ಸಿಎಂ ಕುಮಾರಸ್ವಾಮಿ- ಡಿಸಿಎಂ ಪರಮೇಶ್ವರ್ ಗುಪ್ತ ಮಾತುಕತೆ
ಬೆಂಗಳೂರು, ಮೇ 27: ಸಿಎಂ ಕುಮಾರಸ್ವಾಮಿ ಮತ್ತು ಡಿಸಿಎಂ ಪರಮೇಶ್ವರ್ ಅವರು ಇಂದು ಬಹುಸಮಯ ಗುಪ್ತವಾಗಿ ಚರ್ಚೆ ನಡೆಸಿದರು.
ವಿಧಾನಸೌಧದ ಆವರಣದಲ್ಲಿ ಆಯೋಜಿಸಿದ್ದ, ಜವಹಾರ್ಲಾಲ್ ನೆಹರು ಅವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕುಮಾರಸ್ವಾಮಿ-ಪರಮೇಶ್ವರ್ ಅವರು ಕಾರ್ಯಕ್ರಮದ ನಂತರ ಬಹುಸಮಯ ಮಾತುಕತೆಯಲ್ಲಿ ನಿರತರಾಗಿದ್ದರು.
ಮೈತ್ರಿ ಸರ್ಕಾರದ ಸಂಪುಟ ಸೇರುವ ಸಂಭಾವ್ಯ ಶಾಸಕರ ಪಟ್ಟಿ
ಕಾರ್ಯಕ್ರಮದ ಬಳಿಕ ವಿಧಾನಸೌಧದ ಆವರಣದಲ್ಲಿನ ನೆಹರು ಪ್ರತಿಮೆಯ ಹಿಂಬಾಗ ಮರದ ನೆರಳಿನಲ್ಲಿ ಕುಮಾರಸ್ವಾಮಿ ಮತ್ತು ಪರಮೇಶ್ವರ್ ಅವರು ಬಹು ಸಮಯ ಏಕಾಂತದಲ್ಲಿ ಚರ್ಚೆ ಮಾಡಿದರು.
ಸಾಕಷ್ಟು ಮಂದಿ ಶಾಸಕರು ಇತರ ಮುಖಂಡರು ಸ್ಥಳದಲ್ಲಿ ಹಾಜರಿದ್ದರೂ ಸಹ ಈ ಇಬ್ಬರೇ ಗುಂಪಿನಿಂದ ಹೊರಹೋಗಿ ಮರದ ಕೆಳಗೆ ನಿಂತು ಮಾತುಕತೆ ನಡೆಸಿದರು. ಇಬ್ಬರೂ ಆತಂಕದಲ್ಲಿದ್ದಂತೆ ಅವರ ಮುಖಚರ್ಯೆಯಿಂದ ಗೊತ್ತಾಗುತ್ತಿತ್ತು. ಇಬ್ಬರು ಸುಮಾರು ಅರ್ಧ ಗಂಟೆವರೆಗೂ ಗಹನವಾಗಿ ಚರ್ಚೆ ನಡೆಸಿದ್ದು ಹಲವು ಮಾಧ್ಯಮಗಳಲ್ಲಿ ದೃಶ್ಯ ಸಹಿತ ಪ್ರಸಾರವಾಯಿತು.
ಕುಮಟಳ್ಳಿ ಜೊತೆ ಬಹುಸಮಯ ಚರ್ಚೆ
ಕಾಂಗ್ರೆಸ್ ನ ಅತೃಪ್ತ ಶಾಸಕ ಮಹೇಶ್ ಕುಮಟಳ್ಳಿ ಅವರ ಜೊತೆ ಸಹ ಇದೇ ಸಮಯದಲ್ಲಿ ಇಬ್ಬರೂ ಮುಖಂಡರು ಚರ್ಚೆ ನಡೆಸಿದರು. ಕುಮಾರಸ್ವಾಮಿ-ಪರಮೇಶ್ವರ್ ಅವರು ಮಾತನಾಡುತ್ತಿದ್ದ ಜಾಗಕ್ಕೆ ಮಹೇಶ್ ಕುಮಟಳ್ಳಿ ಅವರನ್ನು ಕರೆದ ಸಿಎಂ-ಡಿಸಿಎಂ ಬಹಳ ಸಮಯ ಅವರೊಂದಿಗೂ ಚರ್ಚೆ ನಡೆಸಿದರು.
ಅತೃಪ್ತರ ಗುಂಪು ಸೇರಿರುವ ಸುಧಾಕರ್
ನಿನ್ನೆಯಷ್ಟೆ ಕಾಂಗ್ರೆಸ್ ಶಾಸಕ ಸುಧಾಕರ್ ಅವರು, ರಮೇಶ್ ಜಾರಕಿಹೊಳಿ ಅವರೊಟ್ಟಿಗೆ ಎಸ್.ಎಂ.ಕೃಷ್ಣ ಮನೆಯಲ್ಲಿ ಕಾಣಿಸಿಕೊಂಡಿರುವುದು ಮೈತ್ರಿ ಸರ್ಕಾರಕ್ಕೆ ಆತಂಕ ತಂದಿದೆ. ಹಾಗಾಗಿಯೇ ಇಂದು ಸಿಎಂ-ಡಿಸಿಎಂ ಬಹು ಸಮಯ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಮೈತ್ರಿ ಸರ್ಕಾರದ ಸಂಪುಟ ಪುನಾರಚನೆ : 6 ಸಚಿವರು ಸಂಪುಟದಿಂದ ಔಟ್
ಮಹೇಶ್ ಕುಮಟಳ್ಳಿ ಜೊತೆಗೂ ಚರ್ಚೆ
ಮಹೇಶ್ ಕುಮಟಳ್ಳಿ ಅವರೊಂದಿಗೆ ಸಿಎಂ-ಡಿಸಿಎಂ ನಡೆಸಿದ ಚರ್ಚೆ ಕುತೂಹಲ ಕೆರಳಿಸಿದ್ದು, ಮಹೇಶ್ ಕುಮಟಳ್ಳಿ ಅವರೊಟ್ಟಿಗೆ ಸಿಎಂ-ಡಿಸಿಎಂ ಇಬ್ಬರೂ ನಗು-ನಗುತ್ತಾ ಮಾತನಾಡುತ್ತಿದ್ದುದು ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಕುಮಟಳ್ಳಿ ಅವರು ಸಹ ಬಹು ಸಮಯ ಇಬ್ಬರೂ ನಾಯಕರೊಟ್ಟಿಗೆ ಮಾತನಾಡಿದರು.
ಸಚಿವ ಸಂಪುಟ ಮರುವಿಸ್ತರಣೆ ಬಗ್ಗೆ ಚರ್ಚೆ
ಸಚಿವ ಸಂಪುಟ ಪುನರ್ವಿಸ್ತರಣೆ ಮಾಡುವ ಎಲ್ಲ ಸಾಧ್ಯತೆ ಇದ್ದು, ಆ ಬಗ್ಗೆಯೂ ಸಿಎಂ-ಡಿಸಿಎಂ ಅವರುಗಳು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಮಹೇಶ್ ಕುಮಟಳ್ಳಿ ಅವರೊಂದಿಗೂ ಇದೇ ಚರ್ಚೆ ಮಾಡಿ, ಅವರನ್ನು ಸಚಿವ ಸ್ಥಾನಕ್ಕೆ ಒಪ್ಪಿಸುವ ಪ್ರಯತ್ನವನ್ನು ಸಿಎಂ-ಡಿಸಿಎಂ ಮಾಡಿದ್ದಾರೆ. ಮೂಲಗಳ ಪ್ರಕಾರ ಮಹೇಶ್ ಕುಮಟಳ್ಳಿ ಅವರು ಸಿಎಂ-ಡಿಸಿಎಂ ಅವರ ಆಫರ್ಗೆ ಒಪ್ಪಿದ್ದಾರೆ ಎನ್ನಲಾಗಿದೆ.