ಭೀಕರ ಮಳೆ ಹಿನ್ನೆಲೆ: ಕೆಎಸ್ಆರ್ ಟಿಸಿ ಲಿಖಿತ ಪರೀಕ್ಷೆ ಮುಂದೂಡಿಕೆ
ಬೆಂಗಳೂರು, ಆಗಸ್ಟ್ 23: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೆಎಸ್ಆರ್ ಟಿಸಿ ಮೇಲ್ವಿಚಾರಕೇತರ ಹಾಗೂ ತಾಂತ್ರಿಕ್ ಸಿಬ್ಬಂದಿಗಳ ನೇಮಕಾತಿ ಪರೀಕ್ಷೆಯನ್ನು ಮುಂದೂಡಲಾಗಿದೆ.
ಆಗಸ್ಟ್ 25 ಮತ್ತು 26ರಂದು ನಡೆಸಲು ಉದ್ದೇಶಿಸಲಾಗಿದ್ದ,ಕೆಎಸ್ಆರ್ ಟಿಸಿ ಲಿಖಿತ ಪರೀಕ್ಷೆಯನ್ನು ಮುಂದೂಡಲಾಗಿದೆ.ಕೆಲ ದಿನಗಳ ಹಿಂದಷ್ಟೇ ಪೊಲೀಸ್ ಇಲಾಖೆ ಇದೇ ತಿಂಗಳು 9 ರಂದು ನಡೆಯಬೇಕಿದ್ದ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಲಿಖಿತ ಪರೀಕ್ಷೆಯನ್ನ ಮುಂದೂಡಿತ್ತು.
200 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಕೆಎಸ್ಆರ್ಟಿಸಿ
ಆದರೆ ಕೆಎಸ್ಆರ್ಟಿಸಿ ಪರೀಕ್ಷೆಯನ್ನು ಮುಂದೂಡಿರಲಿಲ್ಲ. ಸಹಾಯಕ ಲೆಕ್ಕಿಗ 71, ಸಹಾಯಕ ಸಂಚಾರ ನಿರೀಕ್ಷಕ 128, ಸಹಾಯಕ ಉಗ್ರಾಣ ರಕ್ಷಕ 34, ಅಂಕಿ ಅಂಶ ಸಹಾಯಕ 41 ಹುದ್ದೆಗಳಿಗೆ 2016 ರಲ್ಲಿ ಅರ್ಜಿ ಆಹ್ವಾನಿಸಿತ್ತು. 2016 ರಿಂದ ಅರ್ಜಿ ಹಾಕಿ ಲಿಖಿತ ಪರೀಕ್ಷೆಗಾಗಿ ಕಾಯುತ್ತಿದ್ದ ಲಕ್ಷಾಂತರ ಅಭ್ಯರ್ಥಿಗಳು ಅವಕಾಶದಿಂದ ವಂಚಿತರಾಗಲಿದ್ದರು.
ಇದರಿಂದ ಪ್ರವಾಹ ಪೀಡಿತ ಜಿಲ್ಲೆಗಳ ಅಭ್ಯರ್ಥಿಗಳೂ ಸಹ ಆತಂಕಗೊಂಡಿದ್ದರು. ಮನವಿಯನ್ನು ಪರಿಗಣಿಸಿ,ಪರಿಸ್ಥಿತಿಯನ್ನು ಅವಲೋಕಿಸಿ ಸಾರಿಗೆ ಸಚಿವರು ಉದ್ದೇಶಿತ ಲಿಖಿತ ಪರೀಕ್ಷಾ ದಿನಾಂಕವನ್ನು ಮುಂದೂಡಲು ಸೂಚಿಸಿದ್ದಾರೆ, ಇದೀಗ ಕೆಎಸ್ಆರ್ಟಿಸಿ ಇಲಾಖೆಯೂ ಪರೀಕ್ಷೆಯನ್ನು ಮುಂದೂಡಿದ್ದು ಅಭ್ಯರ್ಥಿಗಳ ಮುಖದಲ್ಲಿ ಸಂತಸ ಮೂಡಿದೆ.
ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?
ಮುಂದಿನ ಪರೀಕ್ಷಾ ದಿನಾಂಕವನ್ನು ಕೆಎಸ್ಆರ್ಟಿಸಿ ವೆಬ್ಸೈಟ್ ಹಾಗೂ ಪತ್ರಿಕಾ ಪ್ರಕಟಣೆ ಯ ಮೂಲಕ ತಿಳಿಸಲಾಗುವುದು ಎಂದು ಇಲಾಖೆ ತಿಳಿಸಿದೆ.