ಕೆಎಸ್ಆರ್ಟಿಸಿ ಬಸ್ ಟಿಕೆಟ್ ನಲ್ಲಿ ಕೊವಿಡ್-19 ಜಾಗೃತಿ ಸಂದೇಶ
ಬೆಂಗಳೂರು, ಅಕ್ಟೋಬರ್.20: ಕೊರೊನಾವೈರಸ್ ನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಮುಖಕ್ಕೆ ಮಾಸ್ಕ್ ಧರಿಸಿ. ಸಾರ್ವಜನಿಕ ಪ್ರದೇಶಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ. ಆಗಾಗ ಕೈಗಳನ್ನು ಶುದ್ಧವಾಗಿ ತೊಳೆದುಕೊಳ್ಳಿ. ಸ್ಯಾನಿಟೈಸರ್ ಬಳಸಿ ನಿಮ್ಮನ್ನು ನೀವು ರಕ್ಷಿಸಿ. ಹೀಗೆ ಕೊವಿಡ್-19 ಸೋಂಕು ನಿಯಂತ್ರಣಕ್ಕೆ ಸರ್ಕಾರವು ಸೂಚನೆಗಳನ್ನು ನೀಡುತ್ತಿದೆ.
ಪ್ರತಿನಿತ್ಯ ಬಳಸುವ ಮೊಬೈಲ್ ಕಾಲರ್ ಟ್ಯೂನ್ ನಿಂದ ಹಿಡಿದು ಸಾರ್ವಜನಿಕ ಪ್ರದೇಶಗಳಲ್ಲಿ ಬ್ಯಾನರ್, ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕ ಪ್ರಕಟಣೆಗಳಲ್ಲಿ ಕೊರೊನಾವೈರಸ್ ಸೋಂಕು ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ಭಾರತದಲ್ಲಿ 100ರಲ್ಲಿ 50 ಮಂದಿಗೆ ಕೊರೊನಾವೈರಸ್ ಪಕ್ಕಾ!
ರಾಜ್ಯದಲ್ಲಿ ಪ್ರತಿನಿತ್ಯ ಸಾವಿರಾರು ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗುತ್ತಿದೆ. ಇಂಥ ಸಂದರ್ಭದಲ್ಲಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಹೊಸ ಜಾಗೃತಿ ಮಾರ್ಗವನ್ನು ಕಂಡುಕೊಂಡಿದೆ. ಪ್ರತಿನಿತ್ಯ ಬಸ್ ಗಳಲ್ಲಿ ಸಂಚರಿಸುವ ಪ್ರಯಾಣಿಕರಲ್ಲಿ ಕೊವಿಡ್-19 ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ಬಸ್
ಟಿಕೆಟ್
ನಲ್ಲಿ
ಕೊವಿಡ್-19
ಜಾಗೃತಿ
ಸಂದೇಶ:
ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ನೀಡುವ ಬಸ್ ಟಿಕೆಟ್ ನಲ್ಲಿ ಕೊರೊನಾವೈರಸ್ ಸೋಂಕು ಹರಡದಂತೆ ಯಾವೆಲ್ಲ ನಿಯಂತ್ರಣ ಕ್ರಮಗಳನ್ನು ಅನುಸರಿಸಬೇಕು ಎಂಬ ಸಂದೇಶವನ್ನು ಮುದ್ರಿಸಲಾಗುತ್ತಿದೆ. ಬಸ್ ಟಿಕೆಟ್ ನಲ್ಲಿ "ಮಾಸ್ಕ್ ಧರಿಸಿ, ದೈಹಿಕ ಅಂತರ ಕಾಪಾಡಿ, ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಆರಂಭಿಕ ಕೊವಿಡ್-19 ಪರೀಕ್ಷೆಯು ಜೀವವನ್ನು ಕಾಪಾಡುತ್ತದೆ" ಎಂದು ಮುದ್ರಿಸಲಾಗಿದೆ.
ಕರ್ನಾಟಕದಲ್ಲಿ ಒಂದೇ ದಿನ 5,018 ಹೊಸ ಕೋವಿಡ್-19 ಪ್ರಕರಣಗಳು ಹಾಗೂ 8,005 ಚೇತರಿಕೆ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ 1,06,214 ಸಕ್ರಿಯ ಪ್ರಕರಣಗಳಿದ್ದು, ಈವರೆಗೂ ಒಟ್ಟು 6,53,829 ಸೋಂಕಿತರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಕಳೆದ 24 ಗಂಟೆಗಳಲ್ಲಿ 64 ಮಂದಿ ಮೃತಪಟ್ಟಿದ್ದು, ಒಟ್ಟು 10,542 ಮಂದಿ ಪ್ರಾಣ ಬಿಟ್ಟಿದ್ದಾರೆ. ಕರ್ನಾಟಕದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 7,70,604ಕ್ಕೆ ಏರಿಕೆಯಾಗಿದೆ.