ಸರ್ಕಾರವನ್ನು ಟೀಕಿಸಿದ ಸದಾನಂದಗೌಡರಿಗೆ ಕುಮಾರಸ್ವಾಮಿ ಟ್ವೀಟ್ ಏಟು
ಬೆಂಗಳೂರು, ಜೂನ್ 04: ರಾಜ್ಯ ಸರ್ಕಾರವು ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ, ಕೇಂದ್ರದ ಅನುದಾನ ಬಳಸಿಕೊಳ್ಳುತ್ತಿಲ್ಲ, ನಿಧಾನ ಧೋರಣೆ ಅನುಸರಿಸುತ್ತಿದೆ ಎಂದು ಟೀಕಸಿದ್ದ ಕೇಂದ್ರ ಸಚಿವ ಸದಾನಂದಗೌಡರಿಗೆ ಸಿಎಂ ಕುಮಾರಸ್ವಾಮಿ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ಮೇಕೆ ದಾಟು ಯೋಜನೆಯ ಕಾರ್ಯಸಾಧ್ಯತಾ ಸೂಚಿಯನ್ನು ರಾಜ್ಯ ಸರ್ಕಾರ ಇನ್ನೂ ಸಲ್ಲಿಸಿಲ್ಲ, ಅಲ್ಲದೆ ಸಬ್ ಅರ್ಬನ್ ರೈಲಿನ ಅನುದಾನ ಪಡೆದುಕೊಳ್ಳಲು ಸಹ ರಾಜ್ಯ ಸರ್ಕಾರ ಮುಂದೆ ಬರುತ್ತಿಲ್ಲ ಎಂದು ಸದಾನಂದಗೌಡ ಅವರು ಟೀಕಿಸಿದ್ದರು.
ಸದಾನಂದಗೌಡ ಅವರ ಟೀಕೆಗೆ ಖಾರವಾಗಿಯೇ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ಅವರು, ಸದಾನಂದಗೌಡ ಅವರು ರಾಜ್ಯದ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲದೆ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದಿದ್ದಾರೆ.
|
ಈಗಾಗಲೇ ಕೇಂದ್ರಕ್ಕೆ ಸಲ್ಲಿಸಿದ್ದೇವೆ
ರಾಜ್ಯದ ಯೋಜನೆಗಳ ಬಗ್ಗೆ ಕೇಂದ್ರ ಸಚಿವ ಸದಾನಂದಗೌಡ ಅವರಿಗೆ ಮಾಹಿತಿ ಇಲ್ಲ. ಮೇಕೆದಾಟು ಯೋಜನೆಯ ಡಿಪಿಆರ್ ಮಾತ್ರವೇ ಅಲ್ಲ, ಅದರ ಕಾರ್ಯಸಾಧ್ಯತಾ ವರದಿಯನ್ನು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದೇವೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
|
ಸಬ್ ಅರ್ಬನ್ ರೈಲಿನ ಬಗ್ಗೆಯೂ ಮಾಹಿತಿ
ಸಬ್ ಅರ್ಬನ್ ರೈಲಿನ ಬಗ್ಗೆಯೂ ಮಾಹಿತಿ ನೀಡಿರುವ ಕುಮಾರಸ್ವಾಮಿ, ಸಬರ್ಬನ್ ರೈಲು ಯೋಜನೆಯ ಕುರಿತು ಫೆಬ್ರವರಿ ಕೊನೆಯ ವಾರದಲ್ಲಿ ಸ್ವತಃ ಈ ಹಿಂದಿನ ರೈಲ್ವೆ ಸಚಿವ ಪಿಯೂಷ್ ಘೋಯಲ್ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿ ಕಾರ್ಯಸಾಧ್ಯತಾ ವರದಿ ಅನುಮೋದನೆಗೆ ಸಂಬಂಧಿಸಿದ ಎಲ್ಲ ತೊಡಕುಗಳನ್ನು ನಿವಾರಿಸುವ ಕುರಿತು ಚರ್ಚೆ ನಡೆಸಿದ್ದರು ಎಂದು ಹೇಳಿದ್ದಾರೆ.
ಸಚಿವ ಸಂಪುಟ ಸಭೆಯ ಅನುಮೋದನೆ
ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ಆದೇಶ ಮಾರ್ಪಡಿಸಲು ಅನುಮೋದನೆ ನೀಡಲಾಗಿತ್ತು, ರೈಲ್ವೆ ಸಚಿವಾಲಯದ ಮೇ 28 ರ ಪತ್ರದಂತೆ ಎಸ್ ಪಿ ವಿ ರಚನೆಗೆ ಅಗತ್ಯ ಕ್ರಮ ವಹಿಸಲಾಗುತ್ತಿದೆ.
|
'ರಾಜಕೀಯ ಬೇಡ' ಎಂಬ ರಾಜಕೀಯ
ಯೋಜನೆಗಳ ವಿಷಯದಲ್ಲಿ 'ರಾಜಕೀಯ ಬೇಡ' ಎಂದು ಸದಾನಂದ ಗೌಡ ಅವರು ಹೇಳಿದ್ದರ ಬಗ್ಗೆ ಕುಟುಕಿರುವ ಕುಮಾರಸ್ವಾಮಿ, ನಿಜವಾಗಿಯೂ ಕಾಳಜಿ ಇದ್ದರೆ 'ರಾಜಕೀಯ ಬೇಡ' ಎನ್ನುವ ರಾಜಕೀಯ ಬಿಟ್ಟು ರಾಜ್ಯದ ಯೋಜನೆಗಳಿಗೆ ನೆರವು ಒದಗಿಸುವುದು ಉತ್ತಮ ಎಂದು ಹೇಳಿದ್ದಾರೆ.