ಸಾರಿಗೆ ಮುಷ್ಕರ: ಕೋಡಿಹಳ್ಳಿ ಚಂದ್ರಶೇಖರ್ ಹಿಂದಿರುವ ಆ ಕಾಣದ 'ಕೈ'!
ಕನ್ನಡಪರ ಸಂಘಟನೆಗಳ ಹೋರಾಟದಲ್ಲೂ ಕೋಡಿಹಳ್ಳಿ, ರೈತರ ಚಳುವಳಿಯಲ್ಲೂ ಕೋಡಿಹಳ್ಳಿ, ಇನ್ನೂ, ಸಾರಿಗೆ ಸಂಸ್ಥೆಯ ನೌಕರರ ಹೋರಾಟದಲ್ಲೂ ಕೋಡಿಹಳ್ಳಿ ಚಂದ್ರಶೇಖರ್ ಅಂದರೆ.. ಸಾರಿಗೆ ನೌಕರರ ಪ್ರತಿಭಟೆನೆಗೂ, ಕೋಡಿಹಳ್ಳಿಗೂ ಎಲ್ಲಿಂದ ಸಂಬಂಧ? ಈ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕಾಡುವುದು ಸಹಜ.
Recommended Video
ಬೇರೆ ನೌಕರರ ಹೋರಾಟದಲ್ಲಿ ಕೋಡಿಹಳ್ಳಿಯವರು ಭಾಗವಹಿಸಬಾರದು ಎನ್ನುವ ಕಾನೂನು ಏನೂ ಇಲ್ಲ. ಆದರೂ, ಟ್ರೇಡ್ ಯೂನಿಯನ್ ಮುಖಂಡರೇ ಹೇಳುವಂತೆ, ನಮ್ಮ ಹೋರಾಟದಲ್ಲಿ ಕೋಡಿಹಳ್ಳಿಯವರಿಗೆ ಕೆಲಸವೇನು? ಹಾಗಾದರೆ, ರಾತ್ರೋರಾತ್ರಿ ಕೋಡಿಹಳ್ಳಿಯವರು ಪ್ರತಿಭಟನೆಯ ನೇತೃತ್ವ ವಹಿಸಲು ಅವರನ್ನು ಯಾರದಾರೂ ಮುಂದೆ ಬಿಟ್ಟರೇ?
ಕೋಡಿಹಳ್ಳಿ ಚಂದ್ರಶೇಖರ್ ಕುರಿತು ಯಡಿಯೂರಪ್ಪ ಮಹತ್ವದ ಹೇಳಿಕೆ!
ಅದೇನೇ ಇರಲಿ.. ರಾಜ್ಯದ ಜೀವನಾಡಿ ವ್ಯವಸ್ಥೆಯ ಬಿಎಂಟಿಸಿ ಮತ್ತು ಕೆಎಸ್ಆರ್ ಟಿಸಿ ನೌಕರರ ಮುಷ್ಕರದಿಂದ ಹೈರಾಣವಾಗುತ್ತಿರುವವರು ಇಡೀ ರಾಜ್ಯದ ಜನತೆ. ಕೊರೊನಾದಿಂದ ಈಗತಾನೇ ಸ್ವಲ್ಪ ಚಿಗುರುತ್ತಿರುವ ದೈನಂದಿನ ಜೀವನಕ್ಕೆ , ಸಾರಿಗೆ ನೌಕರರ ಮುಷ್ಕರ ಗಾಯದ ಮೇಲೆ ಬರೆ ಎಳೆದಂತಾಗಿದೆ.
BREAKING: ಈಗ 11 ಗಂಟೆಗೆ ಸಾರಿಗೆ ನೌಕರರ ಮುಷ್ಕರ ವಾಪಾಸ್!
ಸಾಂಕೇತಿಕವಾಗಿ ನಡೆಯಬೇಕಾಗಿದ್ದ ಸಾರಿಗೆ ಸಂಸ್ಥೆಯ ನೌಕರರ ಮುಷ್ಕರ, ಈ ಮಟ್ಟಿಗೆ ಯಡಿಯೂರಪ್ಪ ಸರಕಾರಕ್ಕೆ ದುಃಸ್ವಪ್ನವಾಗಿ ಕಾಡುತ್ತಿದೆ ಎಂದರೆ ಇದಕ್ಕೆ ಕಾರಣ ಏನು? ಈ ಪ್ರಶ್ನೆ ಎದುರಾದಾಗ, ಸಹಜವಾಗಿ ಕಾಡುವುದು ಸರಕಾರದ ಉದಾಶೀನತೆ ಮತ್ತು ಸಾರಿಗೆ ಸಚಿವರ ವರ್ಕ್ ಎಫಿಸಿಯೆನ್ಸಿ.
ಸಾರಿಗೆ ಸಚಿವ ಕಮ್ ಉಪಮುಖ್ಯಮಂತ್ರಿಯಾಗಿರುವ ಲಕ್ಷ್ಮಣ ಸವದಿ
ಸಾರಿಗೆ ಸಚಿವ ಕಮ್ ಉಪಮುಖ್ಯಮಂತ್ರಿಯಾಗಿರುವ ಲಕ್ಷ್ಮಣ ಸವದಿಯವರ ಕಾರ್ಯಸಮಕ್ಷತೆಯ ಬಗ್ಗೆ ಲೋಪದೋಷದ ದೂರು ಹಿಂದೆ ಕೂಡಾ ಇತ್ತು. ಆಯಕಟ್ಟಿನ ಸ್ಥಾನದಲ್ಲಿರುವ ಸವದಿ ಸಾಹೇಬ್ರು, ಈಗ ನಡೆಯುತ್ತಿರುವ ಸಾರಿಗೆ ಸಂಸ್ಥೆ ನೌಕರರ ಪ್ರತಿಭಟನೆಯನ್ನು ಡೋಂಟ್ ಕೇರ್ ಮಾಡಿದ್ದು, ಪ್ರತಿಭಟನಾಕಾರರ ಮನವೊಲಿಸಲು ಮೊದಲೇ ಮುಂದಾಗದೇ ಇರುವುದು, ಅದಕ್ಕಿಂತೆ ಹೆಚ್ಚಾಗಿ ಪ್ರತಿಷ್ಥೆಗೆ ಬಿದ್ದದ್ದು, ಈ ಸಮಸ್ಯೆಗೆ ಕಾರಣವಾಗಿದ್ದು ಎನ್ನುವುದನ್ನು ಯಡಿಯೂರಪ್ಪನವರೂ ಒಪ್ಪಿಕೊಂಡಂತಹ ವಿಚಾರ.
ಒಂದು ಹಂತಕ್ಕೆ ಮುಷ್ಕರ ಹಿಂಪಡೆಯಲಾಗಿದ್ದರೂ, ಮತ್ತೆ ಮುಂದುವರಿಯಿತು
ಇರಲಿ.. ನೌಕರರ ಡಿಮಾಂಡ್ ಏನೇನು ಇದೆಯೋ ಅದನ್ನೆಲ್ಲಾ ಬಹುತೇಕ ಸರಕಾರ ಒಪ್ಪಿಕೊಂಡರೂ, ಭಾನುವಾರ (ಡಿ 13) ಸಾಯಂಕಾಲ ಒಂದು ಹಂತಕ್ಕೆ ಮುಷ್ಕರ ಹಿಂಪಡೆಯಲಾಗಿದ್ದರೂ, ಮತ್ತೆ ಮುಂದುವರಿದದ್ದು ಯಾವ ಕಾರಣಕ್ಕಾಗಿ ಎನ್ನುವ ಪ್ರಶ್ನೆಗೆ ಉತ್ತರ ಕೋಡಿಹಳ್ಳಿ ಮತ್ತು ಸರಕಾರ ನೀಡಬೇಕಿದೆ. ಇದಕ್ಕೆ ಕಾರಣ ಇಲ್ಲದಿಲ್ಲ..
ಅನಂತ್ ಸುಬ್ಬರಾವ್ ಈಗ ನೌಕರರಿಗೆ ಬೇಡವಾದರೇ?
ಟ್ರೇಡ್ ಯೂನಿಯನ್ ಹುದ್ದೆಯನ್ನು ದಶಕಗಳಿಂದ ನಿಭಾಯಿಸಿಕೊಂಡು ಬರುತ್ತಿರುವ ಅನಂತ್ ಸುಬ್ಬರಾವ್ ಕೂಡಾ, ಕೋಡಿಹಳ್ಳಿ ಮಧ್ಯಪ್ರವೇಶದ ನಂತರ ಸುಮ್ಮನಾಗಿದ್ದಾರೆ. ಕೋಡಿಹಳ್ಳಿಗೆ ಇಲ್ಲೇನು ಕೆಲಸ ಎಂದು ಅವರು ಬಹಿರಂಗವಾಗಿಯೇ ಬೇಸರ ವ್ಯಕ್ತ ಪಡಿಸಿದ್ದರೂ ಕೂಡಾ.. ಇಷ್ಟು ವರ್ಷದಿಂದ ಸಾರಿಗೆ ಸಂಸ್ಥೆಯ ನೌಕರರ ಸಂಘವನ್ನು ಮುನ್ನಡೆಸುತ್ತಿರುವ ಅನಂತ್ ಸುಬ್ಬರಾವ್ ಈಗ ನೌಕರರಿಗೆ ಬೇಡವಾದರೇ?
ಸಾರಿಗೆ ಸಂಸ್ಥೆ ನೌಕರರನ್ನು ಸರಕಾರೀ ನೌಕರರು ಎಂದು ಪರಿಗಣಿಸುವ ನಿರ್ಧಾರ
ಸಾರಿಗೆ ಸಂಸ್ಥೆ ನೌಕರರನ್ನು ಸರಕಾರೀ ನೌಕರರು ಎಂದು ಪರಿಗಣಿಸುವ ನಿರ್ಧಾರಕ್ಕೆ ಬರಲು ಸದ್ಯದ ಹಣಕಾಸು ಪರಿಸ್ಥಿತಿ ಸರಕಾರಕ್ಕೆ ಪೂರಕವಾಗಿಲ್ಲ. ವರ್ಷಕ್ಕೆ ಸಾವಿರಾರು ಕೋಟಿ ಇದಕ್ಕಾಗಿ ಮೀಸಲು ಇಡಬೇಕಾಗುತ್ತದೆ. ಸದ್ಯದ, ಕೊರೊನಾ ಆರ್ಥಿಕ ಹಿಂಜರಿತದ ವೇಳೆ ನೌಕರರ ಈ ಪಟ್ಟು ಎಷ್ಟು ಸಮಂಜಸ, ಇವರ ಡಿಮಾಂಡ್ ಮುಂದಿಡಲು ಇದು ಸೂಕ್ತ ಸಮಯವೇ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.
ಸಾರಿಗೆ ಮುಷ್ಕರ: ಕೋಡಿಹಳ್ಳಿ ಚಂದ್ರಶೇಖರ್ ಹಿಂದಿರುವ ಆ ಕಾಣದ 'ಕೈ'!
ಹೋರಾಟದ ಹಿಂದಿನ ಉದ್ದೇಶ/ದುರುದ್ದೇಶ ಏನೇ ಇರಲಿ.. ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರು ಕೋಡಿಹಳ್ಳಿ ಚಂದ್ರಶೇಖರ್ ವಿರುದ್ದ ಕಿಡಿಕಾರಿದ್ದಾರೆ. ಪರೋಕ್ಷವಾಗಿ ಕೋಡಿಹಳ್ಳಿಯವರನ್ನು ಛೂ ಬಿಟ್ಟಿದ್ದು ಯಾರೆಂದು ಕಂದಾಯ ಸಚಿವ ಅಶೋಕ್, ಸಾರಿಗೆ ಸಚಿವ ಸವದಿ, ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ. ಕೋಡಿಹಳ್ಳಿಯವರನ್ನು ಚರ್ಚೆಗೆ ಕರೆಯಬಾರದು ಎಂದು ಸರಕಾರ, ತನ್ನನ್ನು ಮೀಟಿಂಗ್ ಗೆ ಕರೆದಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ಪ್ರತಿಷ್ಠೆಗೆ ಬಿದ್ದಿದ್ದೇ, ಸುಲಭವಾಗಿ ಬಿಡಿಸಬಹುದಾಗಿದ್ದ ಈ ಮುಷ್ಕರ ಈಗ ಕಗ್ಗಂಟಾಗಿ ಪರಿಣಮಿಸಿದೆ ಎನ್ನುವುದು ಸತ್ಯವೇ ಎಂದು ಗೊತ್ತಾಗಬೇಕಿದೆ. ಓವರ್ ಟು..ರಾಜಕೀಯದಲ್ಲಿ ಪಳಗಿರುವ ಸಿಎಂ ಯಡಿಯೂರಪ್ಪ.