ಗ್ರಾಮ ವಾಸ್ತವ್ಯ ಟೀಕಿಸಿದ ಯಡಿಯೂರಪ್ಪ: ಹಳೆ ಘಟನೆ ನೆನಪಿಸಿದ ಎಚ್ಡಿಕೆ
Recommended Video
ಬೆಂಗಳೂರು, ಜೂನ್ 24: ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ನಿರ್ಣಯ ಪ್ರಕಟಿಸಿದಾಗಿನಿಂದಲೂ ರಾಜ್ಯ ಬಿಜೆಪಿಯು ಅದನ್ನು ಟೀಕಿಸುತ್ತಲೇ ಬಂದಿದೆ. ಇಂದು ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯದ 'ಅವ್ಯವಸ್ಥೆ' ಬಗ್ಗೆ ಕಿರು ಪುಸ್ತವನ್ನು ಬಿಡುಗಡೆ ಮಾಡಿದೆ.
ಯಡಿಯೂರಪ್ಪ ಅವರೂ ಸಹ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯವನ್ನು ಲಘುವಾಗಿ ಟೀಕಿಸಿದ್ದು, ಗ್ರಾಮ ವಾಸ್ತವ್ಯವೊಂದು ಗಿಮಿಕ್ ಎಂದಿದ್ದಾರೆ. ಯಡಿಯೂರಪ್ಪ ಅವರ ಟೀಕೆಗೆ ಕುಮಾರಸ್ವಾಮಿ ಅವರು ಇಂದು ಖಡಕ್ ಆದ ಪ್ರತಿಕ್ರಿಯೆ ನೀಡಿದ್ದಾರೆ. ಅದೂ ಹಳೆಯ ಘಟನೆಯೊಂದನ್ನು ನೆನಪಿಸುವ ಮೂಲಕ.
ಬಂಡಿಹೊಳೆಯಲ್ಲಿನ ಸಿಎಂ ಗ್ರಾಮವಾಸ್ತವ್ಯ ಬಿಚ್ಚಿಟ್ಟ ನೆನಪುಗಳು...!
ಕುಮಾರಸ್ವಾಮಿ ಅವರು 2006 ರಲ್ಲಿ ಬಿಜೆಪಿ ಜೊತೆ ಮೈತ್ರಿಯೊಂದಿಗೆ ಮೊದಲ ಬಾರಿಗೆ ಸಿಎಂ ಆಗಿದ್ದಾಗ ಮೊದಲ ಬಾರಿಗೆ ಗ್ರಾಮ ವಾಸ್ತವ್ಯ ಪರಿಕಲ್ಪನೆ ಆರಂಭ ಮಾಡಿದ್ದರು, ಆಗ ಅದಕ್ಕೆ ಭಾರಿ ಜನಮನ್ನಣೆ ದೊರೆತಿತ್ತು, ಕುಮಾರಸ್ವಾಮಿ ಅವರಿಗೆ ಜನಪರ ಸಿಎಂ ಎಂಬ ಹೆಗ್ಗಳಿಕೆ ತಂದುಕೊಟ್ಟಿದ್ದು ಇದೇ ಕಾರ್ಯಕ್ರಮ, ಆಗ ಕುಮಾರಸ್ವಾಮಿ ಅವರ ಜೊತೆಗಿದ್ದಿದ್ದು ಬಿಜೆಪಿಯೇ!
ಯಡಿಯೂರಪ್ಪ 10 ಪ್ರಶ್ನೆಗೆ ಕುಮಾರಸ್ವಾಮಿ ಖಡಕ್ ಉತ್ತರಗಳು
ಆಗ ಉಪಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಅವರು ಒಂದು ಬಾರಿ ಕುಮಾರಸ್ವಾಮಿ ಅವರ ಜೊತೆಗೂಡಿಯೇ ಗ್ರಾಮ ವಾಸ್ತವ್ಯ ಮಾಡಿದ್ದರು. ಆ ಘಟನೆಯನ್ನು ಕುಮಾರಸ್ವಾಮಿ ಅವರು ಇಂದು ಯಡಿಯೂರಪ್ಪ ಅವರಿಗೆ ನೆನಪಿಸಿದ್ದಾರೆ.
ಜಂಟಿಯಾಗಿ ಗ್ರಾಮ ವಾಸ್ತವ್ಯ ಮಾಡಿದ್ದ ಎಚ್ಡಿಕೆ-ಬಿಎಸ್ವೈ
ಹಿಂದೆ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರದ ಅವಧಿಯಲ್ಲಿ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕು ಶ್ರೀರಾಮಪುರ ಗ್ರಾಮದಲ್ಲಿ ನಸುಕಿನ ಜಾವದ ವರೆಗೆ ನನ್ನೊಂದಿಗೆ ಗ್ರಾಮ ವಾಸ್ತವ್ಯ ಮಾಡಿದ್ದ ಯಡಿಯೂರಪ್ಪನವರಿಗೆ ಅಂದು ಸಿಹಿಯಾಗಿದ್ದು, ಇಂದು ಕಹಿಯಾಗಿರುವುದು ಏಕೆ? ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
'20 ತಿಂಗಳಲ್ಲಿ 47 ಗ್ರಾಮಗಳಲ್ಲಿ ವಾಸ್ತವ್ಯ ಮಾಡಿದ್ದೇನೆ'
ಯಡಿಯೂರಪ್ಪ ಅವರು ಇಂದು ನಾನು ಈ ಹಿಂದೆ ಗ್ರಾಮ ವಾಸ್ತವ್ಯ ಮಾಡಿದ್ದ ಗ್ರಾಮಗಳ ಬಗ್ಗೆ ಪುಸ್ತಕ ಬಿಡುಗಡೆ ಮಾಡಿದ್ದಾರೆ, ನಾನು ಇದಕ್ಕೆ ಮುಂಚಿತವಾಗಿಯೇ ಈ ಗ್ರಾಮಗಳ ಸ್ಥಿತಿಗತಿಯ ಬಗ್ಗೆ ಮಾಹಿತಿ ತರಿಸಿಕೊಂಡಿದ್ದೇನೆ. ನಾನು ಅಧಿಕಾರದಲ್ಲಿದ್ದ 20 ತಿಂಗಳ ಅವಧಿಯಲ್ಲಿ 47 ಗ್ರಾಮಗಳಲ್ಲಿ ವಾಸ್ತವ್ಯ ಮಾಡಿದ್ದೇನೆ. ಈ ಗ್ರಾಮಗಳಲ್ಲಿ ಮಾಡಲಾಗಿರುವ ಅಭಿವೃದ್ಧಿ ಕಾರ್ಯಕ್ರಮಗಳ ಪಟ್ಟಿಯನ್ನೂ ಲಗತ್ತಿಸಿದ್ದೇನೆ. ನನ್ನ ಗ್ರಾಮ ವಾಸ್ತವ್ಯದ ಪರಿಕಲ್ಪನೆ ಕೇವಲ ಆ ಗ್ರಾಮದ ಅಭಿವೃದ್ಧಿ ಮಾತ್ರವಲ್ಲ ಎಂದು ಹೇಳಿದ್ದಾರೆ.
ಚತುರ ದೇವೇಗೌಡರು ಲೆಕ್ಕ ತಪ್ಪಿದಾಗೆಲ್ಲ ಕುಮಾರಣ್ಣನ ಭವಿಷ್ಯಕ್ಕೆ ಹೊಡೆತ
ಗ್ರಾಮ ವಾಸ್ತವ್ಯದಿಂದ ಹಲವು ಸಮಸ್ಯೆಯ ಅರಿವಾಗಿದೆ
ಸ್ಥಳೀಯವಾಗಿ ಜನರ ವೈಯಕ್ತಿಕ ಸಮಸ್ಯೆಗಳಿಗೂ, ಸ್ಥಳದಲ್ಲಿಯೇ ಪರಿಹಾರ ದೊರಕಿಸುವುದು, ಜನರ ಆಶಯಗಳನ್ನು ಅರ್ಥೈಸಿಕೊಂಡು ಯೋಜನೆಗಳನ್ನು ರೂಪಿಸುವುದು, ಜನರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ದೊರಕಿಸಲು ಇರುವ ತೊಡಕುಗಳನ್ನು ನಿವಾರಿಸುವುದು ಗ್ರಾಮ ವಾಸ್ತವ್ಯದಿಂದ ಸಾಧ್ಯ. ರೈತರ ಸಾಲ ಮನ್ನಾ, ಸಾರಾಯಿ ನಿಷೇಧ, ಲಾಟರಿ ನಿಷೇಧ, ಸುವರ್ಣ ಗ್ರಾಮ ಯೋಜನೆ, ಸಾವಿರಕ್ಕೂ ಹೆಚ್ಚು ಶಾಲಾ ಕಾಲೇಜುಗಳ ಸ್ಥಾಪನೆ, 40 ಸಾವಿರಕ್ಕೂ ಹೆಚ್ಚು ಶಿಕ್ಷಕರ ನೇಮಕ ಮೊದಲಾದ ಉಪಕ್ರಮಗಳಿಗೆ ಪ್ರೇರಣೆ ನನ್ನ ಗ್ರಾಮ ವಾಸ್ತವ್ಯದ ಅನುಭವಗಳು. ನಾನು ತಂಗಿದ ಗ್ರಾಮಗಳಲ್ಲಿ ಕೆಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲು ಸಾಧ್ಯವಾಗಿದೆ. ಆದರೆ ನಂತರದ ದಿನಗಳಲ್ಲಿ ಸನ್ಮಾನ್ಯ ಯಡಿಯೂರಪ್ಪನವರು ಮುಖ್ಯಮಂತ್ರಿ ಆದಾಗ ಈ ಗ್ರಾಮಗಳಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆಂಬ ಮಾಹಿತಿ ನೀಡಲಿ ಎಂದು ಸವಾಲು ಹಾಕಿದ್ದಾರೆ..
'ಗ್ರಾಮ ವಾಸ್ತವ್ಯ ಪ್ರಚಾರದ ಗಿಮಿಕ್ ಅಲ್ಲ'
ಗ್ರಾಮ ವಾಸ್ತವ್ಯ ಪ್ರಚಾರದ ಗಿಮಿಕ್ ಅಲ್ಲ. ಅಂತಃಕರಣ, ಮಾನವೀಯತೆ, ತಾಯಿ ಹೃದಯದಿಂದ ಸಮಸ್ಯೆ ಬಗೆಹರಿಸುವ ಇಚ್ಛಾಶಕ್ತಿ ಇದ್ದಲ್ಲಿ ಮಾತ್ರ ಗ್ರಾಮ ವಾಸ್ತವ್ಯ ಸಾಧ್ಯ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
'ವೈಯಕ್ತಿಕ ವಿಷಯಗಳ ಬಗ್ಗೆ ಮಾತು ಬೇಡ'
ಆಡಳಿತಾತ್ಮಕ ವಿಚಾರಗಳಿಗೆ ರಚನಾತ್ಮಕವಾಗಿ ಟೀಕೆ ಮಾಡಿದಲ್ಲಿ, ನಾನು ಅವುಗಳನ್ನು ಗಂಭೀರವಾಗಿ ಪರಿಗಣಿಸಿ, ಕ್ರಮ ಕೈಗೊಳ್ಳುತ್ತೇನೆ. ಆದರೆ ಸರ್ಕಾರದ ವ್ಯಾಪ್ತಿಗೆ ಬಾರದ ನನ್ನ ವೈಯಕ್ತಿಕ ವಿಷಯಗಳ ಬಗ್ಗೆ ಪದೇ ಪದೇ ಮಾತನಾಡಿ, ವಿರೋಧ ಪಕ್ಷದ ನಾಯಕರ ಸ್ಥಾನದ ಘನತೆಗೆ ಕುಂದು ತರಬಾರದೆಂದು ಯಡಿಯೂರಪ್ಪ ಅವರಿಗೆ ಸಿಎಂ ಮನವಿ ಮಾಡಿದ್ದಾರೆ.