ಭಾರಿ ಮಳೆ, ಪ್ರವಾಹ: ವಿವಿಧೆಡೆ ಕೆಎಸ್ಆರ್ಟಿಸಿ ಬಸ್ ಸಂಚಾರ ರದ್ದು
ಬೆಂಗಳೂರು, ಆಗಸ್ಟ್ 15: ರಾಜ್ಯದ ಕರಾವಳಿ ಹಾಗೂ ನೆರೆಯ ಕೇರಳದಲ್ಲಿ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ವಿವಿಧೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಕರ್ನಾಟಕ ರಸ್ತೆ ಸಾರಿಗೆ ನಿಗಮವು (ಕೆಎಸ್ಆರ್ಟಿಸಿ) ಬಸ್ ಸಂಚಾರವನ್ನು ರದ್ದುಗೊಳಿಸಿದೆ.
ಬೆಂಗಳೂರಿನಿಂದ ಮಂಗಳೂರು, ಸುಬ್ರಮಣ್ಯ, ಧರ್ಮಸ್ಥಳ ಮತ್ತು ಕುಂದಾಪುರಕ್ಕೆ ಸಂಚರಿಸುವ ಎಲ್ಲ ರಾಜಹಂಸ, ಐರಾವತ, ಸ್ಲೀಪರ್ ಬಸ್ಗಳ ಓಡಾಟವನ್ನು ಸ್ಥಗಿತಗೊಳಿಸಲಾಗಿದೆ. ಕೇವಲ ಕರ್ನಾಟಕ ಸಾರಿಗೆಯ ವೇಗಧೂತ ಬಸ್ಗಳು ಮಾತ್ರ ಚಾರ್ಮಾಡಿ ಮಾರ್ಗವಾಗಿ ಮಂಗಳೂರಿಗೆ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.
ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆ: ಕಟ್ಟೆಚ್ಚರ ವಹಿಸಲು ಮುಖ್ಯಮಂತ್ರಿ ಸೂಚನೆ
ಶಿರಾಡಿ ಘಾಟ್ ಸಂಪರ್ಕ ಕಡಿದುಹೋಗಿರುವುದರಿಂದ ಬುಧವಾರ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಮಂಗಳೂರು, ಪುತ್ತೂರು, ಕುಂದಾಪುರ ಮುಂತಾದೆಡೆಗೆ ಹೊರಡಬೇಕಿದ್ದ ಮುಂಗಡ ಟಿಕೆಟ್ ಕಾಯ್ದಿರಿಸುವ ಒಟ್ಟು 55 ಬಸ್ಗಳು ಮತ್ತು ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಹೊರಡಬೇಕಿದ್ದ 8 ಬಸ್ಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
ಕೇರಳದ ಕಣ್ಣೂರು, ಕ್ಯಾಲಿಕಟ್, ಕಾಸರಗೋಡಿಗೆ ಸಂಚರಿಸುವ ಬಸ್ಗಳ ಸೇವೆಯನ್ನು ಸಹ ಸ್ಥಗಿತಗೊಳಿಸಲಾಗಿದೆ.
ಕಾವೇರಿ ಜಲಾನಯನ ಪ್ರದೇಶಗಳು ಜಲಾವೃತ, ಹೆಚ್ಚಿದ ನೀರಿನ ಮಟ್ಟ
ಕರಾವಳಿ, ಗಡಿಭಾಗದ ಕಾಸರಗೋಡಿನಲ್ಲಿ ಭಾರಿ ಮಳೆ ಸುರಿಯುತ್ತಿದ್ದ ರಸ್ತೆಗಳು ಜಲಾವೃತಗೊಂಡಿವೆ. ವಯನಾಡು ಜಿಲ್ಲೆಯ ಸುಲ್ತಾನ್ ಬತೇರಿಯ ಜಲಾವೃತ ರಸ್ತೆಯಲ್ಲಿ ಮಂಗಳವಾರ ರಾತ್ರಿ ಕೆಎಸ್ಆರ್ಟಿಸಿಯ ಐರಾವತ ಬಸ್ ಕೆಟ್ಟು ನೀರಿನ ನಡುವೆ ಸಿಲುಕಿಕೊಂಡಿದೆ.
ಬಸ್ನಲ್ಲಿದ್ದ ಪ್ರಯಾಣಿಕರನ್ನು ಬೇರೆ ಬಸ್ಗೆ ಸುರಕ್ಷಿತವಾಗಿ ಹತ್ತಿಸಿ ಕಳುಹಿಸಲಾಯಿತು.
ಸೇಲಂ ಮೂಲಕ ಕೇರಳಕ್ಕೆ ತಲುಪುವ ಕೆಎಸ್ಆರ್ಟಿಸಿ ಸೇವೆಗಳಿಗೆ ಯಾವುದೇ ತೊಂದರೆಯಾಗಿಲ್ಲ. ಆದರೆ, ಕೇರಳ ಸಾರಿಗೆ ಸಂಸ್ಥೆಯು ಕರ್ನಾಟಕದ ನಡುವೆ ಸಂಪರ್ಕ ಕಲ್ಪಿಸುವ ಬಸ್ಗಳ ಸಂಚಾರವನ್ನು ರದ್ದುಗೊಳಿಸಿಲ್ಲ.
ಹರಿಹರಪುರ ನದಿಯಲ್ಲಿ ಸಿಲುಕಿ ಒದ್ದಾಡಿದ ಎಮ್ಮೆ, ಮುಳುಗಿದ ಸೋಂಪುರ ಸೇತುವೆ
ತಮರಸ್ಸೆರಿ ಘಾಟ್ ಮತ್ತು ಕುಟ್ಟಿಯಾಡಿಗಳಲ್ಲಿ ಕನಿಷ್ಠ ಒಂಬತ್ತು ಬಸ್ಗಳು ಸಿಲುಕಿಕೊಂಡಿದ್ದವು. ಕೇರಳದ ಹೆಚ್ಚಿನ ಬಸ್ಗಳು ಮೈಸೂರು ಮಾರ್ಗವಾಗಿ ಓಡಾಡುತ್ತಿವೆ.