ಸಮ್ಮಿಶ್ರ ಸರಕಾರದ ಆಯಸ್ಸಿನ ಬಗ್ಗೆ ದೇವೇಗೌಡರಿಗೇ ಅನುಮಾನ ಕಾಡಿದರೆ ಹೇಗೆ?
Recommended Video
ಅತಂತ್ರ ಫಲಿತಾಂಶ ಹೊರಬೀಳುತ್ತಿದ್ದಂತೇ ಜೆಡಿಎಸ್ ವರಿಷ್ಠ ದೇವೇಗೌಡ್ರ ಮನೆಬಾಗಿಲಿಗೆ ಓಡೋಡಿ ಬಂದಿದ್ದ ಕಾಂಗ್ರೆಸ್ಸಿನ ಮೇಲೆ, ಅಂದು ಗೌಡರಿಗಿದ್ದ ಅಚಲ ವಿಶ್ವಾಸ ದಿನದಿಂದ ದಿನಕ್ಕೆ ಕರಗುತ್ತಿದೆಯೇ? ಕಳೆದೆರಡು ದಿನಗಳಿಂದ ಗೌಡ್ರು ನೀಡುತ್ತಿರುವ ಹೇಳಿಕೆ, ಇದಕ್ಕೆ ಪುಷ್ಠಿ ನೀಡುವಂತಿದೆ..
ನನ್ನ ಮಗನನ್ನು ಮುಖ್ಯಮಂತ್ರಿ ಮಾಡಿದ್ದು ರಾಜ್ಯದ ಮಹಾಜನತೆಯಲ್ಲ, ಕಾಂಗ್ರೆಸ್ ಎಂದು ಪದೇಪದೇ ಹೇಳುತ್ತಿದ್ದ ದೇವೇಗೌಡ್ರು, ಅದ್ಯಾಕೋ ಸಮ್ಮಿಶ್ರ ಸರಕಾರದ ಆಯಸ್ಸಿನ ಬಗ್ಗೆ ಸಂಶಯದ ಮಾತನ್ನಾಡುತ್ತಿದ್ದಾರೆ.
ಸಂಪುಟ ನೋಡಿದ್ರೆ ಖಾತ್ರಿ, ಕಾಂಗ್ರೆಸ್ ರಿಮೋಟೂ ದೇವೇಗೌಡರ ಕಿಸೆಯಲ್ಲಿ!
ನನ್ನ ಮಗನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ದೇವರು ತುಂಬಾ ಪರೀಕ್ಷೆ ಮಾಡುತ್ತಿದ್ದಾನೆ ಎನ್ನುವ ಗೌಡರ ಹೇಳಿಕೆ, ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯವರೆಗಾದರೂ ಸಮ್ಮಿಶ್ರ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿ ಇರುವುದು ಡೌಟಾ ಎಂದು ಅನುಮಾನ ಪಡುವಂತಾಗಿದೆ.
ಮುಂದಿನ ಐದು ವರ್ಷ ಕುಮಾರಣ್ಣನೇ ಸಿಎಂ ಎಂದು ಕಾಂಗ್ರೆಸ್ ಜೊತೆ ಎಗ್ರೀಮೆಂಟ್ ಮಾಡಿಸಿಕೊಂಡಿದ್ದ ದೇವೇಗೌಡರ ಲೆಕ್ಕಾಚಾರ ತಪ್ಪುತ್ತಿರುವುದಕ್ಕೆ ಕಾರಣ ಏನು ಎಂದು ಹುಡುಕಲು ಹೊರಟರೆ, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಸಿಟ್ಟಾಗಿರುವ ಕಾಂಗ್ರೆಸ್ಸಿನ ಅತೃಪ್ತ ಬಣಗಳಲ್ಲೊಂದು ಎಂದೇ ಹೇಳಲಾಗುತ್ತಿದೆ.
ಕ್ಷಮಿಸಿ, ದೇವೇಗೌಡರದು ಕುಟುಂಬ ರಾಜಕಾರಣ ಅಲ್ಲವೇ ಅಲ್ಲ!
ಇನ್ನೊಂದು ವರ್ಷ ನಾನೇ ಸಿಎಂ, ನನ್ನನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ ಕುಮಾರಸ್ವಾಮಿಯವರ ಮಾತು, ಬಜೆಟ್ ಮಂಡನೆಯ ವಿಚಾರದಲ್ಲಿ ನಡೆಯುತ್ತಿರುವ ಶೀತಲ ಸಮರ, ಸಮ್ಮಿಶ್ರ ಸರಕಾರಕ್ಕೆ ಮುಜುಗರ ತರುವ ಹೇಳಿಕೆಯನ್ನು ಯಾರೂ ನೀಡಬಾರದು ಎನ್ನುವ ಡಿ ಕೆ ಶಿವಕುಮಾರ್ ಹೇಳಿಕೆ, ಜೆಡಿಎಸ್-ಕಾಂಗ್ರೆಸ್ ನಲ್ಲಿ ಏನೇನೂ ಸರಿಯಿಲ್ಲವೇ ಎಂದು ಜನತೆ ಈಗಲೇ ಮಾತನಾಡಿಕೊಳ್ಳುವಂತಾಗಿದೆ. ಮುಂದೆ ಓದಿ...
ದೇವರು ನಮ್ಮನ್ನು ಸಾಕಷ್ಟು ಪರೀಕ್ಷಿಸುತ್ತಿದ್ದಾರೆ
ಸೋಮವಾರ (ಜೂ 18) ಪಾವಗಡದಲ್ಲಿ ಮಾತನಾಡುತ್ತಿದ್ದ ದೇವೇಗೌಡ್ರು, ದೇವರು ನಮ್ಮನ್ನು ಸಾಕಷ್ಟು ಪರೀಕ್ಷಿಸುತ್ತಿದ್ದಾರೆ. ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿಯಾಗುವ ಅಧಿಕಾರ ಕೊಟ್ಟು, ಈಗ ಅದರಲ್ಲಿ ತೇರ್ಗಡೆಯಾಗಲು ನಾವು ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಹೇಳಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಬೇಕು ಎನ್ನುವ ಪ್ರಾರ್ಥನೆ ಈಡೇರಿದೆ, ಆದರೆ ಈಗ ದೇವರು ನಮ್ಮನ್ನು ಪರೀಕ್ಷೆಗೆ ಒಡ್ಡಿದ್ದಾನೆಂದು ಗೌಡ್ರು ಕಾರ್ಯಕ್ರಮದಲ್ಲಿ ಹೇಳಿರುವುದು, ಸಮ್ಮಿಶ್ರ ಸರಕಾರದ ಆಯಸ್ಸಿಗೆ ಹಿಡಿದ ಕನ್ನಡಿಯಂತಾಗಿತ್ತು.
ಸಮ್ಮಿಶ್ರ ಸರಕಾರ ಎಷ್ಟು ದಿನ ಇರುತ್ತೋ ಗೊತ್ತಿಲ್ಲ ಎಂದಿದ್ದ ಗೌಡ್ರು
ಕೆಲವು ದಿನಗಳ ಹಿಂದೆ, ಈ ಸಮ್ಮಿಶ್ರ ಸರಕಾರ ಎಷ್ಟು ದಿನ ಇರುತ್ತೋ ಗೊತ್ತಿಲ್ಲ ಎಂದು ಹೇಳಿದ್ದ ಗೌಡ್ರು, ಈಗ ಮತ್ತೆ ಜೆಡಿಎಸ್-ಕಾಂಗ್ರೆಸ್ ಸರಕಾರದಲ್ಲಿರುವ ಗೊಂದಲ, ಕಾಲೆಳೆತದ ಬಗ್ಗೆ ಪರೋಕ್ಷವಾಗಿ ನೀಡಿರುವ ಹೇಳಿಕೆ, ಸರಕಾರದ ಮುಂದಿನ ಭವಿಷ್ಯ ಮುಳ್ಳಿನಹಾದಿಯೇ ಎಂದು ಎರಡೂ ಪಕ್ಷಗಳಲ್ಲಿ ದೊಡ್ಡ ಮಟ್ಟದ ಚರ್ಚೆಯ ವಿಷಯವಾಗಿದೆ. ಇದಕ್ಕೆಲ್ಲಾ ಪೂರಕ ಎನ್ನುವಂತೆ, ಆಡಳಿತ ಯಂತ್ರ ಇನ್ನು ಚುರುಕುಗೊಳ್ಳದಿರುವುದು.
ಧರ್ಮದ ವಿಚಾರದಲ್ಲಿ ನಾವು ರಾಜಕೀಯ ಮಾಡಬಾರದು
ಗಾಂಧೀಜಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟಿದ್ದರೆ, ಅಂಬೇಡ್ಕರ್ ಸಂವಿಧಾನ ತಂದು ಕೊಟ್ಟಿದ್ದಾರೆ, ಧರ್ಮದ ವಿಚಾರದಲ್ಲಿ ನಾವು ರಾಜಕೀಯ ಮಾಡಬಾರದು ಎಂದು ಪಾವಗಡದ ಕಾರ್ಯಕ್ರಮದಲ್ಲಿ ಗೌಡ್ರು ಹೇಳಿದರು. ರಾಜ್ಯದ ಅಭಿವೃದ್ದಿ ರಾಷ್ಟ್ರೀಯ ಪಕ್ಷಗಳಿಂದ ಸಾಧ್ಯವಿಲ್ಲ, ಅದು ಸಾಧ್ಯವಾಗುವುದು ಪ್ರಾದೇಶಿಕ ಪಕ್ಷಗಳಿಂದ ಎಂದು ಗೌಡ್ರು ಹೇಳಿದರು. ಆದರೆ, ಜೆಡಿಎಸ್ ರಾಷ್ಟ್ರೀಯ ಪಕ್ಷದ ಜೊತೆಗೆ ಸಮ್ಮಿಶ್ರ ಸರಕಾರ ನಡೆಸುತ್ತಿರುವುದಲ್ಲವೇ ಎಂದು ಸಭಿಕರ ವಲಯದಲ್ಲಿ ಅಲ್ಲಲ್ಲಿ ಮಾತು ಕೇಳಿಬರುತ್ತಿತ್ತು.
ನಾವೇನು ಕಾಂಗ್ರೆಸ್ಸಿನ ಮನೆಬಾಗಿಲಿಗೆ ಹೋಗಿಲ್ಲ
ನಾವೇನು ಕಾಂಗ್ರೆಸ್ಸಿನ ಮನೆಬಾಗಿಲಿಗೆ ಹೋಗಿಲ್ಲ. ನಾವು ಕಮ್ಮಿ ಸ್ಥಾನ ಗೆದ್ದಿದ್ದೇವೆ, ನೀವು ಹೆಚ್ಚು ಸ್ಥಾನ ಗೆದ್ದಿದ್ದೀರಾ, ನಿಮ್ಮವರೇ ಯಾರಾದರೂ ಮುಖ್ಯಮಂತ್ರಿಯಾಗಲಿ ಎಂದು ಹೇಳಿದರೂ, ಕುಮಾರಸ್ವಾಮಿಯೇ ಸಿಎಂ ಆಗಲಿ, ನಾವು ಬೆಂಬಲಿಸುತ್ತೇವೆ ಎಂದರು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು ಎನ್ನುವ ಪ್ರಾರ್ಥನೆ ಕೈಗೂಡಿದೆ, ಆದರೆ ದೇವರು ನಮ್ಮನ್ನು ಪರೀಕ್ಷೆಗೆ ದೂಡಿದ್ದಾನೆಂದು ದೇವೇಗೌಡರು ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳಿಗೆ ಭಾರೀ ಹಿನ್ನಡೆ
ಪೂರ್ಣ ಬಜೆಟ್ ಮಂಡಿಸುವ ವಿಚಾರದಲ್ಲಿ, ಎರಡು ಪಕ್ಷಗಳ ನಡುವಿನ ಗೊಂದಲ ಮುಂದುವರಿದಿದೆ. ನೀತಿ ಆಯೋಗದ ಸಭೆಗೆ ಹಾಜರಾಗಿದ್ದ ಸಿಎಂ ಕುಮಾರಸ್ವಾಮಿ, ದೆಹಲಿಯಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ಬಂದಿದ್ದಾರೆ. ಮಿತ್ರಪಕ್ಷಗಳ ನಡುವೆ ಗೊಂದಲ ಮುಂದುವರಿದರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳಿಗೆ ಭಾರೀ ಹಿನ್ನಡೆಯಾಗಲಿದೆ ಎಂದು ಕುಮಾರಸ್ವಾಮಿ, ರಾಹುಲ್ ಗಾಂಧಿಗೆ ಮನವರಿಕೆ ಮಾಡಿದ್ದಾರೆಂದು ತಿಳಿದುಬಂದಿದೆ.