ಮರಳು ಕಳ್ಳರನ್ನು ದಿಟ್ಟತನದಿಂದ ಹಿಡಿದ ಯುವಕರು
ಚಿಂತಾಮಣಿ (ಚಿಕ್ಕಬಳ್ಳಾಪುರ), ಏ. 6 : ಅಕ್ರಮಗಳನ್ನು ಹತ್ತಿಕ್ಕಲು ಸರಕಾರದ ಅಧೀನದಲ್ಲಿರುವ ಸಂಬಂಧಪಟ್ಟ ಎಲ್ಲ ಇಲಾಖೆಗಳು ವಿಫಲವಾದಾಗ ಜನರೇ ಕಾನೂನನ್ನು ಕೈಗೆತ್ತಿಕೊಳ್ಳುವುದನ್ನು ನಾವು ಸಿನೆಮಾಗಳಲ್ಲಿ ನೋಡಿದ್ದೇವೆ. ಇಂಥದೇ ಒಂದು ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ನಡೆದಿದೆ.
ಚಿಂತಾಮಣಿ ತಾಲೂಕಿನ ಯರ್ರಯ್ಯಗಾರಿಹಳ್ಳಿಯಲ್ಲಿ ಮರಳನ್ನು ಅಕ್ರಮವಾಗಿ ದುರುಳರು ಸಾಗಿಸುತ್ತಿದ್ದುದನ್ನು ಗ್ರಾಮದ ಯುವಕರು ಗಮನಿಸುತ್ತಲೇ ಇದ್ದರು. ಇದು ಹತ್ತಿಕ್ಕುವುದು ಪೊಲೀಸರಿಂದ ಬಗೆಹರಿಯುವ ಸಂಗತಿಯಲ್ಲ ಎಂದರಿತ ಯುವಶಕ್ತಿ ಬಳಗದ ಯುವಕರು, ತಮ್ಮ ಜೀವದ ಹಂಗು ತೊರೆದು ಕಳ್ಳರನ್ನು ಹಿಡಿಯಲು ಮುಂದಾಗಿದ್ದಾರೆ. [ಬಯಲುಸೀಮೆಗೆ ಕುಡಿಯುವ ನೀರು ಕೊಡಿ ಸ್ವಾಮೀ!]
ಮೊದಲೇ ಯೋಜಿಸಿದಂತೆ, ಭಾನುವಾರ ರಾತ್ರಿಯೆಲ್ಲ ಗುಟ್ಟಾಗಿ ಅಡಗಿ ಕುಳಿತು, ಅಕ್ರಮವಾಗಿ ಮರಳನ್ನು ಸಾಗಿಸುತ್ತಿದ್ದ ಕಳ್ಳರನ್ನು ಯಶಸ್ವಿಯಾಗಿ ಹಿಡಿದು ಪೊಲೀಸರ ಕೈಗೆ ಒಪ್ಪಿಸಿ ಸಾಹಸ ಮೆರೆದಿದ್ದಾರೆ. ಪೊಲೀಸರೆ ಕೈಗೆ ಕಳ್ಳರ ಹಸ್ತಾಂತರವಾದ ಮೇಲೆ ಏನಾಗುತ್ತೋ ಬಲ್ಲವರಾರು? ಅಂತೂ ಯುವಕರು ತಮ್ಮ ಕರ್ತವ್ಯ ಮೆರೆದಿದ್ದಾರೆ.
ಅಕ್ರಮ ಮರಳು ದಂಧೆಯನ್ನು ಮುಂದುವರಿಸಲು ಗ್ರಾಮಸ್ಥರು ಬಿಡಬಾರದು. ಬಯಲು ಸೀಮೆಯ ಯುವ ಜನತೆ ಇಂಥ ಮರಳು ಮಾಫಿಯಾ ತಡೆಗಟ್ಟುವಲ್ಲಿ ಒಗ್ಗಟ್ಟಾಗಿ ಮುನ್ನುಗ್ಗಬೇಕೆಂದು ಎಂದು ಗ್ರಾಮಸ್ಥರನ್ನು ಸಂಘಟಿಸಿ ಮನವಿ ಮಾಡಿಕೊಂಡಿದ್ದಾರೆ. ಹೀಗೆ ಸಾಹಸ ಮೆರೆದ ಯುವಕರಿಗೆ ಒಂದು ಅಭಿನಂದನೆ ತಿಳಿಸೋಣವೆ?
ಅಂದ ಹಾಗೆ, ಕೋಲಾರ ಜಿಲ್ಲೆಯಲ್ಲಿ ಅಕ್ರಮ ಮರಳು ಮಾಫಿಯಾವನ್ನು ಅತ್ಯಂತ ದಿಟ್ಟತನದಿಂದ ಹಿಮ್ಮೆಟ್ಟಿಸಿದ್ದ ಜಿಲ್ಲಾಧಿಕಾರಿ ದಿ. ಡಿಕೆ ರವಿ ಅವರ ಸಾವಿಗೆ ಸಂಬಂಧಿಸಿದಂತೆ, ಸಿಬಿಐ ತನಿಖೆ ಮುಂದುವರಿಯಬೇಕೆಂದು ರಾಜ್ಯ ಸರಕಾರ ಮತ್ತೊಂದು ಸುತ್ತೋಲೆಯನ್ನು ಹೊರಡಿಸಿದೆ. ಕೆಲ ಷರತ್ತುಗಳನ್ನು ವಿಧಿಸಿದ್ದರಿಂದ ಸಿಬಿಐ ತನಿಖೆ ನಡೆಸುವುದರಿಂದ ಹಿಂಜರಿದಿತ್ತು. [ಸಿಬಿಐಗೆ ಷರತ್ತು ರಹಿತ ಸೂಚನೆ ಕೊಟ್ಟ ಸಿದ್ದು]