ಕರ್ನಾಟಕ ಅಭಿವೃದ್ಧಿಯ 360 ಡಿಗ್ರಿ ಯೋಜನೆ ಬಿಚ್ಚಿಟ್ಟ ಕುಮಾರಸ್ವಾಮಿ
ಬೆಂಗಳೂರು, ಆಗಸ್ಟ್ 15: ಸರ್ಕಾರದ ಐದು ವರ್ಷದ ಕಾರ್ಯಸೂಚಿಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸ್ವಾತಂತ್ರಯೋತ್ಸವದ ದಿನ ತೆರೆದಿಟ್ಟರು.
ಮಾಣಿಕ್ ಶಾ ಪೆರೆಡ್ ಮೈದಾನದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಸರ್ಕಾರವು ರಾಜ್ಯದ ಸರ್ವತೋಮುಖ ಅಭವೃದ್ಧಿಗೆ ಬದ್ಧವಾಗಿದೆ ಎಂದ ಅವರು, ಸರ್ಕಾರ ಮಾಡಲಿಚ್ಛಿಸಿರುವ ಯೋಜನೆಗಳ ನೀಲಿ ನಕ್ಷೆಯನ್ನು ಜನರೊಂದಿಗೆ ಹಂಚಿಕೊಂಡರು.
ನಾವು ನಿಲ್ಲುವುದಿಲ್ಲ, ಬಾಗುವುದಿಲ್ಲ, ದಣಿಯುವುದಿಲ್ಲ: ನರೇಂದ್ರ ಮೋದಿ
ಶಿಕ್ಷಣ, ಆರೋಗ್ಯ, ವ್ಯವಸಾಯ, ಮಾಹಿತಿ ತಂತ್ರಜ್ಞಾನ, ಮೂಲಭೂತ ಅಭಿವೃದ್ಧಿ, ಅಲ್ಪಸಂಖ್ಯಾತ ಅಭಿವೃದ್ಧಿ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಎಲ್ಲಾ ಕ್ಷೇತ್ರಗಳಲ್ಲಿ ಸರ್ಕಾರ ಈಗಾಗಲೇ ಕೈಗೊಂಡಿರುವ ಯೋಜನೆಗಳು ಮತ್ತು ಮುಂಬರಲಿರುವ ಯೋಜನೆಗಳ ಬಗ್ಗೆ ಕುಮಾರಸ್ವಾಮಿ ಮಾಹಿತಿ ನೀಡಿದರು.
72ನೇ ಸ್ವಾತಂತ್ರ್ಯ ದಿನಾಚರಣೆ 2018
ನಾವು ಈಗಾಗಲೇ ರೈತರ ಸಾಲಮನ್ನಾ ಮಾಡಿದ್ದೇವೆ, ಜೊತೆಗೆ ಇಸ್ರೇಲ್ ಮಾದರಿ ಕೃಷಿಯನ್ನು ಕರ್ನಾಟಕದಲ್ಲಿ ಪರಿಚಯಿಸಿ ರೈತರನ್ನು ಸ್ವಾಲಂಬಿಯನ್ನಾಗಿ ಮಾಡಲು ಪ್ರಯತ್ನಗಳು ಈಗಾಗಲೇ ಶುರುವಾಗಿದೆ ಎಂದು ಅವರು ಹೇಳಿದರು.
ಎಚ್ಡಿಕೆ ಆಸೆ : ಪ್ರತಿ ತಿಂಗಳು ಜಿಲ್ಲೆಯೊಂದರಲ್ಲಿ ರೈತರ ಜತೆ ಸಂವಾದ
ಏರೋ ಇಂಡಿಯಾ ಕುರಿತು ಪತ್ರ
ಏರೋ ಇಂಡಿಯಾ ಪ್ರದರ್ಶನ ಸ್ಥಳಾಂತರಕ್ಕೆ ಸಾರ್ವಜನಿಕ ವಿರೋಧ ವ್ಯಕ್ತವಾಗಿದೆ. ಹಾಗಾಗಿ ನಾನು ಪ್ರಧಾನಿ ಮೋದಿ ಅವರಿಗೆ ಈ ಕುರಿತು ಪತ್ರ ಬರೆದಿದ್ದೇನೆ. ರಾಜ್ಯದ ಸಂಸದರ ಗಮನಕ್ಕೂ ವಿಷಯವನ್ನು ತಂದಿದ್ದೇನೆ, ಕೇಂದ್ರವು ಸಾರ್ವಜನಿಕ ಅಭಿಪ್ರಾಯಕ್ಕೆ ಬೆಲೆ ಕೊಡಬೇಕು ಎಂದು ಅವರು ಆಗ್ರಹಿಸಿದರು.
ಮೈತ್ರಿ ಸರ್ಕಾರ ಅಭಿವೃದ್ಧಿಗೆ ಬದ್ಧ
ನಮ್ಮ ಸಮ್ಮಿಶ್ರ ಸರ್ಕಾರವು ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಬದ್ಧವಾಗಿದ್ದು, ಆ ನಿಟ್ಟನಿಲ್ಲಿ ಭರದಿಂದ ಕಾರ್ಯ ಮಾಡುತ್ತಿದೆ. ಮಿತ್ರ ಪಕ್ಷ ಅದರ ಆಡಳಿತದಲ್ಲಿ ನೀಡಿದ್ದ ಅತ್ಯುತ್ತಮ ಯೋಜನೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರೆಸುವ ಗುರಿಯನ್ನು ಮೈತ್ರಿ ಸರ್ಕಾರ ಹೊಂದಿದೆ ಎಂದರು.
ಮೂಲಭೂತ ಸೌಕರ್ಯ ಅಭಿವೃದ್ಧಿ ನಮ್ಮ ಜವಾಬ್ದಾರಿ
ಬೆಂಗಳೂರು ಈಗಾಗಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗೊಳಿಸಿರುವ ನಗರ. ದೇಶ-ವಿದೇಶಗಳಿಂದ ಇಲ್ಲಿ ಬಂಡವಾಳ ಹೂಡಲು ಕಂಪೆನಿಗಳು ಎಡ ತಾಕುತ್ತಿವೆ. ಹಾಗಾಗಿ ಈ ನಗರದ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸುವುದು ಸರ್ಕಾರದ ಜವಾಬ್ದಾರಿ ಹಾಗಾಗಿ ನಾವು ಈಗಾಗಲೇ ಹಲವು ಕಡೆ ಎಲಿವೇಟೆಡ್ ರಸ್ತೆಗಳು, ಸಬ್ ಅರ್ಬನ್ ರೈಲು ವ್ಯವಸ್ಥೆಯ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಮೆಟ್ರೋ ಕಾಮಗಾರಿಗೆ ಹೆಚ್ಚಿನ ವೇಗ ನೀಡಿದ್ದೇವೆ ಎಂದು ಅವರು ಹೇಳಿದರು.
ಹಗಲಿನಲ್ಲಿ ಪಂಪ್ಸೆಟ್ಗೆ 7 ಗಂಟೆ ವಿದ್ಯುತ್
ಈ ಬಾರಿ ಉತ್ತಮ ಮಳೆ ಆಗಿರುವ ಕಾರಣ ವಿದ್ಯುತ್ ಕೊರತೆ ಇರುವುದಿಲ್ಲ ಎಂದು ತಿಳಿಸಿದ ಸಿಎಂ. ನಮ್ಮ ರಾಜ್ಯವು ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಅನುಕೂಲ ಇದ್ದ ಜಿಲ್ಲೆಗಳಲ್ಲಿ ಹಗಲು ಹೊತ್ತಿನಲ್ಲೇ 7 ಗಂಟೆಗಳ ಕಾಲ ನೀರಾವರಿ ಪಂಪ್ಸೆಟ್ಗಳಿಗೆ ವಿದ್ಯುತ್ ನೀಡುವ ಯತ್ನ ಮಾಡುತ್ತೇವೆ ಎಂದು ಸಿಎಂ ಭರವಸೆ ನೀಡಿದರು. ಜೊತೆಗೆ ಸೋಲಾರ್ ವಿದ್ಯುತ್ ಬಳಕೆಗೆ ಹೆಚ್ಚು ಒತ್ತು ನೀಡುವಂತೆ ಅವರು ಮನವಿ ಮಾಡಿದರು.
ವಿವಿಧ ನಗರಗಳ ಅಭಿವೃದ್ಧಿ
ಬೆಂಗಳೂರು ಹೊರತುಪಡಿಸಿ ಎ ಗ್ರೇಡ್, ಬಿ ಗ್ರೇಡ್ ನಗರಗಳ ಅಭಿವೃದ್ಧಿಗೆ ವಿಶೇಷ ಕಾಳಜಿಯನ್ನು ಸರ್ಕಾರ ವಹಿಸಲಿದೆ. ಬಂಡಾವಳ ಹೂಡಿಕೆಯನ್ನು ವಿವಿಧ ನಗರಗಳಲ್ಲಿ ಹೂಡುವಂತೆ ಈಗಾಗಲೇ ಹಲವು ಸಂಸ್ಥೆಗಳಿಗೆ ಮನವಿ ಮಾಡಿದ್ದು, ಅದರಂತೆ, ಚಿಕ್ಕಬಳ್ಳಾಪುರ, ದಾವಣೆಗೆರೆ, ವಿಜಯಪುರ ಮುಂತಾದ ಜಿಲ್ಲೆಗಳಲ್ಲಿ ವಿವಿಧ ಸಂಸ್ಥೆಗಳ ನಿರ್ಮಾಣ ಘಟಕಗಳು ಪ್ರಾರಂಭವಾಗಲಿವೆ ಎಂದು ಅವರು ಹೇಳಿದರು.
ಒಟ್ಟಾಗಿ ಹೋದರೆ ಮಾತ್ರವೇ ಅಭಿವೃದ್ಧಿ
ಸರ್ಕಾರವು ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಯೋಜನೆಗಳನ್ನು, ರೂಪು ರೇಷೆಗಳನ್ನು ತಯಾರಿಸಿ ಅಣಿಯಾಗಿದೆ ಎಂದು ಹೇಳಿದ ಕುಮಾರಸ್ವಾಮಿ ಅವರು, ಸರ್ವರೂ ಒಟ್ಟಿಗೆ ಹೋದರೆ ಮಾತ್ರವೇ ಅಭಿವೃದ್ಧಿ ಸಾಧ್ಯ. ಸರ್ಕಾರವು ಎಲ್ಲರ ಸಹಕಾರ ಬಯಸುತ್ತದೆ. ನಮ್ಮದು ಮಾನವೀಯತೆ ಕೇಂದ್ರವಾಗಿರುವ ಸರ್ಕಾರ, ಮಾನವೀಯತೆಯೇ ನಮ್ಮ ಆಡಳಿತ ಧರ್ಮ ಎಂದು ಅವರು ಹೇಳಿದರು.