ಪ್ರಜ್ವಲ್ ರೇವಣ್ಣಗೆ ಟಿಕೆಟ್: ಕುಮಾರಸ್ವಾಮಿ ಹೇಳಿದ್ದೇನು?
Recommended Video
ಬೆಂಗಳೂರು, ಮಾರ್ಚ್ 03: ಜೆಡಿಎಸ್ನ ಸಂಘಟನಾ ಕಾರ್ಯದರ್ಶಿ ಆದ ನಂತರ ಚುರುಕಾಗಿ ಪಕ್ಷದ ಕೆಲಸಗಳಲ್ಲಿ ತೊಡಗಿಕೊಂಡಿರುವ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರಿಗೆ ಚುನಾವಣೆಗೆ ಟಿಕೆಟ್ ನೀಡುವ ಸಾಧ್ಯತೆ ಕಂಡು ಬರುತ್ತಿದೆ.
ಪ್ರಜ್ವಲ್ ರೇವಣ್ಣ ಅವರ ಟಿಕೆಟ್ ದೇವೇಗೌಡ ಕುಟುಂಬದಲ್ಲಿ ಮುನಿಸು ಹೆಚ್ಚಿಸಿದೆ ಎನ್ನಲಾಗುತ್ತಿದ್ದು, ಇದೇ ಮೊದಲ ಬಾರಿಗೆ ಈ ವಿಷಯದ ಬಗ್ಗೆ ಕುಮಾರಸ್ವಾಮಿ ಬಾಯಿ ಬಿಟ್ಟಿದ್ದಾರೆ.
ಪಕ್ಷದ ಹೊಸ ಜವಾಬ್ದಾರಿ ಬಗ್ಗೆ ಪ್ರಜ್ವಲ್ ರೇವಣ್ಣ ಹೇಳಿದ್ದು
ಶ್ರೀರಂಗಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಪ್ರಜ್ವಲ್ ರೇವಣ್ಣ ಅವರ ಚುನಾವಣೆ ಸ್ಪರ್ಧೆಯ ಬಗ್ಗೆ ಕೇಳಲಾದ ಪ್ರಶ್ನೆಯ ಬಗ್ಗೆ ಉತ್ತರಿಸುತ್ತಾ 'ಚುನಾವಣೆ ಗೆಲ್ಲವು ಸಾಮರ್ಥ್ಯ ಇದ್ದರೆ ಪಕ್ಷ ಟಿಕೆಟ್ ನೀಡುತ್ತದೆ, ಸಾಮರ್ಥ್ಯ ಇದೆಯೊ ಇಲ್ಲವೊ ಎಂಬುದನ್ನು ಮುಖಂಡರು ಸೇರಿ ತೀರ್ಮಾನಿಸುತ್ತೇವೆ' ಎಂದಿದ್ದಾರೆ.
ಇಷ್ಟು ದಿನ ಕುಟುಂಬದಿಂದ ಇಬ್ಬರಿಗೆ ಮಾತ್ರ ಸ್ಪರ್ಧೆಗೆ ಅವಕಾಶ ಎನ್ನುತ್ತಿದ್ದ ಕುಮಾರಸ್ವಾಮಿ ಅವರು ಈಗ ವರಸೆ ಬದಲಿಸಿರುವುದು ನೋಡಿದರೆ ಪ್ರಜ್ವಲ್ ರೇವಣ್ಣ ಅವರು ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ.
ಪ್ರಜ್ವಲ್ ರೇವಣ್ಣ ಚುನಾವಣಾ ರಾಜಕೀಯ ಪ್ರವೇಶ ವಿಷಯ ಗೌಡರ ಕುಟುಂಬದಲ್ಲಿ ಬಿರುಕು ಮೂಡಿಸಿದೆ ಎನ್ನಲಾಗುತ್ತಿದ್ದು. ಪ್ರಜ್ವಲ್ ರೇವಣ್ಣ ಅವರ ಟಿಕೆಟ್ಗೆ ತಂದೆ ರೇವಣ್ಣ ಮತ್ತು ಭವಾನಿ ರೇವಣ್ಣ ಅವರು ಪಟ್ಟು ಹಿಡಿದ್ದರು ಎನ್ನಲಾಗಿದೆ. ಆದರೆ ಕುಮಾರಸ್ವಾಮಿ ಅವರು ಟಿಕೆಟ್ ಬೇಡ ಎಂದಿದ್ದರು. ಆದರೆ ಈಗ ಅವರೇ ವರಸೆ ಬದಲಾಯಿಸಿದ್ದಾರೆ.
ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಪ್ರಜ್ವಲ್ ರೇವಣ್ಣ ಹೇಳಿದ್ದು ಹೀಗೆ..
ಚನ್ನಪಟ್ಟಣದಲ್ಲಿ ಅನಿತಾ ಕುಮಾರಸ್ವಾಮಿ ಅವರನ್ನು ಸಿ.ಪಿ.ಯೋಗೀಶ್ವರ್ ಎದುರು ಕಣಕ್ಕಿಳಿಸಲು ಕುಮಾರಸ್ವಾಮಿ ಆಸಕ್ತಿ ತೋರಿರುವ ಕಾರಣ, ರೇವಣ್ಣ ಅವರು ತಮ್ಮ ಕುಟುಂಬಕ್ಕೂ ಟಿಕೆಟ್ ಮನವಿ ಇಟ್ಟಿದ್ದಾರೆ ಹಾಗಾಗಿ ಈಗ ರೇವಣ್ಣ ಅವರಿಗೆ ಸ್ಪರ್ಧಿಸಲು ಗ್ರೀನ್ ಸಿಗ್ನಲ್ ನೀಡಲಾಗಿದೆ ಎನ್ನಲಾಗುತ್ತಿದೆ.
ಹೀಗಾದಲ್ಲಿ ಗೌಡರ ಕುಟುಂಬದಿಂದ ಒಟ್ಟು ನಾಲ್ಕು ಮಂದಿ ಕಣಕ್ಕಿಳಿದಂತಾಗುತ್ತದೆ. ಈಗ ಪ್ರಜ್ವಲ್ ರೇವಣ್ಣ ಅವರು ಚುನಾವಣೆ ಅಖಾಡಕ್ಕೆ ಇಳಿದರೆ ಮುಂದೆ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಕೂಡಾ ಚುನಾವಣೆಗೆ ಇಳಿಯಬಹುದು ಎನ್ನಲಾಗಿದೆ.
ಇದೇ ವೇಳೆ ಮತ್ತೆ ಪಕ್ಷದಲ್ಲಿ ಭಿನ್ನಮತ ಸ್ಫೋಟದ ವಿಚಾರದ ಬಗ್ಗೆ ಮಾತನಾಡಿದ ಅವರು, ತಮ್ಮನಿಗೆ ಟಿಕೆಟ್ ನೀಡದಿದ್ದರೆ ಪರಿಷತ್ ಗೆ ರಾಜೀನಾಮೆ ನೀಡುತ್ತೇನೆ ಎಂಬ ಸಂದೇಶ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ರಾಜೀನಾಮೆ ನೀಡುವವರು ಪರಿಷತ್ ಸ್ಥಾನಕ್ಕೆ ಏಕೆ ನಿಂತರು ?. ರಾಜೀನಾಮೆ ನೀಡುವವರು ಚುನಾವಣೆ ನಿಲ್ಲಬಾರದಿತ್ತು ? ಪಕ್ಷ ಹಾಗೂ ಕಾರ್ಯಕರ್ತರು ಅವರ ಕೈ ಹಿಡಿದಿದ್ದಾರೆ. ಅದನ್ನು ಬಿಟ್ಟು ಬೇರೇ ಪಕ್ಷಕ್ಕೆ ಹೋಗುತ್ತೇನೆ ಎಂದರೆ ನಾನು ಏನು ಮಾಡಲಿ ?. ಅವರು ಬಿಜೆಪಿಗೆ ಹೋಗುತ್ತಾರೋ, ಇಲ್ಲವೋ ಗೊತ್ತಿಲ್ಲ. ಯಾರೇ ಹೋದರೂ ನಮಗೆ ನಷ್ಟವಿಲ್ಲ. ಹೋಗುವವರನ್ನು ಬೇಡ ಎನ್ನಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ಮೊದಲ ಪಟ್ಟಿ ಅಭ್ಯರ್ಥಿಗಳ ಪರಿಷ್ಕರಣೆ ಆಗುವುದಿಲ್ಲ ಎಂದರು.
ಇಪ್ಪತ್ತು ತಿಂಗಳ ಸರ್ಕಾರದ ಸಾಧನೆಯ ಕ್ರೆಡಿಟ್ ನನ್ನದೆಂಬ ಬಿಎಸ್ವೈ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಲ್ಲ ಸಾಧನೆ ಅವರೇ ತೆಗೆದುಕೊಳ್ಳಲಿ. ಇದರ ಜೊತೆಗೆ ಜೈಲಿಗೆ ಹೋಗಿ ಬಂದ ಕ್ರೆಡಿಟ್ ಕೂಡಾ ಅವರೇ ಪಡೆಯಲಿ. ಕಮಿಷನ್ ಪಡೆಯುವ ವ್ಯವಸ್ಥೆ ಸೃಷ್ಟಿಸಿದ ಕ್ರೆಡಿಟ್ ಎಲ್ಲವನ್ನೂ ಅವರೇ ಪಡೆದುಕೊಳ್ಳಲಿ. ಈ ವಿಚಾರದಲ್ಲಿ ನನ್ನ ಅಭ್ಯಂತರವೇನಿಲ್ಲ ಎಂದು ಬಿಎಸ್ವೈ ವಿರುದ್ಧ ಕಿಡಿಕಾರಿದರು.