ಭಗವಂತಾ ಇದೇನಿದು? ಭಗವಾನ್ ಕೈಯಲ್ಲಿ ಸರಸ್ವತಿ ವಿಗ್ರಹ!
ಹಿಂದೂ ದೇವಾನುದೇವತೆ, ಸಂಪ್ರದಾಯಗಳನ್ನು ಹೀಯಾಳಿಸಿ, ಭಗವದ್ಗೀತೆಯನ್ನು ಸುಡಲು ಹೊರಟಿದ್ದ ಕನ್ನಡದ ಜನಪ್ರಿಯ ಅನುವಾದಕ, ಚಿಂತಕ, ವಿಚಾರವಾದಿ, ವಿಮರ್ಶಕ ಕೆ ಎಸ್ ಭಗವಾನ್ ಅವರ ಕೈಯಲ್ಲಿ ಸರಸ್ವತಿ ವಿಗ್ರಹ!
ಹೌದು, ಹಿಂದೂಗಳ ಭಾವನೆಗೆ ಬೆಲೆಕೊಡದೇ ಮನಸೋ ಇಚ್ಛೆ ಹೇಳಿಕೆ ನೀಡಿ ವಿವಾದದ ಕೇಂದ್ರಬಿಂದುವಾಗಿದ್ದ ಭಗವಾನ್ ಅವರು, ಹಾರ ಶಾಲಿನ ಜೊತೆಗೆ ಶಾರದಾಂಬೆಯ ವಿಗ್ರಹವಿರುವ ಪ್ರಶಸ್ತಿಯನ್ನು ಮುಕ್ತವಾಗಿ.. ನಗುನಗುತ್ತಾ.. ತುಂಬಿದ ಸಭೆಯಲ್ಲಿ ಸ್ವೀಕರಿಸಿದ್ದಾರೆ. (ಭಗವಾನ್ ವಿರುದ್ಧ ಸಹಿ ಸಂಗ್ರಹ ಅಭಿಯಾನ)
ಅಭಿವ್ಯಕ್ತಿ ಸ್ವಾತಂತ್ರ್ಯದಡಿಯಲ್ಲಿ ಎಲ್ಲರಿಗೂ ತಮ್ಮ ಅನಿಸಿಕೆಗಳನ್ನು ಬರೆಯುವ/ಜರಿಯುವ ಅಧಿಕಾರವಿದ್ದರೂ, ಇತರರ ನಂಬಿಕೆಯ ವಿರುದ್ದ ಹೇಳಿಕೆ ನೀಡಿ ಬಹುಸಂಖ್ಯಾತರ ಕೆಂಗಣ್ಣಿಗೆ ಗುರಿಯಾಗಿದ್ದ ಭಗವಾನ್ ಅವರಿಗೆ 2013ರ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಒಲಿದು ಬಂದಿತ್ತು.
ಭಗವಾನ್ ಅವರಿಗೆ ಪ್ರಶಸ್ತಿ ನೀಡಿದ್ದಕ್ಕೆ ವ್ಯಾಪಕ ಪ್ರತಿಭಟನೆ, ಸಹಿಸಂಗ್ರಹ ಅಭಿಯಾನ ನಡೆದಿದ್ದರೂ, ಜಪ್ಪಯ್ಯ ಅನ್ನದ ಸಾಹಿತ್ಯ ಅಕಾಡೆಮಿ ಭಾರೀ ಪೊಲೀಸ್ ಬಂದೋಬಸ್ತಿನಲ್ಲಿ (ಮುಂಜಾಗೃತಾ ಕ್ರಮವಾಗಿ ವೇದಿಕೆಯ ಮೇಲೆ ಮಫ್ತಿಯಲ್ಲಿ ಪೊಲೀಸರಿದ್ದರು) ಜನವರಿ ಒಂಬತ್ತರ ಶನಿವಾರ ಬೆಳಗ್ಗೆ ಹತ್ತು ಗಂಟೆಗೆ ಬೆಂಗಳೂರಿನ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರಧಾನ ಮಾಡಿತ್ತು. (ಶ್ರೀರಾಮ ಸ್ತ್ರೀಲೋಲ, ಮದ್ಯ ಸೇವಿಸುತ್ತಿದ್ದ)
ಗನ್ ಮ್ಯಾನಿನ ಭದ್ರತೆಯೊಂದಿಗೆ ಆಗಮಿಸಿದ್ದ ಭಗವಾನ್ ಅವರಿಗೆ ಬರಗೂರು ರಾಮಚಂದ್ರಪ್ಪ, ಮಾಲತಿ ಪಟ್ಟಣಶೆಟ್ಟಿ ಸೇರಿದಂತೆ ವೇದಿಕೆಯಲ್ಲಿದ್ದ ಇತರರು ಪ್ರಶಸ್ತಿ ಪ್ರಧಾನ ಮಾಡಿದ್ದರು. ಶಾಲು, ಫಲಕ, ಹಾರದ ಜೊತೆಗೆ ತಾಯಿ ಶಾರದಾಂಬೆಯ ವಿಗ್ರಹವನ್ನೂ ಗೌರವ ರೂಪದಲ್ಲಿ ಭಗವಾನರಿಗೆ ಪ್ರಧಾನ ಮಾಡಲಾಗಿತ್ತು. ಸ್ಲೈಡ್ ಕ್ಲಿಕ್ಕಿಸಿ..
ಭಗವದ್ಗೀತೆಯಲ್ಲಿ ಬ್ರಾಹ್ಮಣ ಮತ
ಭಗವದ್ಗೀತೆಯಲ್ಲಿ ತುಂಬಿರುವುದೆಲ್ಲಾ ಬ್ರಾಹ್ಮಣ ಮತವೇ ಹೊರತು ಬೇರೇನೂ ಇಲ್ಲ. ಭಗವದ್ಗೀತೆ ಜಾತಿ ವ್ಯವಸ್ಥೆಯನ್ನು ಪ್ರಬಲವಾಗಿ ಪ್ರತಿಪಾದಿಸುತ್ತದೆ ಎಂದು ಗೀತೆಯ ಪ್ರತಿಯನ್ನು ಸುಡಲು ಹೊರಟು, ಹಿಂದೂ ಸಂಪ್ರದಾಯವನ್ನು ಲೇವಡಿ ಮಾಡಿದ್ದ ಭಗವಾನರಿಗೆ ಶಾರದಾಂಬೆಯ ವಿಗ್ರಹವನ್ನು ಪಡೆಯಲು ಸಭೆಯಲ್ಲಿ ಯಾವುದೇ ತನ್ನ ಜಾತ್ಯಾತೀಯ ನಿಲುವು ಅಡ್ಡಿಯಾಗಲಿಲ್ಲ ಎನ್ನುವುದು ನೋಟೆಡ್ ಪಾಯಿಂಟ್.
ಶ್ರೀರಾಮ, ಸೀತೆ ಜೊತೆಗೂಡಿ ಮದ್ಯ ಸೇವಿಸುತ್ತಿದ್ದ
ಶ್ರೀರಾಮ, ಸೀತೆ ಜೊತೆಗೂಡಿ ಮದ್ಯ ಸೇವಿಸುತ್ತಿದ್ದ, ಮದ್ಯ ಸೇವಿಸಿ ಪರಸ್ತ್ರೀಯರೊಂದಿಗೆ ಮೋಜು ಮಾಡುತ್ತಿದ್ದ. ಹಾಗಿದ್ದಾಗ ಶ್ರೀರಾಮಚಂದ್ರ 'ಮರ್ಯಾದಾ ಪುರುಷೋತ್ತಮ' ಆಗಲು ಹೇಗೆ ಸಾಧ್ಯ ಎಂದು ಲೇವಡಿ ಮಾಡಿದ್ದ ಭಗವಾನ್ ಅವರು ಸರಸ್ವತಿಯ ವಿಗ್ರಹ ಬೇಡ, ಬರೀ ಪ್ರಶಸ್ತಿ ಫಲಕ ಸಾಕು ಎಂದಿದ್ದರೆ ತನ್ನ ನಿಲುವನ್ನು ಈಗಲೂ ಸಮರ್ಥಿಸಿಕೊಳ್ಳುತ್ತಿದ್ದಾರೆ ಅನ್ನಬಹುದಿತ್ತು. ಚಪ್ಪಾಳೆಯೂ ತಟ್ಟಬಹುದಿತ್ತು, ಶಿಳ್ಳೆಯೂ ಹೊಡೆಯಬಹುದಿತ್ತು.
ಪ್ರಶ್ನಾರ್ಥಕ ನಿಲುವು
ಆದರೆ, ತುಂಬಿದ ಸಭೆಯಲ್ಲಿ ಸರಸ್ವತಿ ವಿಗ್ರಹವಿರುವ ಪ್ರಶಸ್ತಿ ಸ್ವೀಕರಿಸುವ ಮೂಲಕ ತಾನು ನಿಂತಿದ್ದ ನಿಲುವನ್ನೇ ಪ್ರಶ್ನಾರ್ಥಕವಾಗಿ ಮಾಡಿಕೊಂಡಿದ್ದಾರೆ ಭಗವಾನರು. ಒಂದು ಹಿಟ್ ಸಿನಿಮಾ ರಾತ್ರೋರಾತ್ರಿ ಕಲಾವಿದನ ಬದುಕನ್ನು ಹೇಗೆ ಬದಲಾಯಿಸುತ್ತದೋ, ಹಾಗೇ ಹಿಂದೂ ವಿರೋಧಿ ನಿಲುವು ತಾಳಿದರೆ ಹಿಂದೂಸ್ಥಾನದಲ್ಲಿ ಜನಪ್ರಿಯವಾಗಬಹುದು ಎನ್ನುವುದು ಭಗವಾನರ ನಿಲುವು ಯಾಕಿರಬಾರದು ಎನ್ನುವುದು ಇಲ್ಲಿ ಕಾಡುವ ಪ್ರಶ್ನೆ.
ಬರಗೂರು ರಾಮಚಂದ್ರಪ್ಪ
ಕಾರ್ಯಕ್ರಮದಲ್ಲಿ, ಒಬ್ಬ ಸಾಹಿತಿ ಭದ್ರತೆಯೊಂದಿಗೆ ಪ್ರಶಸ್ತಿ ಸ್ವೀಕರಿಸಲು ಬರಬೇಕಾಗಿರುವುದು ವಿಷಾದನೀಯ ಎಂದು ಪ್ರಶಸ್ತಿ ವಿತರಿಸುತ್ತಿದ್ದ ಬರಗೂರು ರಾಮಚಂದ್ರಪ್ಪನವರಿಗೆ, ಬಹು ಸಂಖ್ಯಾತ ಕೋಮಿನವರ ಸಂಪ್ರದಾಯದ ಬಗ್ಗೆ ಮಾತನಾಡುವುದು ತಪ್ಪು, ಅವರ ಭಾವನೆಗಳ ಜೊತೆ ಆಟವಾಡೋದು ಬೇಡ ಎಂದು ಯಾಕೆ ಅನಿಸುವುದಿಲ್ಲ. ಇದೇ ರೀತಿ ಅಲ್ಪಸಂಖ್ಯಾತ ಸಮುದಾಯದ ಸಂಪ್ರದಾಯದಲ್ಲಿರುವ ತಪ್ಪುಸರಿಗಳ ಬಗೆಗಿರುವ ಜ್ಞಾನವನ್ನೂ ಬರಗೂರರು ಯಾಕೆ ಪ್ರದರ್ಶಿಸಬಾರದು?
ಜಾತಿ ವಿಚಾರದಲ್ಲಿ ರಾಜಕೀಯ
ಜಾತಿ ವಿಚಾರದಲ್ಲಿ ರಾಜಕೀಯ ಮಾಡಿ, ಸಮಾಜದಲ್ಲಿ ಕಂದಕ ಸೃಷ್ಟಿಸಿ ಲಾಭ ಮಾಡಿಕೊಳ್ಳುತ್ತಿರುವ ರಾಜಕಾರಣಿಗಳಿಗೆ ಬುದ್ದಿಜೀವಿಗಳ ನೀತಿಪಾಠ ಮೊದಲು ನಡೆಯಲಿ. ಯಾವುದೇ ಸಮುದಾಯವನ್ನು, ಗ್ರಂಥವನ್ನು ಲೇವಡಿ ಮಾಡುವ, ಸಂಪ್ರದಾಯದ ಬಗ್ಗೆ ಕೀಳಾಗಿ ಮಾತನಾಡುವ ಪರಿಪಾಠಕ್ಕೆ ಮೊದಲು ಬ್ರೇಕ್ ಬೀಳಬೇಕಿದೆ. ಯಾವುದು ತಪ್ಪು, ಯಾವುದು ಸರಿ ಎನ್ನುವುದನ್ನು ಅರ್ಥ ಮಾಡಿಕೊಳ್ಳದಷ್ಟು ದಡ್ಡರು ಯಾರೂ ಇಲ್ಲ.
ಭಗವಾನರಿಗೆ ಅಭಿನಂದನೆಗಳು
ದೇವರಿದ್ದಾನೋ ಇಲ್ಲವೋ, ಜಾನ್ ಜಾನಿ ಜನಾರ್ಧನನೋ? ಎಲ್ಲಾ ಸಮುದಾಯದವರಿಗೆ ನಿಮ್ಮಂತಹ ಘನ ಸಾಹಿತಿಗಳಿಂದ ಮಾನವಧರ್ಮ ಮೊದಲು ಎನ್ನುವ ಸನ್ಮಾರ್ಗದ ಬುದ್ದಿಯ ಪಾಠ ಮುಂದಿನ ದಿನದನದಲ್ಲಾದರೂ ಆಗಲಿ. ನೀವು ಜನಪ್ರಿಯರಾಗಲು ಇತರ ಕೋಮಿನ ಬಗ್ಗೆ ಹೇಳಿಕೆ ನೀಡುವುದನ್ನು ನಿಲ್ಲಿಸಿ.. ಎನಿ ವೇ.. ಪ್ರಶಸ್ತಿ ಸ್ವೀಕರಿಸಿದ ಕೆ ಎಸ್ ಭಗವಾನರಿಗೆ ಅಭಿನಂದನೆಗಳು.