ಬಜೆಟ್ ಬಗ್ಗೆ ವಿರೋಧ ಪಕ್ಷದ ಪ್ರಶ್ನೆಗಳಿಗೆ ಕುಮಾರಸ್ವಾಮಿ ಖಡಕ್ ಉತ್ತರ
ಬೆಂಗಳೂರು, ಜುಲೈ 12: ಬಜೆಟ್ ಮೇಲಿನ ಚರ್ಚೆಗೆ ಸದನದಲ್ಲಿ ಉತ್ತರ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅತಿ ವಿಸ್ತಾರವಾಗಿ, ಅಂಕಿ-ಅಂಶಗಳನ್ನೇ ಮುಂದೆ ಮಾಡಿ ಬಜೆಟ್ ಅನ್ನು ಸಮರ್ಥಿಸಿಕೊಂಡರಲ್ಲದೆ. ಅಂಕಿ ಸಂಖ್ಯೆಗಳ ಮೂಲಕ ವಿರೋಧಪಕ್ಷವನ್ನು ಗೊಂದಲಕ್ಕೂ ತಳ್ಳಿದರು.
ಸುದೀರ್ಘವಾಗಿ ಮಾತನಾಡಿದ ಕುಮಾರಸ್ವಾಮಿ, ವಿರೋಧ ಪಕ್ಷಗಳು ಮಾಡಿದ ಬಹುತೇಕ ಎಲ್ಲ ಆರೋಪಗಳಿಗೆ, ಪ್ರಶ್ನೆಗಳಿಗೆ ಉತ್ತರ ನಿಡಿದರು. ನಡು-ನಡುವೆ ರಮೇಶ್ ಕುಮಾರ್ ಅವರು ವ್ಯಂಗ್ಯದ ಮೂಲಕ ಕುಮಾರಸ್ವಾಮಿ ಅವರ ಕಾಲೆಳೆದರೆ, ಯಡಿಯೂರಪ್ಪ ಅವರು ಮೊನಚು ಮಾತಿನ ಮೂಲಕ ಟೀಕೆ ಮಾಡಿದರು.
ಕುಮಾರಸ್ವಾಮಿ ಬಜೆಟ್ ಬಗ್ಗೆ ಕಾಂಗ್ರೆಸ್ ಸಭೆಯಲ್ಲಿ ಕಾವೇರಿದ ಚರ್ಚೆ
ಸಾಲಮನ್ನಾ ಬಗ್ಗೆ ಅತಿಯಾದ ಅಂಕಿ-ಸಂಖ್ಯೆಗಳನ್ನು ಹೇಳಿದ ಕುಮಾರಸ್ವಾಮಿ ಅವರು ಒಟ್ಟು ಸದನವನ್ನೇ ಗೊಂದಲಕ್ಕೆ ತಳ್ಳಿ ಬಿಟ್ಟರು. ಒಂದು ಹಂತದಲ್ಲಂತೂ ಸ್ಪೀಕರ್ ರಮೇಶ್ ಕುಮಾರ್ ಅವರೇ 'ಲೆಕ್ಕಗಳನ್ನ ಪ್ರಿಂಟ್ ಮಾಡಿ ಎಲ್ಲರಿಗೂ ಹಂಚಿಬಿಡಿ ಗೊಂದಲ ಬೇಡ' ಎಂದು ಕುಮಾರಸ್ವಾಮಿ ಅವರನ್ನು ಕೇಳಿದರು.
ಬಜೆಟ್ ಮೇಲಿನ ಚರ್ಚೆ ಕುಮಾರಸ್ವಾಮಿ ಅವರು ನೀಡಿದ ಉತ್ತರಗಳು ಇಲ್ಲಿವೆ ನೋಡಿ....
ಅನ್ನಭಾಗ್ಯದ ಅಕ್ಕಿಗೆ ಕನ್ನ ಇಲ್ಲ
ಅನ್ನಭಾಗ್ಯ ಯೋಜನೆಯ 7 ಕೆಜಿ ಅಕ್ಕಿ ಬದಲಿಗೆ 5 ಕೆಜಿ ನೀಡಲಾಗುತ್ತದೆ ಎಂದಿದ್ದ ಸಿಎಂ ಅವರ ನಿರ್ಣಯಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಹಾಗಾಗಿ ಈ ನಿರ್ಣಯವನ್ನು ಕುಮಾರಸ್ವಾಮಿ ಹಿಂಪಡೆದಿದ್ದು ಅನ್ನಭಾಗ್ಯ ಅಕ್ಕಿಗೆ ಹಾಕಿದ್ದ ಖನ್ನ ವಾಪಸ್ ಪಡೆಯಲಾಗಿದೆ.
ಚಾಲ್ತಿ ಸಾಲಮನ್ನಾ ಘೋಷಣೆ
ರೈತರಸುಸ್ತಿ ಸಾಲ ಮಾತ್ರ ಮನ್ನಾ ಮಾಡಿದ್ದ ಕುಮಾರಸ್ವಾಮಿ ಇಂದು ರೈತರ ಚಾಲ್ತಿಸಾಲವನ್ನೂ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದರು. ಸಹಕಾರಿ ವಲಯದ1 ಲಕ್ಷವರೆಗಿನ ಚಾಲ್ತಿ ಸಾಲ ಮನ್ನಾ ಆಗಲಿದೆ ಎಂದು ಕುಮಾರಸ್ವಾಮಿ ಹೇಳಿದರು.
ಯಾವ ಜಿಲ್ಲೆಗಳಿಗೆ ಹೆಚ್ಚು ಲಾಭ
ಉತ್ತರ ಕರ್ನಾಟಕಕ್ಕೆ ಬಜೆಟ್ ನಲ್ಲಿ ಅನ್ಯಾಯ ಆಗಿದೆ ಎಂಬ ಆರೋಪಕ್ಕೆ ಉತ್ತರಿಸಿದ ಕುಮಾರಸ್ವಾಮಿ ಅವರು, ಸಾಲಮನ್ನಾದಿಂದ ಉತ್ತರ ಕರ್ನಾಟಕಕ್ಕೆ ಹೆಚ್ಚು ಲಾಭ ಆಗಿದೆ ಎಂದು ಅಂಕಿ ಸಂಖ್ಯೆ ಮುಂದೆ ಇಟ್ಟರು. ಬೆಳಗಾವಿ ವಲಯದ 9501 ಕೋಟಿ ಸಾಲಮನ್ನಾ ಆಗುತ್ತೆ, ಬೆಂಗಳೂರು ವಲಯದ 7454 ಕೋಟಿ, ಕಲಬುರಗಿ ವಲಯದ 5651 ಕೋಟಿ, ಮೈಸೂರು ವಲಯದ 6760 ಕೋಟಿ, ಒಟ್ಟು 29279 ಕೋಟಿ ಮನ್ನಾ ಆಗುತ್ತೆ ಎಂದು ಲೆಕ್ಕ ನಿಡಿದರು.
ಬೇಕಾಬಿಟ್ಟಿ ಘೋಷಣೆ ಅಲ್ಲ
ಅಧಿಕಾರಕ್ಕೆ ಬರುವುದಿಲ್ಲವೆಂದು ಮೊದಲೇ ಗೊತ್ತಿದ್ದರಿಂದ ಸಾಲಮನ್ನಾದಂತ ಅತಿರಂಜಿತ ಘೋಷಣೆಯನ್ನು ಕುಮಾರಸ್ವಾಮಿ ಮಾಡಿದ್ದರು ಎಂಬ ಜಗದೀಶ್ ಶೆಟ್ಟರ್ ಆರೋಪಕ್ಕೆ ಉತ್ತರಿಸಿದ್ದ ಅವರು, ಮೊದಲೇ ಬ್ಯಾಂಕ್ರಗಳೊಂದಿಗೆ ಚರ್ಚೆ ಮಾಡಿಯೇ ಅದನ್ನು ಪ್ರಣಾಳಿಕೆಗೆ ಸೇರಿಸಿದ್ದೆ ಎಂದ ಕುಮಾರಸ್ವಾಮಿ ಅದಕ್ಕೆ ಖಾಸಗಿ ಬ್ಯಾಂಕ್ ಒಂದರ ಜಾಹಿರಾತೊಂದನ್ನು ಉದಾಹರಣೆಯಾಗಿ ನೀಡಿದರು.
ಜಾತಿ ಆಧಾರಿತ ಸಾಲಮನ್ನಾ ಸುಳ್ಳು
ಸಾಲಮನ್ನಾದಿಂದ ಒಕ್ಕಲಿಗ ಸಮುದಾಯದವರ 32% ಸಾಲಮನ್ನಾ ಆಗುತ್ತದೆ ಎಂದು ಮಾಧ್ಯಮಗಳು ಹೇಳಿದ್ದವು ಅಲ್ಲದೆ ವಿರೋಧ ಪಕ್ಷದ ನಾಯಕರೂ ಇದನ್ನೇ ಹೇಳಿದ್ದಾರೆ ಆದರೆ ಇದು ಕಪೋಲಕಲ್ಪಿತ ಕತೆ ಎಂದು ಕುಮಾರಸ್ವಾಮಿ ಹೇಳಿದರು. ಚುನಾವಣೆಯಲ್ಲಿ ಸಂಗ್ರಹಿಸಿದ್ದ ಸಮೀಕ್ಷೆಯನ್ನೇ ಕೆಲವು ಟೀವಿಗಳು ಸಾಲಮನ್ನಾಕ್ಕೆ ಬಳಸಿಬಿಟ್ಟಿವೆ ಎಂದು ಹಾಸ್ಯ ಚಟಾಕಿ ಹಾರಿಸಿದರು.ಸಾಲಮನ್ನಾ ಜಾತಿ ಆಧಾರದಲ್ಲಿ ಆಗಿಲ್ಲ ಅದು ಮಾನವೀಯತೆ ಆಧಾರದಲ್ಲಿ ಆಗಿದೆ ಎಂದು ಅವರು ಹೇಳಿದರು.
ಹಣ ಹೇಗೆ ಪಾವತಿಸುತ್ತೀರಿ?
ಸಾಲಮನ್ನಾಕ್ಕೆ ಒಂದೇ ಬಾರಿ ಅಷ್ಟು ಹಣ ಹೇಗೆ ಹೊಂದಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಬ್ಯಾಂಕುಗಳೊಂದಿಗೆ ಮಾತುಕತೆ ನಡೆಸಿದ್ದು ಸಾಲಮನ್ನಾದ ಹಣವನ್ನು ನಾಲ್ಕು ಹಂತದಲ್ಲಿ ಸರ್ಕಾರ ಪಾವತಿಸುತ್ತದೆ. ಇದಕ್ಕೆ ಪ್ರತಿ ವರ್ಷ 6500 ಕೋಟಿ ಮೀಸಲಿಡಲಾಗುತ್ತದೆ ಎಂದರು.
ಇಂಧನ ಸೆಸ್ ಏರಿಸಿದ್ದು ಈ ಕಾರಣಕ್ಕೆ
ಜಿಎಸ್ಟಿ ತೆರಿಗೆ ಪದ್ಧತಿ ಬಂದ ಮೇಲೆ ತೆರಿಗೆಗಳ ಮೇಲೆ ರಾಜ್ಯ ಸರ್ಕಾರದ ಹಿಡಿತ ಕೈತಪ್ಪಿದೆ ಹಾಗಾಗಿಬೇರೆ ವಸ್ತುಗಳ ಮೇಲೆ ತೆರಿಗೆ ಏರಿಸಲಾಗದೆ ಇಂಧನದ ಮೇಲಿನ ಸೆಸ್ ಅನ್ನು ಅಲ್ಪ ಏರಿಕೆ ಮಾಡಲೇಬೇಕಿತ್ತು, ಹಾಗಾಗಿ ಮಾಡಿದ್ದೇವೆ. ಆದರೂ ಸಹ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಿಗಿಂತಲೂ ರಾಜ್ಯದಲ್ಲಿ ಬೆಲೆ ಕಡಿಮೆ ಇದೆ ಎಂದರು.
ವಿದ್ಯುತ್ ಹೊರೆ ಹೆಚ್ಚಿಗೇನು ಆಗಲ್ಲ
ವಿದ್ಯುತ್ ತೆರಿಗೆ ಏರಿಕೆ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಗೃಹಬಳಕೆ ವಿದ್ಯುತ್ ಬಳಸುವವರು ತಿಂಗಳಿಗೆ 10 ರೂಪಾಯಿ ಸರಾಸರಿ ಹೆಚ್ಚಿಗೆಬಿಲ್ ಕೊಡುತ್ತಾರೆ ಅದು ಹೊರೆ ಎಂದೇನು ಎನಿಸುವುದಿಲ್ಲ ಎಂದರು. ತೆರಿಗೆ ಹೆಚ್ಚಳದಿಂದ ವಾರ್ಷಿಕ 182 ಕೋಟಿ ಹೆಚ್ಚಿನ ಲಾಭ ಉಂಟಾಗುತ್ತದೆ ಎಂದು ಅವರು ಹೇಳಿದರು.
ಸಹಕಾರಿ ಬ್ಯಾಂಕುಗಳ ಸಾಲಮನ್ನಾ
ಸಹಕಾರಿ ಬ್ಯಾಂಕುಗಳ ಸಾಲಮನ್ನಾ ಬಗ್ಗೆ ಮಾತನಾಡಿದ ಕುಮಾರಸ್ವಾಮಿ ಅತಿಯಾದ ಅಂಕಿ-ಸಂಖ್ಯೆಗಳನ್ನು ಹೇಳುವ ಮೂಲಕ ಪೂರ್ಣ ಸದನವನ್ನು ಗೊಂದಲಕ್ಕೆ ತಳ್ಳಿದರು. ಆಡಳಿತ ಮತ್ತು ವಿರೋಧ ಪಕ್ಷಗಳೆರಡರ ಸದಸ್ಯರೂ ಕೂಡ ಗೊಂದಲಕ್ಕೆ ಒಳಗಾದರು.
ಯಾವ ಬ್ಯಾಂಕ್ನಲ್ಲಿ ಎಷ್ಟು ಸಾಲ?
ಯಾವ ಬ್ಯಾಂಕಿನಲ್ಲಿ ಎಷ್ಟು ರೈತರ ಸಾಲ ಎಷ್ಟಿದೆ ಎಂದು ಮಾಹಿತಿ ನಿಡಿದ ಕುಮಾರಸ್ವಾಮಿ, ಕೆನರಾ ಬ್ಯಾಂಕ್ನಲ್ಲಿ 3112, ಕಾರ್ಪೊರೇಷನ್ 1980, ಸಿಂಡಿಕೇಟ್ ಬ್ಯಾಂಕ್ 2420, ಎಸ್ಬಿಐ ಬ್ಯಾಂಕ್ 3120, ವಿಜಯ ಬ್ಯಾಂಖ್ 750 , ಅಲಹಾಬಾದ್, ಬ್ಯಾಂಕ್ ಆಫ್ ಬರೋಡಾ ಇನ್ನಿತರೆ ಬ್ಯಾಂಕುಗಳಲ್ಲಿ ಇನ್ನಷ್ಟು ಸಾಲ ಇವೆ.
ಯಾವ ಜಿಲ್ಲೆಯಲ್ಲಿ ಎಷ್ಟು ಸಾಲಮನ್ನಾ ಆಗಲಿದೆ
2670 ಕೋಟಿ ಬೆಳಗಾವಿ ರೈತರ ಸಾಲ, ಬಾಗಲಕೋಟಿ 1820 , ಬಿಜಾಪುರ 1500, ಧಾರವಾಡ 1226 ಕೋಟಿ, ಹಾವೇರಿ 1031 , ಉತ್ತರ ಕನ್ನಡ 472 ಕೋಟಿ, ರಾಯಚೂರು 1160, ಗುಲ್ಬರ್ಗ 1900, ಯಾದಗಿರಿ 707, ಕೊಪ್ಪಳ 591 , ಹಾಸನ 1456, ಮಂಡ್ಯ 1018 , ಮೈಸೂರು 917, , ಕೊಡಗು 497, ಚಾಮರಾಜನಗರ 467 ನ್ಯಾಷನಲೈಸ್ಡ್ ಬ್ಯಾಂಕ್ ಸಾಲಮನ್ನಾ ಆಗಲಿದೆ.
ನೇಕಾರರಿಗೆ ಸಿದ್ದರಾಮಯ್ಯ ಸಾಲಮನ್ನಾ ಘೋಷಿಸಿದ್ದಾರೆ
ಸಿದ್ದರಾಮಯ್ಯ ಅವರು ಮಂಡಿಸಿದ್ದ ಬಜೆಟ್ ನಲ್ಲೇ ನೇಕಾರರಿಗೆ 56 ಕೋಟಿ ಸಾಲಮನ್ನಾ ಮಾಡಿದ್ದರು ಆ ಹಣ ಇನ್ನೂ ಬಿಡುಗಡೆ ಆಗಿಲ್ಲ ಅದನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದರು. ಈ ಸಾಲಮನ್ನಾದಿಂದ 19000 ಸಾವಿರ ನೇಕಾರರಿಗೆ ಉಪಯೋಗ ಆಗುತ್ತದೆ. ಅಷ್ಟೆ ಅಲ್ಲದೆ 43 ಕೋಟಿ ನೇಕಾರರ ನಿಗಮಕ್ಕೆ ಅನುದಾನ, 26 ಕೋಟಿ ಸಾಲದ ರೂಪದಲ್ಲಿ ಬಿಡುಗಡೆಯನ್ನು ಸಿದ್ದರಾಮಯ್ಯ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.