ಮಹಾರಾಷ್ಟ್ರಕ್ಕೆ ಸಪ್ಟೆಂಬರ್.22ರಿಂದ ಕೆಎಸ್ಆರ್ ಟಿಸಿ ಬಸ್ ಪುನಾರಂಭ
ಬೆಂಗಳೂರು, ಸಪ್ಟೆಂಬರ್.18: ನೊವೆಲ್ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಗಣನೀಯ ಏರಿಕೆ ನಡುವೆ ಮಹಾರಾಷ್ಟ್ರಕ್ಕೆ ಸಾರಿಗೆ ಸಂಚಾರವನ್ನು ಪುನಾರಂಭಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ತೀರ್ಮಾನಿಸಿದೆ.
ಸಪ್ಟೆಂಬರ್.22ರಿಂದ ರಾಜ್ಯದಿಂದ ಮಹಾರಾಷ್ಟ್ರಕ್ಕೆ ಕೆಎಸ್ಆರ್ ಟಿಸಿ ಬಸ್ ಗಳ ಸಂಚಾರ ಪುನಾರಂಭಗೊಳ್ಳಲಿದೆ ಎಂದು ತಿಳಿದು ಬಂದಿದೆ. ರಾಜ್ಯದೊಳಗೆ ಮತ್ತು ರಾಜ್ಯದ ಹೊರಗೆ ಸಂಚರಿಸಲು ಮುಕ್ತ ಅವಕಾಶ ನೀಡಲಾಗಿದೆ.
ಕರ್ನಾಟಕ ಅನ್ ಲಾಕ್ 4.0 ಮಾರ್ಗಸೂಚಿಯಲ್ಲಿ ಇರುವುದೇನು?
ಬೆಂಗಳೂರು, ದಾವಣಗೆರೆ, ಮಂಗಳೂರು ಮತ್ತು ರಾಜ್ಯದ ಇತರ ಭಾಗಗಳಿಂದ ಮಹಾರಾಷ್ಟ್ರದ ಹಲವು ಪ್ರದೇಶಗಳಿಗೆ ಅಂತರರಾಜ್ಯ ಬಸ್ ಸಂಚಾರವನ್ನು ಪುನಾರಂಭಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಮುಂದಾಗಿದೆ.
ಸರಕು ಸಾಗಾಣಿಕೆಗೆ ಯಾವುದೇ ನಿರ್ಬಂಧವಿರಲಿಲ್ಲ
ರಾಜ್ಯದೊಳಗೆ ಹಾಗೂ ರಾಜ್ಯದ ಹೊರಗೆ ವ್ಯಕ್ತಿಗಳ ಓಡಾಟಕ್ಕೆ ಹಾಗೂ ಸರಕುಗಳ ಸಾಗಣೆಗೆ ಯಾವುದೇ ನಿರ್ಬಂಧವಿರುವುದಿಲ್ಲ ಎಂದು ರಾಜ್ಯ ಸರ್ಕಾರವು ಜಾರಿಗೊಳಿಸಿದ ಅನ್ ಲಾಕ್ 4.0 ಮಾರ್ಗಸೂಚಿಯಲ್ಲೇ ಉಲ್ಲೇಖಿಸಲಾಗಿತ್ತು. ಇಂತಹ ಓಡಾಟಕ್ಕೆ ಯಾವುದೇ ಪ್ರತ್ಯೇಕ ಅನುಮತಿ, ಅನುಮೋದನೆ ಅಥವಾ ಇ-ಪರ್ಮಿಟ್ ಅಗತ್ಯವಿರುವುದಿಲ್ಲ. ಆದರೆ ಕರ್ನಾಟಕಕ್ಕೆ ಅನ್ಯ ರಾಜ್ಯಗಳಿಂದ ಆಗಮಿಸುವವರು ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿರುವ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕಿದೆ.
ಸಾರ್ವಜನಿಕ ಸೇವೆ ಪುನಾರಂಭಿಸಲು ತೀರ್ಮಾನ
ಸರಕು ಮತ್ತು ಸಾಗಾಣಿಕೆಗೆ ಮಾತ್ರ ಸಪ್ಟೆಂಬರ್ ತಿಂಗಳ ಆರಂಭದಲ್ಲಿ ಅನುಮತಿ ನೀಡಲಾಗಿತ್ತು. ಸಪ್ಟೆಂಬರ್.22 ರಿಂದ ಸಾರ್ವಜನಿಕ ಸಾರಿಗೆ ಪುನಾರಂಭಿಸುವ ಬಗ್ಗೆ ಅನ್ ಲಾಕ್ 4.0 ನಲ್ಲಿ ಸುಳಿವು ನೀಡಲಾಗಿದ್ದು, ಇದೀಗ ರಾಜ್ಯದಿಂದ ಮಹಾರಾಷ್ಟ್ರಕ್ಕೆ ಸರ್ಕಾರಿ ಬಸ್ ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ನಾಲ್ಕು ದಿನಗಳಲ್ಲೇ ಎರಡು ರಾಜ್ಯಗಳ ನಡುವೆ ಸರ್ಕಾರಿ ಬಸ್ ಗಳ ಸಂಚಾರ ಪುನಾರಂಭಗೊಳ್ಳಲಿದೆ.
ಕರುನಾಡನ ಪಾಲಿಗೆ ಕಂಟಕವಾಗುತ್ತಾ ಮಹಾರಾಷ್ಟ್ರ?
ಕೊರೊನಾವೈರಸ್ ಸೋಂಕಿ ಪ್ರಕರಣಗಳ ಸಂಖ್ಯೆಯಲ್ಲೇ ಮಹಾರಾಷ್ಟ್ರದ ಪರಿಸ್ಥಿತಿ ತೀರಾ ಶೋಚನೀಯವಾಗಿದೆ. ಪ್ರತಿನಿತ್ಯ ನೆರೆರಾಜ್ಯದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯು ನಡುಕ ಹುಟ್ಟಿಸುವ ರೀತಿಯಲ್ಲಿ ಏರಿಕೆಯಾಗುತ್ತಿದೆ. ಇಂಥ ಅಪಾಯಕಾರಿ ಸನ್ನಿವೇಶದಲ್ಲಿ ನೆರೆರಾಜ್ಯಕ್ಕೆ ಕೆಎಸ್ಆರ್ ಟಿಸಿ ಬಸ್ ಸಂಚಾರ ಆರಂಭಿಸಿರುವುದು ಮತ್ತಷ್ಟು ಆತಂಕವನ್ನು ಸೃಷ್ಟಿ ಮಾಡುವಂತಿದೆ. ಕರ್ನಾಟಕದ ಪಾಲಿಗೆ ಮಹಾರಾಷ್ಟ್ರವು ಮತ್ತೊಮ್ಮೆ ಕಂಟಕವಾಗುತ್ತದೆಯೇ ಎಂಬ ಭೀತಿಯನ್ನು ಹುಟ್ಟಿಸುತ್ತಿದೆ.
Recommended Video
ಮಹಾರಾಷ್ಟ್ರದಲ್ಲಿ ಕೊವಿಡ್19 ಪ್ರಕರಣಗಳ ಮಿತಿ ಮೀರಿದೆ
ದೇಶದಲ್ಲೇ ಅತಿಹೆಚ್ಚು ಕೊವಿಡ್-19 ಸೋಂಕಿತ ಪ್ರಕರಣಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಅಗ್ರಸ್ಥಾನದಲ್ಲಿದೆ. ರಾಜ್ಯದಲ್ಲಿ 1145840 ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ಈವರೆಗೂ ದೃಢಪಟ್ಟಿದೆ. 31351 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. 812354 ಸೋಂಕಿತರು ಗುಣಮುಖರಾಗಿದ್ದು, 301752 ಸಕ್ರಿಯ ಪ್ರಕರಣಗಳಿರುವುದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಅಂಕಿ-ಅಂಶಗಳಿಂದ ತಿಳಿದು ಬಂದಿದೆ.