KSOU Admission 2022-23 : ಕೆಎಸ್ಒಯು; ವಿವಿಧ ಕೋರ್ಸ್ಗಳ ಪ್ರವೇಶ ಆರಂಭ
ಬೆಂಗಳೂರು ಜು.5: ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು 2022-23 ಸಾಲಿನ ಪದವಿ ಸೇರಿದಂತೆ ಇನ್ನಿತರ ಕೋರ್ಸ್ಗಳನ್ನು ಕಲಿಯಲು ಆಸಕ್ತಿ ಹೊಂದಿದ್ದರೆ, ಅಂತವರಿಗೆ ಉತ್ತಮ ಅವಕಾಶ.
ಸರಳವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ವಿವಿಧ ವರ್ಗದ ವಿದ್ಯಾರ್ಥಿಗಳಿಗೆ ಪ್ರವೇಶಾತಿಯಲ್ಲಿ ಒಂದಷ್ಟು ವಿನಾಯಿತಿ ಸಹ ಘೋಷಿಸಲಾಗಿದೆ. ಶೈಕ್ಷಣಿಕ ವರ್ಷದಲ್ಲಿ (ಜುಲೈ ಆವೃತ್ತಿ) ವಿವಿಧ ಕೋರ್ಸುಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭಿಸಿದೆ.
ಇಲ್ಲಿ ಪ್ರವೇಶ ಪಡೆಯಲು ಬಯಸುವವರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಮೈಸೂರಿಗೆ ತೆರಳಬೇಕೆಂದಿಲ್ಲ. ವಿದ್ಯಾರ್ಥಿಗಳಿಗೆ ಪ್ರವೇಶ ಪ್ರಕ್ರಿಯೆ ಸರಳಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಬೆಂಗಳೂರು ಮಲ್ಲೇಶ್ವರಂನಲ್ಲಿರುವ ಮಹಿಳಾ ಪ್ರಾದೇಶಿಕ ಕೇಂದ್ರದಲ್ಲೂ ಸಹ ಪ್ರವೇಶ ಪಡೆಯುವ ಸೌಲಭ್ಯ ನೀಡಲಾಗಿದೆ.
ವಿಶ್ವವಿದ್ಯಾಲಯದ ಕೋರ್ಸುಗಳಿಗೆ ನಿಗದಿತ ಶುಲ್ಕ ತುಂಬುವ ಮೂಲಕ ಮಲ್ಲೇಶ್ವರಂನಲ್ಲಿರುವ ಮಹಿಳಾ ಪ್ರಾದೇಶಿಕ ಕೇಂದ್ರದ ಮೂಲಕವು ಪ್ರವೇಶ ಪಡೆಯಬಹುದಾಗಿದೆ ಎಂದು ಮಂಗಳವಾರ ಹೊರಡಿಸಿದ ಪ್ರಕಟಣೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವತ್ಥ ನಾರಾಯಣ್ ತಿಳಿಸಿದ್ದಾರೆ.
ಸುಳ್ಳು ಜಾಹೀರಾತು ನಂಬಿ ಮೋಸ ಹೋಗಬಾರದು
ರಾಜ್ಯದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿವಿ ಮಾತ್ರ ದೂರಶಿಕ್ಷಣ ನೀಡಲು ನಿಯಮಾನುಸಾರ ಅರ್ಹತೆ ಪಡೆದಿರುವ ಏಕೈಕ ಸಂಸ್ಥೆಯಾಗಿದೆ. ಅಂತಹ ಸಂಸ್ಥೆಗೆ ಸೇರ ಬಯಸುವ ಆಸಕ್ತರು, ಇತರೆ ಸಂಸ್ಥೆಗಳ ಜಾಹೀರಾತು/ ಸುಳ್ಳು ಮಾಹಿತಿಗಳನ್ನು ನಂಬಿ, ಮೋಸ ಹೋಗಬಾರದು. ಆಯಾ ವಿಶ್ವವಿದ್ಯಾಲಯ, ಶೈಕ್ಷಣಿಕ ಸಂಸ್ಥೆಗಳ ಅಧಿಕೃತ ಜಾಲತಾಣದ ಹೊರತಾಗಿ ಸಾಮಾಜಿಕ ಜಾಲತಾಣ ಇಲ್ಲವೇ ಆನ್ಲೈನ್ಗಳಲ್ಲಿ ಸಿಗುವ ಲಿಂಕ್ ಗಳನ್ನು ನಂಬಿ ಹಣ ಕಳೆದುಕೊಳ್ಳಬಾರದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಮಲ್ಲೇಶ್ವರದಲ್ಲಿ ಪ್ರವೇಶ ಪ್ರಕ್ರಿಯೆ ಪೂರ್ಣಕ್ಕೆ ಅವಕಾಶ
ಅಭ್ಯರ್ಥಿಗಳು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಅಧಿಕೃತ ಜಾಲತಾಣವಾದ ಕೆಎಸ್ಓಯು ಮೈಸೂರುಗೆ ಭೇಟಿ ನೀಡಿ, ಅಲ್ಲಿ ಪ್ರವೇಶಾತಿ ಪೋರ್ಟಲ್ ಮೂಲಕ ತಮಗೆ ಆಸಕ್ತಿ ಇರುವ ಕೋರ್ಸುಗಳಿಗೆ ಆನ್ ಲೈನ್ ಮೂಲಕ ಅರ್ಜಿ ಭರ್ತಿ ಮಾಡಬೇಕು. ನಂತರ, ಮಲ್ಲೇಶ್ವರಂ 4ನೇ ಮುಖ್ಯರಸ್ತೆಯ 13ನೇ ಅಡ್ಡರಸ್ತೆಯಲ್ಲಿರುವ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜು ಆವರಣದಲ್ಲಿರುವ ವಿಶ್ವವಿದ್ಯಾಲಯ ಪ್ರಾದೇಶಿಕ ಕೇಂದ್ರಕ್ಕೆ ಖುದ್ದಾಗಿ ತೆರಳಬೇಕು. ಅಲ್ಲಿ ಪ್ರವೇಶಾತಿ ಶುಲ್ಕ ಪಾವತಿಸಿ, ಪ್ರವೇಶ ಪ್ರಕ್ರಿಯೆ ಮುಗಿಸಿಕೊಳ್ಳಬೇಕು ಎಂದು ಅವರು ಮಾಹಿತಿ ನೀಡಿದರು.
ವಿವಿಧ ವರ್ಗದ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ
ನಿಯಮಾವಳಿ ಪ್ರಕಾರ, ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳ ವಿದ್ಯಾರ್ಥಿನಿಯರಿಗೆ, ರಕ್ಷಣಾ ಪಡೆಗಳ ನಿವೃತ್ತ ಸಿಬ್ಬಂದಿ/ ಯೋಧರಿಗೆ, ಆಟೋ/ ಕ್ಯಾಬ್ ಚಾಲಕರು ಮತ್ತವರ ಮಕ್ಕಳಿಗೆ ಬೋಧನಾ ಶುಲ್ಕದಲ್ಲಿ ರಿಯಾಯಿತಿ ಕೊಡಲಾಗುವುದು. ಜತೆಗೆ, ಕೋವಿಡ್ ಪಿಡುಗಿನಲ್ಲಿ ತಂದೆ-ತಾಯಿಗಳನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳಿಗೆ, ತೃತೀಯ ಲಿಂಗಿಗಳಿಗೆ ಹಾಗೂ ದೃಷ್ಟಿ ಹೀನರಿಗೆ ಪೂರ್ಣ ಶುಲ್ಕ ವಿನಾಯಿತಿ ಇರಲಿದೆ. ಈ ಪೈಕಿ, ದೃಷ್ಟಿ ಹೀನರಿಗೆ ಬಿ.ಎಡ್ ಮತ್ತು ಎಂಬಿಎ ಕೋರ್ಸುಗಳನ್ನು ಹೊರತುಪಡಿಸಿ, ಉಳಿದ ಕೋರ್ಸುಗಳಿಗೆ ಈ ವಿನಾಯಿತಿ ಸಿಗುತ್ತದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ಏಕಕಾಲದಲ್ಲಿ ಕಲಿಕೆಗೆ ಅವಕಾಶ
ಯುಜಿಸಿ ನಿಯಮಗಳ ಪ್ರಕಾರ, ವಿದ್ಯಾರ್ಥಿಗಳು ಭೌತಿಕವಾಗಿ ಒಂದು ಪೂರ್ಣಾವಧಿ ಕೋರ್ಸ್ ಮತ್ತು ದೂರ ಶಿಕ್ಷಣದಲ್ಲಿ ಒಂದು ಕೋರ್ಸ್ ಅನ್ನು ಏಕಕಾಲದಲ್ಲಿ ಅಧ್ಯಯನ ಮಾಡಲು ಸಹ ಅವಕಾಶವಿದೆ. ಆದ್ದರಿಂದ ಆಸಕ್ತರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ದೂ.080 23448811, ಮೊ. 97411-97921, 96203-95584 ಮತ್ತು 77608-48564 ಗೆ ಸಂಪರ್ಕಿಸುವಂತೆ ಸಚಿವ ಅಶ್ವತ್ಥನಾರಾಯಣ ಮನವಿ ಮಾಡಿಕೊಂಡಿದ್ದಾರೆ.
Recommended Video