ರೇಷ್ಮೆ ದಿರಿಸಿನಲ್ಲಿ ಕುಮಾರಸ್ವಾಮಿ ಪ್ರಮಾಣವಚನ
ಬೆಂಗಳೂರು, ಮೇ 21: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿರುವ ಎಚ್.ಡಿ. ಕುಮಾರಸ್ವಾಮಿ ಅವರು, ಆ ದಿನದಂದು ರೇಷ್ಮೆಯ ಉಡುಪು ಧರಿಸಿರಲಿದ್ದಾರೆ.
ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಧರಿಸಲು ಕುಮಾರಸ್ವಾಮಿ ಅವರು ರೇಷ್ಮೆಯ ಅಂಗಿ ಮತ್ತು ರೇಷ್ಮೆಯ ಪಂಚೆ ಖರೀದಿ ಮಾಡಿದ್ದಾರೆ. ಪ್ರಮಾಣವಚನ ಸ್ವೀಕಾರ ಮಾಡುವಾಗ ಅವರು ಚಪ್ಪಲಿ ಧರಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಅಧಿಕಾರ ಹಂಚಿಕೆ ವರದಿ ಊಹಾಪೋಹ: ಕುಮಾರಸ್ವಾಮಿ
2006ರಲ್ಲಿ ಧರಂಸಿಂಗ್ ಸರ್ಕಾರವನ್ನು ಉರುಳಿಸಿ ಬಿಜೆಪಿ ಜತೆಗೂಡಿ ಸರ್ಕಾರ ರಚಿಸಿದ್ದ ಕುಮಾರಸ್ವಾಮಿ ಅವರು ಆಗಲೂ ಸಾಮಾನ್ಯ ದಿರಿಸಿನಲ್ಲಿಯೇ ಪ್ರಮಾಣವಚನ ಸ್ವೀಕರಿಸಿದ್ದರು.
ಬಿಳಿ ಸಫಾರಿ ಮತ್ತು ಅದರ ಮೇಲೆ ಹಸಿರು ಶಾಲು ಧರಿಸಿ ಬಿ.ಎಸ್. ಯಡಿಯೂರಪ್ಪ ಅವರು ನಾಲ್ಕು ದಿನಗಳ ಹಿಂದೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
|
ರಜನಿಕಾಂತ್ಗೆ ಆಹ್ವಾನ
ಕರ್ನಾಟಕಕ್ಕೆ ಬಂದು ಇಲ್ಲಿನ ಜಲಾಶಯಗಳ ಪರಿಸ್ಥಿತಿಯನ್ನು ಖುದ್ದಾಗಿ ವೀಕ್ಷಿಸುವಂತೆ ನಟ ರಜನಿಕಾಂತ್ ಅವರಿಗೆ ಆಹ್ವಾನ ನೀಡಿದ್ದೇನೆ ಎಂದು ನಿಯೋಜಿತ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ತಮಿಳುನಾಡಿಗೆ ಕಾವೇರಿಯ ಪಾಲನ್ನು ಕರ್ನಾಟಕ ಬಿಡುಗಡೆ ಮಾಡಬೇಕು ರಜನಿಕಾಂತ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಖುದ್ದಾಗಿ ಇಲ್ಲಿಗೆ ಬಂದು ಜಲಾಶಯದ ಸ್ಥಿತಿ ನೋಡುವಂತೆ ರಜನಿಕಾಂತ್ ಅವರಿಗೆ ಆಹ್ವಾನ ನೀಡಿದ್ದೇನೆ. ಇಲ್ಲಿ ಸಾಕಷ್ಟು ನೀರಿಲ್ಲ. ಅವರು ಅರ್ಥಮಾಡಿಕೊಳ್ಳಬಲ್ಲರು ಎಂದು ಭರವಸೆ ಹೊಂದಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.
ಕಾಂಗ್ರೆಸ್-ಜೆಡಿಎಸ್ ಸರ್ಕಾರ: ಕಗ್ಗಂಟಾಗಲಿದೆಯೇ ಖಾತೆ ಹಂಚಿಕೆ?
ಐದು ವರ್ಷ ಸುಭದ್ರ ಆಡಳಿತ
ಇದು ತಾತ್ಕಾಲಿಕ ಸರ್ಕಾರವಲ್ಲ. ಐದು ವರ್ಷ ಸುಭದ್ರ ಆಡಳಿತ ನೀಡುವ ಗುರಿ ಹೊಂದಿದ್ದೇನೆ. ಉತ್ತಮ ಆಡಳಿತ ನೀಡುವ ಜವಾಬ್ದಾರಿ ನನ್ನ ಮೇಲಿದೆ. ಈ ಬಾರಿ ಸಮ್ಮಿಶ್ರ ಸರ್ಕಾರವನ್ನು ನಿಭಾಯಿಸುವುದು ದೊಡ್ಡ ಸವಾಲು. ಇದಕ್ಕೆ ಎಲ್ಲರ ಸಹಕಾರ ಅಗತ್ಯ. ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಪ್ರಯತ್ನಿಸುತ್ತೇನೆ.
'ಮಹಾಮೈತ್ರಿ'ಗೆ ವೇದಿಕೆಯಾಗಲಿದೆ ಕುಮಾರಸ್ವಾಮಿ ಪದಗ್ರಹಣ
'ನಿದ್ದೆಗೆಡಿಸಲು ಯಾರಿಂದಲೂ ಸಾಧ್ಯವಿಲ್ಲ'
ನನ್ನ ನಿದ್ದೆಗೆಡಿಸಲು ಯಾರಿಂದಲೂ ಸಾಧ್ಯವಿಲ್ಲ. ಬಿಜೆಪಿ ನಿದ್ದೆಗೆಡುವಂತೆ ನಾನು ಮಾಡುತ್ತೇನೆ ಎಂದು ಬಿಜೆಪಿ ಶಾಸಕ ಶ್ರೀರಾಮುಲು ಅವರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. ಕುಮಾರಸ್ವಾಮಿ ಅವರು ನಿದ್ದೆ ಮಾಡಲು ನಾವು ಬಿಡುವುದಿಲ್ಲ ಎಂದು ಶ್ರೀರಾಮುಲು ಹೇಳಿಕೆ ನೀಡಿದ್ದರು.
ಪ್ರತಿಯೊಬ್ಬರ ಅಭಿಪ್ರಾಯಗಳನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ನನ್ನ ನಿದ್ದೆಗೆಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಮಾಧ್ಯಮಗಳ ಸೃಷ್ಟಿ
ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲವೂ ಮಾಧ್ಯಮಗಳ ಸೃಷ್ಟಿ. ಸಾಮಾಜಿಕ ಜಾಲತಾಣ, ಪತ್ರಿಕೆಗಳಲ್ಲಿ ಬರುವ ಬರಹಗಳನ್ನು ಓದಿ ಮೆದುಳಿನಲ್ಲಿ ತುಂಬಿಸಿಕೊಂಡಿದ್ದೇನೆ. ಅದಕ್ಕೆ ಸೂಕ್ತ ಉತ್ತರವನ್ನು ಮುಂದಿನ ದಿನಗಳಲ್ಲಿ ನೀಡುತ್ತೇನೆ ಎಂದು ಹೇಳಿದರು.
ದೆಹಲಿಗೆ ತೆರಳಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರೊಂದಿಗೆ ಚರ್ಚಿಸಲಿದ್ದೇನೆ. ಬಿಎಸ್ಪಿ ನಾಯಕಿ ಮಾಯಾವತಿ ಅವರನ್ನೂ ಭೇಟಿ ಮಾಡಲಿದ್ದೇನೆ ಎಂದರು.
|
ಪೂಜೆ ಸಲ್ಲಿಕೆ
ನಿಯೋಜಿತ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪತ್ನಿ ಅನಿತಾ ಅವರೊಂದಿಗೆ ಹಾಸನದ ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಹೊಳೆ ನರಸೀಪುರದ ಲಕ್ಷ್ಮಿ ನರಸಿಂಹ ದೇವಸ್ಥಾನ, ಹರದನಹಳ್ಳಿಯ ಶಿವ ದೇವಸ್ಥಾನ ಸೇರಿದಂತೆ ವಿವಿಧೆಡೆ ಅವರು ಪೂಜೆ ಸಲ್ಲಿಸಿದರು.
ಹೊಳೆನರಸೀಪುರದ ಹೆಲಿಪ್ಯಾಡ್ನಲ್ಲಿ ಪತ್ನಿ ಸಮೇತ ಬಂದಿಳಿದ ಕುಮಾರಸ್ವಾಮಿ ಅವರನ್ನು ಸಹೋದರ ಎಚ್.ಡಿ. ರೇವಣ್ಣ ಬೆಂಬಲಿಗರೊಂದಿಗೆ ಸ್ವಾಗತಿಸಿದರು.