನತಾದಳದ ನಾಯಕ ಹರದನಹಳ್ಳಿ ದೇವೇಗೌಡರ ಮಗ ಕುಮಾರಸ್ವಾಮಿ ಅವರು ಬುಧವಾರ, ಮೇ 23ರಂದು ಕಂಠೀರವ ಸ್ಟೇಡಿಯಂನಲ್ಲಿ ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಬಹುಮತ ಇಲ್ಲದ್ದರಿಂದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಪತನ ಹೊಂದುತ್ತಿದ್ದಂತೆ ರಾಜ್ಯಪಾಲ ವಜುಭಾಯಿ ವಾಲಾ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದ ಆಯ್ಕೆಯ ಮುಖ್ಯಮಂತ್ರಿ ಅಭ್ಯರ್ಥಿ ಕುಮಾರಸ್ವಾಮಿಯನ್ನು ಸರಕಾರ ರಚಿಸಲು ಆಹ್ವಾನಿಸಿದರು. ಸೋಮವಾರ ನಡೆಯಬೇಕಾಗಿದ್ದ ಸಮಾರಂಭವನ್ನು ಬುಧವಾರಕ್ಕೆ ಮುಂದೂಡಲಾಗಿದೆ.
ನೂರಕ್ಕೆ ನೂರು ಸತ್ಯವಾಯಿತು ಕೋಡಿಶ್ರೀಗಳ ಚುನಾವಣಾ ಭವಿಷ್ಯ
ಸಂಜೆ 7.30ರ ಸುಮಾರಿಗೆ ರಾಜ್ಯಪಾಲರನ್ನು ಭೇಟಿಯಾದ ಕುಮಾರಸ್ವಾಮಿಯವರು, ಕಾಂಗ್ರೆಸ್ ನೀಡಿರುವ ಬೆಂಬಲವನ್ನು ಸ್ವೀಕರಿಸಲಾಗಿದೆ ಎಂದು ರಾಜ್ಯಪಾಲರಿಗೆ ತಿಳಿಸಿದರು. ಅವರೊಂದಿಗೆ ಹಿರಿಯ ಸಹೋದರ ರೇವಣ್ಣ ಹಾಜರಿದ್ದರು.
ಯಾರ್ಯಾರು ಬರಲಿದ್ದಾರೆ? : ಕುಮಾರಸ್ವಾಮಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಎಸ್ಪಿ ನಾಯಕಿ ಮಾಯಾವತಿ, ಡಿಎಂಕೆ ನಾಯಕ ಸ್ಟಾಲಿನ್, ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್, ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬರಲಿದ್ದಾರೆ.
ಸಂಭಾವ್ಯ : ಕೈ-ತೆನೆ ಮೈತ್ರಿ ಸರ್ಕಾರದಲ್ಲಿ ಸಚಿವರು ಹಾಗೂ ಖಾತೆಗಳು
ಕುಮಾರಸ್ವಾಮಿಯವರು ಏಕಾಂಗಿಯಾಗಿ ಪ್ರಮಾಣ ಸ್ವೀಕರಿಸುತ್ತಾರೋ ಅಥವಾ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದಿಂದ ಮತ್ತಿನ್ನಾರು ಪ್ರಮಾಣ ಸ್ವೀಕರಿಸುತ್ತಾರೆ ಎಂಬುದು ಇನ್ನೂ ದೃಢಪಟ್ಟಿಲ್ಲ. ಈ ಸಮಾರಂಭಕ್ಕೆ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಬಿಜೆಡಿ ನಾಯಕ ತೇಜಸ್ವಿ ಯಾದವ್ ಅವರಿಗೂ ಆಹ್ವಾನ ನೀಡಲಾಗಿದೆ.
ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಎರಡನೇ ಬಾರಿ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯುತ್ತಿರುವುದರಿಂದ ಅವರ ತಂದೆ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಆಸೆ ಪೂರೈಸಿದಂತಾಗಿದೆ. ಬಿಜೆಪಿಯಿಂದ ಈ ಪ್ರಮಾಣ ವಚನ ಸಮಾರಂಭಕ್ಕೆ ಯಾರ್ಯಾರು ಬರುತ್ತಾರೆಂದು ಇನ್ನೂ ತಿಳಿದುಬಂದಿಲ್ಲ.