ಕೆರೆಗೆ ಜಿಗಿದು ಹೆಣ್ಣು ಮಕ್ಕಳ ಜೀವ ರಕ್ಷಿಸಿದ KSRTC ಚಾಲಕ: ಪ್ರಶಂಸೆ
ಇಬ್ಬರು ಹೆಣ್ಣುಮಕ್ಕಳನ್ನು ರಕ್ಷಿಸಬೇಕು ಎಂದು ರಸ್ತೆ ಬದಿ ನಿಂತು ಅಂಗಲಾಚುತ್ತಿದ್ದ ಮಹಿಳೆಯನ್ನು ಕಂಡ ಕೆಎಸ್ಆರ್ಟಿಸಿ ಬಸ್ ಚಾಲಕ ತಕ್ಷಣವೇ ಬಸ್ ನಿಲ್ಲಿಸಿ ಕೆರೆಗೆ ಜಿಗಿದು ಎರಡು ಜೀವ ಕಾಪಾಡಿದ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು, ಜನವರಿ 30: ಇಬ್ಬರು ಹೆಣ್ಣುಮಕ್ಕಳನ್ನು ರಕ್ಷಿಸಬೇಕು ಎಂದು ರಸ್ತೆ ಬದಿ ನಿಂತು ಅಂಗಲಾಚುತ್ತಿದ್ದ ಮಹಿಳೆಯನ್ನು ಕಂಡ ಕೆಎಸ್ಆರ್ಟಿಸಿ ಬಸ್ ಚಾಲಕ ತಕ್ಷಣವೇ ಬಸ್ ನಿಲ್ಲಿಸಿ ಕೆರೆಗೆ ಜಿಗಿದು ಎರಡು ಜೀವ ಕಾಪಾಡಿದ ಘಟನೆ ತುಮಕೂರಿನಲ್ಲಿ ನಡೆದಿದೆ.
ಭಾನುವಾರ ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ಹಂದಿಗುಂಟೆ ಗೇಟ್ ಬಳಿ ಇರುವ ಕೆರೆಗೆ ಬಿದ್ದ ಇಬ್ಬರ ಹೆಣ್ಣು ಮಕ್ಕಳನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)ದ ಬಸ್ ಚಾಲಕ ಎಂ ಮಂಜುನಾಥ್ (38) ಅವರು ರಕ್ಷಣೆ ಮಾಡಿದ್ದಾರೆ.
ಸಿರಾ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಟಿಬಿ ಜಯಚಂದ್ರ ಆಸ್ತಿ ವಿವರ
ಬಸ್ ಚಾಲಕ ಮಂಜುನಾಥ್ ಅವರು, ನಾನು ಸಿರಾದಿಂದ ನಾಗಪ್ಪನಹಳ್ಳಿ ಗೇಟ್ ಕಡೆಗೆ ಸುಮಾರು 40 ಕ್ಕೂ ಹೆಚ್ಚು ಪ್ರಯಾಣಿಕರನ್ನು ಕರೆ ತರುತ್ತಿದ್ದೆ. ಈ ವೇಳೆ ಮಧ್ಯಾಹ್ನ ಹಂದಿಗುಂಟೆ ಗೇಟ್ನಲ್ಲಿ ಮಹಿಳೆಯೊಬ್ಬರು ಬಸ್ ಅನ್ನು ನಿಲ್ಲಿಸಿದರು. ರಸ್ತೆ ಬದಿಯ ಕೆರೆಯಲ್ಲಿ ಬಿದ್ದಿದ್ದ ತನ್ನ ಇಬ್ಬರು ವಿದ್ಯಾರ್ಥಿನಿಯರನ್ನು ಮಕ್ಕಳನ್ನು ರಕ್ಷಿಸುವಂತೆ ಕಣ್ಣೀರಿಡುತ್ತಾ ಕೇಳಿಕೊಂಡರು ಎಂದು ಅವರು ವಿವರಿಸಿದರು.
ಈಜು ಗೊತ್ತಿದ್ದವರಾದ್ದರಿಂದ ಕೂಡಲೇ ಕೆರೆಗೆ ಜಿಗಿದ ಚಾಲಕ ಮಂಜುನಾಥ್ ಅವರು ಇಬ್ಬರು ಹೆಣ್ಣುಮಕ್ಕಳಾದ ಪಿಯು ವಿದ್ಯಾರ್ಥಿನಿ ಸುಷ್ಮಾ (17) ಮತ್ತು ಆಕೆಯ ಸಹೋದರಿ 6 ನೇ ತರಗತಿ ವಿದ್ಯಾರ್ಥಿನಿ ಮಂಜುಳಾ (12) ಅವರನ್ನು ರಕ್ಷಿಸಿದ್ದಾರೆ. ಇವರಿಬ್ಬರು ಸಾಕಷ್ಟು ನೀರು ಕುಡಿದಿದ್ದರಿಂದ ಪ್ರಜ್ಞಾಹೀನರಾಗಿದ್ದರು. ಒಂದು ನಿಮಿಷ ತಡವಾಗಿದ್ದರೂ ಪರಿಸ್ಥಿತಿ ಕೈ ಮೀರಿ ಹೋಗಿರುತ್ತಿತ್ತು ಎಂದು ಹೇಳಿದರು.
ಮಹಿಳೆ ಹಾಗೂ ಅವರ ಇಬ್ಬರು ಹೆಣ್ಣುಮಕ್ಕಳು ಕೆರೆಯಲ್ಲಿ ಬಟ್ಟೆ ಒಗೆಯುತ್ತಿದ್ದರು. ಈ ವೇಳೆ ಇಬ್ಬರು ವಿದ್ಯಾರ್ಥಿನಿಯರು ಕಾಲು ಜಾರಿ ಬಿದ್ದಿದ್ದಾರೆ. ಮಂಜುನಾಥ್ ಸಾರಿಗೆ ಇಲಾಖೆಯಲ್ಲಿ 15 ವರ್ಷ ಸೇವೆ ಸಲ್ಲಿಸಿದ್ದಾರೆ. ಐದು ವರ್ಷಗಳಿಂದ ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ. ಈ ಇಬ್ಬರು ಹೆಣ್ಣುಮಕ್ಕಳನ್ನು ಅನೇಕ ಬಾರಿ ಶಾಲೆ/ಕಾಲೇಜಿನಿಂದ ಮನೆಗೆ ಬಸ್ನಲ್ಲಿ ಕರೆದೊಯ್ದಿದ್ದೆ. ಆ ಎರಡು ಜೀವಗಳು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿವೆ ಎಂದರು.
ನಿಗಮ, ಸಾರ್ವಜನಿಕರ ಪ್ರಶಂಸೆ
ಹೆಣ್ಣು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಘಟನೆ ನಂತರ ಸಮವಸ್ತ್ರದಲ್ಲಿದ್ದ ಅವರು ಒದ್ದೆ ಬಟ್ಟೆಯಲ್ಲೆ ಬಸ್ ಚಾಲನೆ ಮುಂದುವರಿಸಿದರು. ಚಾಲಕ ಮಂಜುನಾಥ್ ಅವರ ಈ ಸಾಹಸ ಕಾರ್ಯಕ್ಕೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶಿರಾ ಘಟಕದ ಚಾಲಕರಾದ ಮಂಜುನಾಥ್ ಅವರನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅಭಿನಂದಿಸಿದ್ದಾರೆ. ಸದರಿ ಚಾಲಕರ ಮಾನವೀಯತೆ, ಸಮಯೋಚಿತ ಕಾರ್ಯದಿಂದ ಎರಡು ಅತ್ಯಮೂಲ್ಯ ಜೀವ ಉಳಿದಿವೆ. ಇವರ ಮಾದರಿ ಕಾರ್ಯ ಅನನ್ಯವೆಂದು ಬಣ್ಣಿಸಿದ್ದಾರೆ. ನಮ್ಮ ಸಿಬ್ಬಂದಿ ಕಾರ್ಯತತ್ಪರತೆ ಸಂಸ್ಥೆಗೆ ಹೆಮ್ಮೆ ಮತ್ತು ಗೌರವ ತಂದಿದೆ ಎಂದು ಕೊಂಡಾಡಿದರು.