ಸಿದ್ದು ನ್ಯಾಮಗೌಡ ನಿಧನಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ದಿಗ್ಭ್ರಮೆ
Recommended Video
ಬೆಂಗಳೂರು, ಮೇ 28: ಬಾಗಲಕೋಟೆ ಜಿಲ್ಲೆಯ ಜಮಖಂಡಿ ವಿಧಾನ ಕ್ಷೇತ್ರದ ಶಾಸಕ ಸಿದ್ದು ಭೀಮಪ್ಪ ನ್ಯಾಮಗೌಡ ಅವರ ನಿಧನಕ್ಕೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
ಭಾನುವಾರ ನವದೆಹಲಿಯಲ್ಲಿ ಲವಲವಿಕೆಯಿಂದ ವಿವಿಧ ಚಟುವಟಿಕೆಗಳಲ್ಲಿ ತೊಡಗಿದ್ದ ಸಿದ್ದು ನ್ಯಾಮಗೌಡ ಅವರು ಅದೇ ರಾತ್ರಿ ವಿಮಾನದಲ್ಲಿ ಗೋವಾಗೆ ಬಂದಿಳಿದು ತಮ್ಮ ಊರಿಗೆ ಪಯಣಿಸುವಾಗ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತರಾಗಿದ್ದಾರೆ ಎಂಬುದು ನನ್ನಲ್ಲಿ ಏಕಕಾಲಕ್ಕೆ ದುಃಖ ಮತ್ತು ನೋವನ್ನು ಉಂಟು ಮಾಡಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಜನಮೆಚ್ಚಿದ ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡರಿಗೆ ಭಾವುಕ ಶ್ರದ್ಧಾಂಜಲಿ
ರೈತರು ಎಂದರೆ ಶ್ರಮಜೀವಿಗಳು. ಅದರಲ್ಲೂ ಅವಿಭಜಿತ ಬಿಜಾಪುರ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ರೈತರು ಮಹಾನ್ ಶ್ರಮಿಕರು, ಸಾಧಕರು ಹಾಗೂ ಸಾಹಸಿಗರು ಎಂಬುದನ್ನು ಇಡೀ ದೇಶಕ್ಕೇ ತೋರಿಸಿಕೊಟ್ಟವರು ಸಿದ್ದು ನ್ಯಾಮಗೌಡರು.
ಚಿಕ್ಕಪಡಸಲಗಿ ಮತ್ತು ಸುತ್ತಮುತ್ತಲಿನ 26,000 ಎಕರೆ ಭೂ ಪ್ರದೇಶಕ್ಕೆ ನೀರು ಒದಗಿಸುವುದರ ಜೊತೆಗೆ ಜಮಖಂಡಿ ಪಟ್ಟಣದ ಮೂರು ಲಕ್ಷ ಜನಸಂಖ್ಯೆಗೆ ಕುಡಿಯುವ ನೀರು ದೊರಕಿಸಿಕೊಟ್ಟ ಚಿಕ್ಕಪಡಸಲಗಿ ಬ್ಯಾರೇಜ್ ಇಡೀ ದೇಶದಲ್ಲೇ ದೊಡ್ಡ ಹೆಸರು ಮಾಡಿದೆ.
ರಸ್ತೆ ಅಪಘಾತದಲ್ಲಿ ಜಮಖಂಡಿ ಕ್ಷೇತ್ರದ ಶಾಸಕ ಸಿದ್ದು ನ್ಯಾಮಗೌಡ ಮರಣ
ಹೌದು! ಜಮೀನಿನಲ್ಲಿ ಉಳುಮೆ ಮಾಡಿ ಬೆವರು ಹರಿಸುತ್ತಿದ್ದ ರೈತರು ತಾವು ಸಂಪಾದಿಸಿದ ಹಣದಲ್ಲಿ ದೇಣಿಗೆಯ ಮೂಲಕ ಮೂರು ದಶಕಗಳ ಹಿಂದೆಯೇ 50 ಲಕ್ಷ ರೂ. ವೆಚ್ಚದಲ್ಲಿ ಬ್ಯಾರೇಜ್ ನಿರ್ಮಿಸಲು ಮುಂದಾದದ್ದು ಶ್ರಮಿಕರ ಸಾಧನೆ ಮಾತ್ರವಲ್ಲದೆ, ತಮ್ಮ ದೇಣಿಗೆಯ ಜೊತೆ ಜೊತೆಗೆ ಶ್ರಮದಾನವನ್ನೂ ಮಾಡಿ ಬ್ಯಾರೇಜ್ ನಿರ್ಮಿಸಿದ್ದು ಒಂದು ಸಾಹಸವೇ ಆಗಿತ್ತು. ರೈತರ ಈ ಶ್ರಮಕ್ಕೆ ಪ್ರೇರಣೆ ಹಾಗೂ ಸಾಹಸಕ್ಕೆ ಸ್ಫೂರ್ತಿ ನೀಡಿದ್ದು ಸಿದ್ದು ನ್ಯಾಮಗೌಡರು.
ಅಂದು ರೈತರ ಶ್ರಮದಾನದ ನಾಯಕತ್ವ ವಹಿಸಿದ್ದ ಸಿದ್ದು ನ್ಯಾಮಗೌಡರು ಇಂದು ನಮ್ಮೊಡನೆ ಇಲ್ಲದಿರಬಹುದು. ಆದರೆ, ಸಾಕಾರಗೊಂಡಿರುವ ಅವರ ಕನಸಿನ ಕೂಸು ಮಾತ್ರ ಅಂದು, ಇಂದು ಮುಂದೂ ಅಷ್ಟೇ ಏಕೆ, ಎಲ್ಲರಿಗೂ ಎಂದೆಂದೂ ಎದ್ದು ಕಾಣುತ್ತಲೇ ಇರುತ್ತದೆ.
ರಾಮಕೃಷ್ಣ ಹೆಗಡೆ ಅವರಿಗೇ ಮಣ್ಣು ಮುಕ್ಕಿಸಿದ್ದ ಸಿದ್ದು ನ್ಯಾಮಗೌಡ
ಅಂದು ಶ್ರಮದಾನ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದ ಸಿದ್ದು ನ್ಯಾಮಗೌಡ ಅವರು ರಾಜ್ಯ ರಾಜಕಾರಣಕ್ಕೆ ಬಳುವಳಿಯಾದರು. ಅಂದು ಕೃಷ್ಣೆಯ ಮೇಲಿನ ಚಿಕ್ಕಪಡಸಲಗಿ ಬ್ಯಾರೇಜ್ನ ಪ್ರಭಾವ ಎಷ್ಟಿತ್ತು ಎಂದರೆ 1991ರ ಸಾರ್ವತ್ರಿಕ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಂದಿನ ಕಾಲದ ಪ್ರಭಾವಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರನ್ನು ಪರಾಭವಗೊಳಿಸಿ ಸಿದ್ದು ನ್ಯಾಮಗೌಡ ಅವರಿಗೆ ಲೋಕಸಭೆ ಪ್ರವೇಶಿಸಲು ಅನುವು ಮಾಡಿಕೊಟ್ಟಿತು.
ಸಿದ್ದು ನ್ಯಾಮೇಗೌಡ ಅವರು ನರಸಿಂಹರಾವ್ ಸಂಪುಟದಲ್ಲಿ ಕೇಂದ್ರ ಕಲ್ಲಿದ್ದಲು ಖಾತೆಯ ರಾಜ್ಯ ಸಚಿವರಾಗುವ ಅವಕಾಶ ಪಡೆದರು. ಅಂತೆಯೇ, 2013 ರಲ್ಲಿ ನಡೆದ ಹದಿನಾಲ್ಕನೇ ವಿಧಾನ ಸಭೆಯಲ್ಲೂ ಸಿದ್ದು ನ್ಯಾಮೇಗೌಡ ಅವರು ಜಮಖಂಡಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು ಎಂಬುದು ಇದೀಗ ಇತಿಹಾಸ.
ಸಿದ್ದು ನ್ಯಾಮಗೌಡ ಅವರ ಆತ್ಮಕ್ಕೆ ಶಾಂತಿ ಲಭಿಸಲಿ. ಅವರ ಹಠಾತ್ ನಿಧನದಿಂದ ತೀವ್ರ ಆಘಾತಕ್ಕೆ ಒಳಗಾಗಿರುವ ಅವರ ಕುಟುಂಬ ವರ್ಗ ಹಾಗೂ ಅಭಿಮಾನಿ ವರ್ಗಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಕುಮಾರಸ್ವಾಮಿ ಅವರು ಪ್ರಾರ್ಥಿಸಿದ್ದಾರೆ.