ಭಾರಿ ಮಳೆ: ಪ್ರಯಾಣಿಕರ ಅನುಕೂಲಕ್ಕೆ ಕೆಎಸ್ಆರ್ಟಿಸಿ ಕ್ರಮ
ಬೆಂಗಳೂರು, ಆಗಸ್ಟ್ 06: ರಾಜ್ಯದ ಹಲವೆಡೆ ಭಾರಿ ಮಳೆ ಆಗುತ್ತಿದ್ದು, ಸಾರ್ವಜನಿಕರು ತೊಂದರೆಗೊಳಗಾಗಿದ್ದಾರೆ. ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಮಳೆ ಪೀಡಿತ ಪ್ರದೇಶಗಳಲ್ಲಿ ಜಿಲ್ಲಾಡಳಿತ, ತಾಲ್ಲೂಕು ಆಡಳಿತಗಳು ಜನರಿಗೆ ಸಮಸ್ಯೆ ಆಗದಂತೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿವೆ. ಇದರ ನಡುವೆ ಕೆ.ಎಸ್.ಆರ್.ಟಿ.ಸಿ ಸಹ ಪ್ರಯಾಣಿಕರಿಗೆ ಸಮಸ್ಯೆ ಆಗದಂತೆ ಕ್ರಮಕೈಗೊಳ್ಳಲು ಎಲ್ಲಾ ಡಿಪೋಗಳಿಗೆ ಆದೇಶ ಹೊರಡಿಸಿದೆ.
ಬೆಂಗಳೂರು-ಪುಣೆ ಹೆದ್ದಾರಿಯಲ್ಲಿ ಭಾರೀ ಕುಸಿತ; ನಾಳೆ ಮಧ್ಯಾಹ್ನದವರೆಗೂ ಸಂಚಾರ ಇಲ್ಲ
ಮಳೆ ಹೆಚ್ಚಾಗಿರುವ ಪ್ರದೇಶದಲ್ಲಿ ರಸ್ತೆ ಕುಸಿತ, ರಸ್ತೆ ತಡೆ ಇನ್ನಿತರ ಮಾಹಿತಿಗಳನ್ನು ಕಾಲಕಾಲಕ್ಕೆ ಪಡೆದುಕೊಂಡು, ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಬಸ್ಸುಗಳ ಲಭ್ಯತೆ, ಅಲಭ್ಯತೆಯ ಬಗ್ಗೆ ಮಾಹಿತಿ ನೀಡುವ ಹೊಣೆಯನ್ನು ಎಲ್ಲಾ ಕೆಎಸ್ಆರ್ಟಿಸಿ ವಿಭಾಗೀಯ ಅಧಿಕಾರಿಗಳಿಗೆ ವಹಿಸಲಾಗಿದೆ.
ಡಿಡಿಪಿಐ, ಪೊಲೀಸ್ ಇಲಾಖೆ, ಜಿಲ್ಲಾಡಳಿತದೊಂದಿಗೆ ವಿಭಾಗೀಯ ಅಧಿಕಾರಿಗಳು ಸತತ ಸಂಪರ್ಕದಲ್ಲಿದ್ದು ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯ ಅನುಕೂಲಕರವಾಗುವಂತೆ ಕ್ರಮ ಕೈಗೊಳ್ಳಬೇಕು. ಶಾಲೆ-ಕಾಲೇಜು ರಜೆ ಘೋಶಿಸಿದ್ದ ಕಡೆ ಅದಕ್ಕೆ ತಕ್ಕಂತೆ ಅಗತ್ಯ ಕ್ರಮ ಕೈಗೊಳ್ಳಬೇಕು.
ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿದವರಿಗೆ ಹಾಗೂ ಅತಿ ಅವಶ್ಯಕವಾಗಿ ಮಳೆ ಪೀಡಿತ ಪ್ರದೇಶದಿಂದ ಹೊರಗೆ ಹೋಗುವ ಪ್ರಯಾಣಿಕರಿಗೆ ಪರ್ಯಾಯ ಹಾದಿಯಲ್ಲಿ ಬಸ್ಗಳ ವ್ಯವಸ್ಥೆ ಕಲ್ಪಿಸಬೇಕು ಎಂದು ವಿಭಾಗಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಕಲ್ಲತ್ತಗಿರಿಯಲ್ಲಿ ಉಕ್ಕಿ ಹರಿದಿದೆ ನೀರು; ಸಿಲುಕಿಕೊಂಡ ಪ್ರವಾಸಿಗರು
ಮುಂಗಡ ಕಾಯ್ದಿರಿಸಿದ ಟಿಕೆಟ್ಗಳನ್ನು ಅನಿವಾರ್ಯ ಕಾರಣದಿಂದ ರದ್ದು ಮಾಡುವಂತಾದಲ್ಲಿ, ಮೊದಲೇ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಹಾಗೂ ಕೇಂದ್ರ ಕಚೇರಿಯ ಅವತಾರ್/ ನಿಯಂತ್ರಣ ಕೊಠಡಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು ಎಂದು ಸಹ ಸೂಚನೆ ನೀಡಲಾಗಿದೆ.
ವಿಭಾಗ ಮಟ್ಟದಲ್ಲಿ 24*7 ನಿಯಂತ್ರಣ ಕೊಠಡಿ ಸ್ಥಾಪಿಸಿ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲು ವ್ಯವಸ್ಥೆ ಮಾಡಬೇಕು, ಜೊತೆಗೆ ವಲಯವಾರು ಉಸ್ತುವಾರಿ ಅಧಿಕಾರಿಗಳ ಅಥವಾ ಸಿಬ್ಬಂದಿಗಳ ತಂಡ ರಚಿಸಲು ಸೂಚನೆ ನೀಡಲಾಗಿದೆ.
ನೆರೆ ಪ್ರದೇಶದ ಪರಿಸ್ಥಿತಿ, ಅವಘಡ ಇನ್ನಿತರೆ ಮುಖ್ಯ ಮಾಹಿತಿಗಳನ್ನು ಕೂಡಲೇ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಬೇಕು ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ವಲಯ ವಿಭಾಗಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.