ಎಚ್ಡಿಕೆ- ನಿತಿನ್ ಗಡ್ಕರಿ ಮಹತ್ವದ ಸಭೆ: ಯಾವ ಯಾವ ಹೆದ್ದಾರಿಗೆ ರಾಜ್ಯದಿಂದ ಮನವಿ
ನವದೆಹಲಿ, ಜುಲೈ 18: ಕೇಂದ್ರ ಭೂಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರೊಂದಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ಮಹತ್ವದ ಸಭೆಯನ್ನು ನಡೆಸಿದ್ದಾರೆ.
ಮಂಗಳವಾರ (ಜುಲೈ 17) ಗಡ್ಕರಿಯವರನ್ನು ಭೇಟಿಯಾದ ಸಿಎಂ, ರಾಜ್ಯದ ವಿವಿಧ ಹೆದ್ದಾರಿಗಳ ಕಾಮಗಾರಿಯ ವಿಚಾರದಲ್ಲಿ ಮಾತುಕತೆ ನಡೆಸಿದ್ದಾರೆ. ರಾಜ್ಯದ, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಕುರಿತಂತೆ ಮುಖ್ಯಮಂತ್ರಿಗಳು ಜೂನ್ 18 ರಂದು ಖುದ್ದಾಗಿ ದೆಹಲಿಗೆ ಆಗಮಿಸಿ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು.
ಈ ವೇಳೆ, ಗಡ್ಕರಿ ರಾಜ್ಯದಲ್ಲಿನ ವಿವಿಧ ಹೆದ್ದಾರಿ ಕಾಮಗಾರಿಗಳಿಗೆ ಅಡಚಣೆ ಉಂಟಾಗಿರುವ ಬಗ್ಗೆ ಸಿಎಂ ಗಮನಕ್ಕೆ ತಂದು ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಸಾಧಿಸುವಂತೆ ಕೋರಿದ್ದರು. ಗಡ್ಕರಿ ಭೇಟಿಯ ಸಂದರ್ಭದಲ್ಲಿ ಕಂದಾಯ, ಇಂಧನ ಇಲಾಖೆ, ಅರಣ್ಯ ಇಲಾಖೆ ಹಾಗೂ ಇನ್ನಿತರ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು ಸಿಎಂ ಜೊತೆಗಿದ್ದರು.
ಬೆಂಗಳೂರು-ಮೈಸೂರು ಷಟ್ಪಥ ಹೆದ್ದಾರಿ: ನಿತಿನ್ ಗಡ್ಕರಿ ಶಂಕುಸ್ಥಾಪನೆ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕೈಗೊಂಡಿರುವ ಹೆದ್ದಾರಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಇರುವ ಅಡಚಣೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರಿಗೆ ಸಿಎಂ ತಿಳಿಸಿದರು. ಅಲ್ಲದೆ, ಕೇಂದ್ರದ ಕೋರಿಕೆಯಂತೆ ಮೇಲ್ವಿಚಾರಣೆ ದರವನ್ನು ಶೇ. 10 ರಿಂದ ಶೇ. 2.5ಕ್ಕೆ ಇಳಿಸಲು ಈಗಾಗಲೇ, ಸರಕಾರೀ ಆದೇಶವನ್ನು ಹೊರಡಿಸಲಾಗಿದೆ.
ಅರಣ್ಯ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣ ಕಾಮಗಾರಿಗಾಗಿ ಮರಗಳನ್ನು ತೆರವುಗೊಳಿಸಲು ಮತ್ತು ಅಗತ್ಯಬಿದ್ದಲ್ಲಿ ಅರಣ್ಯ ಭೂಮಿಯನ್ನು ನಿಯಮಾನುಸಾರ ನೀಡಲು ಸೂಕ್ತ ಕ್ರಮಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದು ಸಿಎಂ ಕೇಂದ್ರ ಸಚಿವರಿಗೆ ವಿವರಿಸಿದರು.
ರಾಹುಲ್ ಗಾಂಧಿ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ : ಎಚ್.ಡಿ.ಕುಮಾರಸ್ವಾಮಿ ಸಂದರ್ಶನ
ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲು ಇರುವ ಅಡಚಣೆಗಳನ್ನು ನಿವಾರಿಸಲು ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಂಬಂಧಿಸಿದ ಇಲಾಖೆಗೊಳಿಂದಿಗೆ ಸಭೆ ನಡೆಸಿ ಅಡಚಣೆಗಳನ್ನು ನಿವಾರಿಸುವಂತೆ ಸೂಚಿಸಿದ್ದೇನೆ ಎಂದು ಸಿಎಂ ಹೇಳಿದ್ದಾರೆ. ರಾಜ್ಯ ಸರಕಾರದಿಂದ, ಕೇಂದ್ರ ಸಚಿವರಿಗೆ ಸಲ್ಲಿಸಲಾದ ಮನವಿಯ ವಿವರ, ಮುಂದೆ ಓದಿ..
ಹೊಳೇನರಸೀಪುರ - ಅರಕಲಗೂಡು - ಕೊಡ್ಲಿಪೇಟೆ ಮಾರ್ಗವಾಗಿ ಮಡಿಕೇರಿ
ಚನ್ನರಾಯಪಟ್ಟದಿಂದ ಹೊಳೇನರಸೀಪುರ - ಅರಕಲಗೂಡು - ಕೊಡ್ಲಿಪೇಟೆ ಮಾರ್ಗವಾಗಿ ಮಡಿಕೇರಿ ಸೇರುವ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದಜರ್ಗೇರಿಸಲು ಕೇಂದ್ರ ಭೂಸಾರಿಗೆ ಇಲಾಖೆ ತಾತ್ವಿಕವಾಗಿ ಒಪ್ಪಿಗೆ ನೀಡಿದೆ. ಈ ಮಾರ್ಗದ ನಿರ್ಮಾಣಕ್ಕಾಗಿ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಿ ಸಲ್ಲಿಸುವಂತೆ ಸಚಿವ ನಿತಿನ್ ಗಡ್ಕರಿ ಸೂಚಿಸಿದ್ದಾರೆ. ಅದರಂತೆ ಈ ಮಾರ್ಗಕ್ಕೆ ಸಂಬಂಧಿಸಿದ ನೀಲನಕ್ಷೆಯನ್ನು ಸಿದ್ಧಪಡಿಸಿ, ಅದಕ್ಕೆ ಕೇಂದ್ರದ ಅನುಮೋದನೆಗೆ ಮನವಿ.
ಬಿಳಿಕೆರೆ - ಕೆ ಆರ್ ನಗರ - ಹೊಳೆನರಸೀಪುರ - ಹಾಸನ ಮಾರ್ಗವಾಗಿ ಸಾಗುವ ಬೇಲೂರು
ಕೇಂದ್ರ ಭೂಸಾರಿಗೆ ಇಲಾಖೆ ಬಿಳಿಕೆರೆ - ಕೆ ಆರ್ ನಗರ - ಹೊಳೆನರಸೀಪುರ - ಹಾಸನ ಮಾರ್ಗವಾಗಿ ಸಾಗುವ ಬೇಲೂರು ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿ 373 ಎಂದು ಘೋಷಿದೆ. ಈ ರಾಷ್ಟ್ರೀಯ ಹೆದ್ದಾರಿ ಒಂದು ಭಾಗಕ್ಕೆ ಕೇಂದ್ರವು ಅನುಮೋದನೆ ನೀಡಿದೆ. ಅಲ್ಲದೆ, ಇದಕ್ಕಾಗಿ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ.
ಬೆಂಗಳೂರು - ಹಾಸನ ರಾಷ್ಟ್ರೀಯ ಹೆದ್ದಾರಿ 48
ಬೆಂಗಳೂರು - ಹಾಸನ ರಾಷ್ಟ್ರೀಯ ಹೆದ್ದಾರಿ 48ರ ನಾಲ್ಕು ಪಥಗಳ ರಸ್ತೆ ಕಾಮಗಾರಿಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪೂರ್ಣಗೊಳಿಸಿ, ವಾಹನ ಸಂಚಾರಕ್ಕೆ ತೆರವುಗೊಳಿದೆ. ಈ ಮಾರ್ಗದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿ, ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಈ ದೃಷ್ಟಿಯಿಂದ ಈ ರಾಷ್ಟ್ರೀಯ ಹೆದ್ದಾರಿ ಮಾರ್ಗವನ್ನು 'ಆಕ್ಸಸ್ ಕಂಟ್ರೋಲ್' ಹಾಗೂ ಎರಡೂ ಬದಿಗಳಲ್ಲಿ ಸರ್ವೀಸ್ ರಸ್ತೆಗಳನ್ನು ನಿರ್ಮಿಸುವಂತೆ ಮನವಿ.
ಹಾಸನ ಬೈಪಾಸ್ ಮಾರ್ಗದಲ್ಲಿ ಸಂಚಾರ ದಟ್ಟಣೆ
ರಾಷ್ಟ್ರೀಯ ಹೆದ್ದಾರಿ 48ನೇ ಚನ್ನರಾಯಪಟ್ಟಣ ಹಾಗೂ ಹಾಸನ ಬೈಪಾಸ್ ಮಾರ್ಗವು ಸಹ ದ್ವಿಪಥವಾಗಿದ್ದು, ಇಲ್ಲಿಯೂ ಸಂಚಾರ ದಟ್ಟಣೆ ಅಧಿಕವಾಗಿದ್ದು, ಅಪಘಾತಗಳು ಹೆಚ್ಚಾಗುತ್ತಿವೆ. ಪ್ರಮುಖ ಮಾರ್ಗಗಳಲ್ಲಿರುವ ಜಂಕ್ಷನ್ ಗಳಲ್ಲಿ ಮೇಲುಸೇತುವ ಇಲ್ಲದಿರುವ ಕಾರಣ ಸಂಚಾರ ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ, ಈ ಮಾರ್ಗವನ್ನು ನಾಲ್ಕು ಪಥದ ಹಾಗೂ ಸೂಕ್ತ ಕಡೆಗಳಲ್ಲಿ ಮೇಲುಸೇತುವೆಗಳನ್ನು ನಿರ್ಮಾಣ ಮಾಡುವಂತೆ ಮನವಿ.
ಮಡಿಕೇರಿಯಿಂದ ಬಂಟ್ವಾಳ ಮಾರ್ಗ (ಬಿ.ಸಿ. ರೋಡ್) ರಾಷ್ಟ್ರೀಯ ಹೆದ್ದಾರಿ 275
ಬೆಂಗಳೂರು - ಮೈಸೂರು - ಮಡಿಕೇರಿಯಿಂದ ಬಂಟ್ವಾಳ ಮಾರ್ಗ (ಬಿ.ಸಿ. ರೋಡ್) ರಾಷ್ಟ್ರೀಯ ಹೆದ್ದಾರಿ 275 ಎಂದು ಘೋಷಣೆಯಾಗಿದೆ. ಈ ಹೆದ್ದಾರಿಯ ಪೈಕಿ ಬೆಂಗಳೂರ - ಮೈಸೂರು ಮಾರ್ಗದ ಆರು ಪಥಗಳ ಕಾಮಗಾರಿಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪ್ರಾರಂಭಿಸಿದೆ. ಮೈಸೂರಿನಿಂದ ಮಡಿಕೇರಿ ವರೆಗಿನ ಮಾರ್ಗಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕ್ರಿಯಾಯೋಜನೆಯನ್ನು ಸಿದ್ಧಪಡಿಸುತ್ತಿದೆ. ಮಡಿಕೇರಿಯಿಂದ ಬಿ.ಸಿ. ರೋಡ್ ವರೆಗಿನ ಮಾರ್ಗದ ಕಾಮಗಾರಿಗಳನ್ನು ಶೀಘ್ರವಾಗಿ ಪ್ರಾರಂಭಿಸಲು ಅನುವಾಗುವಂತೆ ಕ್ರಿಯಾಯೋಜನೆಯನ್ನು ಸಿದ್ಧಪಡಿಸಲು ಸಂಬಂಧಿಸಿದವರಿಗೆ ಸೂಚಿಸುವಂತೆ ಮನವಿ.
ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗಿದೆ
ಕೇಂದ್ರ ರಸ್ತೆ ನಿಧಿಯ (ಸಿಆರ್ಎಫ್) ಅನುದಾನದಿಂದ ರಾಜ್ಯದಲ್ಲಿ ಹಲವಾರು ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗಿದೆ. ರಾಜ್ಯದ ಪಾಲಿನ ಅನುದಾನವನ್ನು ಬಿಡುಗಡೆ ಮಾಡುವಂತೆ ಸಚಿವರಿಗೆ ಮನವಿ ಮಾಡಿದ ವೇಳೆಯಲ್ಲಿ ರಸ್ತೆ ಕಾಮಗಾರಿಗಳು ಪೂರ್ಣಗೊಂಡಿರುವುದನ್ನು ಪುಷ್ಟೀಕರಿಸುವ ಬಳಕೆ ಪ್ರಮಾಣಪತ್ರವನ್ನು ಸಲ್ಲಿಸಿದ ತಕ್ಷಣವೇ ರಾಜ್ಯದ ಪಾಲಿನ ಅನುದಾವನ್ನು ಬಿಡುಗಡೆ ಮಾಡುವುದಾಗಿ ಕೇಂದ್ರ ಸಚಿವರಿಂದ ಭರವಸೆ.
ಈ ಮಾರ್ಗವು ವನ್ಯಜೀವಿಗಳಿರುವ ಪ್ರದೇಶದಲ್ಲಿ ಹಾದುಹೋಗುತ್ತದೆ
ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 212 ಕರ್ನಾಟಕ ಮತ್ತು ಕೇರಳವನ್ನು ಬೆಸೆಯುತ್ತದೆ. ಈ ಮಾರ್ಗವು ವನ್ಯಜೀವಿಗಳಿರುವ ಪ್ರದೇಶದಲ್ಲಿ ಹಾದುಹೋಗುತ್ತದೆ. ಈ ಮಾರ್ಗದ ಕಾಮಗಾರಿಗೆ ಸಂಬಂಧಿಸಿದಂತೆ ಪ್ರಕರಣವು ಸುಪ್ರೀಂಕೋರ್ಟಿನಲ್ಲಿದೆ. ಸುಮಾರು 5 ಕಿ.ಮೀ ಮಾರ್ಗವನ್ನು ಮೇಲುಸೇತುವೆ ಹೆದ್ದಾರಿಯನ್ನಾಗಿಸಿ, ಕೆಳಭಾಗದಲ್ಲಿ ಪ್ರಾಣಿಗಳಿಗೆ ಅಡಚಣೆ ಇಲ್ಲದಂತೆ ಸಂಚರಿಸಲು ಅನುಮಾಡಿಕೊಡಲು ಕೇಂದ್ರ ಸರಕಾರ ಉತ್ಸುಕವಾಗಿದೆ. ಈ ಬಗ್ಗೆ ಕರ್ನಾಟಕ ಮತ್ತು ಕೇರಳ ಸರಕಾರಗಳು ಒಮ್ಮತದಿಂದ ಚರ್ಚಿಸಿಕೊಂಡು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದಲ್ಲಿ ಮೇಲುಸೇತುವೆ ಮಾರ್ಗವನ್ನು ನಿರ್ಮಿಸಲಾಗುವುದು - ಕೇಂದ್ರ ಸಚಿವ ನಿತಿನ್ ಗಡ್ಕರಿ.