ಹಂಪಿ- ತುಂಗಭದ್ರಾಕ್ಕೆ ಕೆಎಸ್ಆರ್ಟಿಸಿ ಟೂರ್ ಪ್ಯಾಕೇಜ್
ಬೆಂಗಳೂರು ಸೆಪ್ಟಂಬರ್ 29, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಬೆಂಗಳೂರು-ಹಂಪಿ- ತುಂಗಭದ್ರಾ ಮಾರ್ಗದಲ್ಲಿ ಒಂದು ದಿನದ ಟೂರ್ ಪ್ಯಾಕೇಜನ್ನು ಅಕ್ಟೋಬರ್ 1ರಿಂದ ಪುನರಾರಂಭ ಮಾಡಲಿದೆ.
ಕೆಎಸ್ಆರ್ಟಿಸಿ ಈ ಮೊದಲು ಪ್ಯಾಕೇಜ್ ಪ್ರವಾಸಗಳನ್ನು ನಡೆಸುತ್ತಿತ್ತು. ಆದರೆ, ಕೋವಿಡ್-19 ಕಾರಣದಿಂದಾಗಿ ಇದನ್ನು ನಿಲ್ಲಿಸಲಾಗಿತ್ತು. ಈಗ ಮತ್ತೆ ಹಂಪಿ-ತುಂಗಭದ್ರಕ್ಕೆ ಹವಾ ನಿಯಂತ್ರಿತ ರಹಿತ (ನಾನ್ ಎಸಿ) ಬಸ್ಗಳ ಮೂಲಕ ಸಂಚಾರ ಪುನರಾರಂಭಿಸಿದೆ. ವಯಸ್ಕರಿಗೆ 2,500 ರೂ ಮತ್ತು ಮಕ್ಕಳಿಗೆ (6ರಿಂದ 12) 2,300 ರೂ. ನಿಗದಿ ಮಾಡಲಾಗಿದೆ.
ರಾತ್ರಿ 10ಕ್ಕೆ ಬೆಂಗಳೂರಿನಿಂದ ಹೊರಟು ಬೆಳಗ್ಗೆ 4ಕ್ಕೆ ಹೊಸಪೇಟೆ ತಲುಪುತ್ತದೆ. ಬೆಳಗ್ಗೆ ವಿರಾಮದ ನಂತರ ಬೆಳಗ್ಗೆ 8ಕ್ಕೆ ಹೊಸಪೇಟೆಯಿಂದ ಹೊರಟು ಹಂಪಿ ತಲುಪುತ್ತದೆ. ವಿಜಯ ವಿಠಲ ದೇವಸ್ಥಾನ, ವಿರೂಪಾಕ್ಷ ಸ್ವಾಮಿ ದೇವಸ್ಥಾನ, ಸಾಸಿವೆ ಕಾಳು, ಕಡಲೆ ಕಾಳು ಗಣಪ, ಬಡವಿಲಿಂಗ ಆನೆಗಳ ಅಶ್ವಶಾಲೆ, ಕಲ್ಯಾಣಿ, ಕಮಲ್ ಮಹಲ್, ಮಹಾನವಮಿ ದಿಬ್ಬ, ರಾಣಿಯರ ಈಜುಕೊಳ ವೀಕ್ಷಣೆಗೆ ಅವಕಾಶ ಒದಗಿಸಲಾಗುತ್ತದೆ. ಸಂಜೆ 5 ಗಂಟೆಗೆ ತುಂಗಭದ್ರಾ ಆಣೆಕಟ್ಟು ಬಳಿ ತೆರಳಲಾಗುತ್ತದೆ. ಸಂಜೆಯ ಸಂಗೀತ ಕಾರಂಜಿ ವೀಕ್ಷಣೆ ಮಾಡಲಾಗುತ್ತದೆ. ರಾತ್ರಿ 8 ಕ್ಕೆ ಮರಳಿ ಹೊಸಪೇಟೆ ತಲುಪಲಾಗುತ್ತದೆ. ರಾತ್ರಿ ಊಟದ ಬಳಿಕ ಮರುದಿನ ಬೆಳಿಗ್ಗೆ 4.30ಕ್ಕೆ ಬೆಂಗಳೂರಿಗೆ ವಾಪಸಾಗಲಾಗುತ್ತದೆ.
ಈ ಪ್ಯಾಕೇಜ್ ಬೆಳಗಿನ ವಿಶ್ರಾಂತಿ, ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ಮತ್ತು ಹಂಪಿಯ ಸ್ಥಳ ವೀಕ್ಷಣೆಯ ಪ್ರವೇಶ ಟಿಕೆಟ್ಗಳನ್ನು ಒಳಗೊಂಡಿದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.
ಶಿರಡಿಗೆ ಅಂಬಾರಿ ಡ್ರೀಮ್ ಕ್ಲಾಸ್ ಬಸ್:
ಬೆಂಗಳೂರಿನಿಂದ ಶಿರಡಿಗೆ ಕೆಎಸ್ಆರ್ಟಿಸಿ ಅಕ್ಟೋಬರ್ 6ರಿಂದ ಅಂಬಾರಿ ಡ್ರೀಮ್ ಕ್ಲಾಸ್ (ಮಲ್ಟಿ ಆಕ್ಸಲ್ ಸ್ಲೀಪರ್) ಬಸ್ಗಳ ಸಂಚಾರ ಆರಂಭಿಸಲಿದೆ.
Recommended Video
ಬೆಂಗಳೂರಿನಿಂದ ಮಧ್ಯಾಹ್ನ 1ಕ್ಕೆ ಹೊರಡುವ ಬಸ್ ಮರುದಿನ ಬೆಳಿಗ್ಗೆ 8.15ಕ್ಕೆ ಶಿರಡಿ ತಲುಪುತ್ತದೆ. ಮರಳಿ ಮಧ್ಯಾಹ್ನ 1ಕ್ಕೆ ಶಿರಡಿಯಿಂದ ಹೊರಟು ಮರುದಿನ ಬೆಳಿಗ್ಗೆ 8.15 ಕ್ಕೆ ಬೆಂಗಳೂರು ತಲುಪುತ್ತದೆ. ಪ್ರಯಾಣ ದರ 1,600 ರೂ. ನಿಗದಿಪಡಿಸಲಾಗಿದೆ ಎಂದು ಕೆಎಸ್ಆರ್ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.