ನಿರ್ಗಮನಕ್ಕೂ ಮುನ್ನಾ ಬಡವರಿಗೆ ಭರ್ಜರಿ ಉಡುಗೊರೆ ನೀಡಿದ ಕುಮಾರಸ್ವಾಮಿ
Recommended Video
ಬೆಂಗಳೂರು, ಜುಲೈ 24: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಸಹ ಕುಮಾರಸ್ವಾಮಿ ಅವರು ನಿರ್ಗಮಿಸುವ ಕೊನೆ ಕ್ಷಣದಲ್ಲಿ ರಾಜ್ಯದ ಬಡವರಿಗೆ ದೊಡ್ಡ ಉಡುಗೊರೆಯನ್ನು ಕುಮಾರಸ್ವಾಮಿ ನೀಡಿದ್ದಾರೆ.
ನಿನ್ನೆಯೇ ಸಿಎಂ ಸ್ಥಾನಕ್ಕೆ ರಾಜೀನಾಮೆಯನ್ನು ಕುಮಾರಸ್ವಾಮಿ ಅವರು ನೀಡಿದ್ದರೂ ಸಹ ಪ್ರಸ್ತುತ ಉಸ್ತುವಾರಿ ಸಿಎಂ ಆಗಿದ್ದಾರೆ. ರಾಜೀನಾಮೆ ನೀಡುವ ಮುನ್ನಾ ನಿನ್ನೆ ಋಣಮುಕ್ತ ಕಾಯ್ದೆಯನ್ನು ಜಾರಿಗೊಳಿಸಿದ್ದು, ಇಂದು ಅದರ ಬಗ್ಗೆ ಮಾಹಿತಿ ನೀಡಿದರು.
ನುಡಿದಂತೆ ನಡೆದ ಕುಮಾರಣ್ಣ, ಸರ್ಕಾರಿ ಕಾರು ಬಳಸಲೇ ಇಲ್ಲ
ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ಋಣಮುಕ್ತ ಕಾಯ್ದೆ ಜಾರಿಗೆ ತಂದಿದ್ದು, ಭೂಮಿ ಇಲ್ಲದ, ಎರಡು ಹೆಕ್ಟೇರ್ಗೂ ಕಡಿಮೆ ಜಮೀನು ಇರುವ ಅಥವಾ ವಾರ್ಷಿಕ 1.20 ಲಕ್ಷ ಆದಾಯಕ್ಕೂ ಕಡಿಮೆ ಇರುವ ವ್ಯಕ್ತಿಗಳು ಪಡೆದಿರುವ ಯಾವುದೇ ಖಾಸಗಿ (ಬ್ಯಾಂಕ್ ಸಾಲ ಅಲ್ಲ) ಸಾಲಗಳು ಮನ್ನಾ ಆಗಲಿವೆ ಎಂದು ಕುಮಾರಸ್ವಾಮಿ ಹೇಳಿದರು.
ಬ್ಯಾಂಕುಗಳ ಹೊರತಾಗಿ, ಖಾಸಗಿ ವ್ಯಕ್ತಿಗಳ, ಲೇವಾದೇವಿದಾರರ ಬಳಿ, ಖಾಸಗಿ ಅವರ ಬಳಿ ಚಿನ್ನ ಅಡವಿಟ್ಟು ಪಡೆದ ಸಾಲ, ಜಮೀನ್ದಾರುಗಳ ಬಳಿ ಪಡೆದಿರುವ ಸಾಲ, ಜಮೀನು ಅಡಮಾನ ಇಟ್ಟು ಖಾಸಗಿ ವ್ಯಕ್ತಿಗಳಿಂದ ಪಡೆದ ಸಾಲಗಳು ಪೂರ್ಣವಾಗಿ ಮನ್ನಾ ಆಗಲಿದೆ. ಇಂತಿಷ್ಟು ಸಾಲವೆಂಬ ಮಿತಿ ಇಲ್ಲದೆ ಪೂರ್ಣ ಸಾಲವೂ ಮನ್ನಾ ಆಗಲಿದೆ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.
90 ದಿನಗಳ ಒಳಗಾಗಿ ಅರ್ಜಿ ಹಾಕಿಕೊಳ್ಳಿ: ಎಚ್ಡಿಕೆ
ನಿನ್ನೆ ಕಾಯ್ದೆಯನ್ನು ಜಾರಿಗೊಳಿಸಿದ್ದು, ಇಂದಿನಿಂದ 90 ದಿನದ ಒಳಗಾಗಿ ಅಸಿಸ್ಟೆಂಟ್ ಕಮೀಷನರ್ ಅವರ ಬಳಿ ದಾಖಲೆಗಳ ಸಮೇತ ಅಥವಾ ದಾಖಲೆ ಇಲ್ಲದಿದ್ದರೂ ಅರ್ಜಿ ಹಾಕಿಕೊಂಡರೆ ಅರ್ಜಿದಾರರ ಎಲ್ಲ ಖಾಸಗಿ ಸಾಲಗಳು ಮನ್ನಾ ಆಗಲಿವೆ.
'ಆರ್ಬಿಐ ಮಾನ್ಯತೆ ಪಡೆದವರಿಗೆ ಕಾಯ್ದೆ ಅನ್ವಯ ಆಗದು'
ಆರ್ಬಿಐ ಇಂದ ಮಾನ್ಯತೆ ಪಡೆದು ಸಾಲ ನೀಡಿದವರಿಗೆ ಈ ಕಾಯ್ದೆ ಅನ್ವಯ ಆಗುವುದಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದ್ದು, ಸಾಲ ನೀಡಿದವರಿಗೆ ಸರ್ಕಾರದ ವತಿಯಿಂದ ಹಣ ಪಾವತಿ ಆಗಿರುವುದಿಲ್ಲ. ಅವರು ಈಗಾಗಲೇ ಬಡ್ಡಿ ರೂಪದಲ್ಲಿ ಬಡವರಿಂದ ಹಣ ಪಡೆದಿರುತ್ತಾರೆ ಅವರಿಗೆ ಸರ್ಕಾರ ಹಣ ನೀಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ತೃಪ್ತಿ ಇಲ್ಲ ಎಂದಿದ್ದ 'ಅತೃಪ್ತ'ರಿಗೆ ಎಚ್ಡಿಕೆ ಹರಿಸಿದ್ದ ಅನುದಾನದ ಹೊಳೆ
ಕಳೆದ ವರ್ಷವೇ ಉಡುಗೊರೆ ಕೊಡುವುದಾಗಿ ಹೇಳಿದ್ದೆ: ಎಚ್ಡಿಕೆ
ಕಳೆದ ವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿಯೇ ರಾಜ್ಯದ ಜನರಿಗೆ ವಚನ ನೀಡಿದ್ದೆ, ಒಂದು ಉಡುಗೊರೆ ನೀಡುವುದಾಗಿ ಅದರಂತೆ ಆಗಲೇ ರಾಷ್ಟ್ರಪತಿಗಳನ್ನು ಕಂಡು ಅವರ ಬಳಿ ಚರ್ಚಿಸಿ ಕಾಯ್ದೆಗೆ ಅಂಕಿತ ಪಡೆಯಲಾಗಿದೆ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.
'ಕೊನೆಯ ದಿನವೂ ಬಡವರಿಗಾಗಿ ಕೆಲಸ ಮಾಡಿದ್ದ ತೃಪ್ತಿ'
'ಸಿಎಂ ಸ್ಥಾನದಿಂದ ನಿರ್ಗಮಿಸುವ ಸಮಯದಲ್ಲಿಯೂ ಬಡವರಿಗಾಗಿ ಕೆಲಸ ಮಾಡಿದ ತೃಪ್ತಿ ಇದೆ. ಕಾಯ್ದೆಗೆ ಅಂಕಿತ ಹಾಕಿದ ರಾಷ್ಟ್ರಪತಿಗಳಿಗೆ ಧನ್ಯವಾದ' ಎಂದರು. ಈ ಸಮಯದಲ್ಲಿ ಕೇಳಲಾದ ರಾಜಕೀಯ ಸಂಬಂಧಿತ ಪ್ರಶ್ನೆಗಳಿಗೆ ಕುಮಾರಸ್ವಾಮಿ ಉತ್ತರಿಸಲಿಲ್ಲ.