ಪ್ರೊ.ಕೆ.ಎಸ್.ಭಗವಾನ್ ಹತ್ಯೆಗೆ ಸಂಚು : 700 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ
ಬೆಂಗಳೂರು, ಜುಲೈ 22 : ಪ್ರೊ.ಕೆ.ಎಸ್.ಭಗವಾನ್ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಟಿ.ನವೀನ್ ಸೇರಿದಂತೆ 5 ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. ಉಪ್ಪಾರಪೇಟೆ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಉಪ್ಪಾರಪೇಟೆ ಪೊಲೀಸರು ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಶನಿವಾರ 700 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಐವರು ಆರೋಪಿಗಳು ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಸಭೆಗಳನ್ನು ನಡೆಸಿದ್ದರು ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಅಮೂಲ್ ಕಾಳೆ (39), ಅಮೀತ್ ದಗ್ವೇಕರ್ (39), ಕೆ.ಟಿ.ನವೀನ್ ಕುಮಾರ್ (37), ಸುಜಿತ್ ಕುಮಾರ್ (37), ಮನೋಹರ್ ಯಡವೆ (28) ವಿರುದ್ಧ ಜಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಐವರು ಆರೋಪಿಗಳು ಕೊನೆಯ ಬಾರಿ ಬೆಳಗಾವಿಯಲ್ಲಿ ಭೇಟಿಯಾಗಿದ್ದರು.
ಉಪನಿಷತ್, ವೇದಾಂತ ಮೆಚ್ಚುವ ನನ್ನ ಮೇಲೇಕೆ ಸಿಟ್ಟು?: ಭಗವಾನ್ ಸಂದರ್ಶನ
700 ಪುಟಗಳ ಚಾರ್ಜ್ ಶೀಟ್ನಲ್ಲಿ ಎಲ್ಲಾ ಆರೋಪಿಗಳ ತಂತ್ರ, ಯೋಜನೆಗಳನ್ನು ವಿವರಿಸಲಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯನ್ನು ಸಹ ಸಲ್ಲಿಕೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿದಂತೆ 7 ಜನರನ್ನು ಬಂಧಿಸಿದ್ದು, ಐವರ ವಿರುದ್ಧ ಮಾತ್ರ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್ಐಟಿ ಕೆ.ಟಿ.ನವೀನ್ ಕುಮಾರ್ ದೂರವಾಣಿ ಕರೆಗಳ ಮಾಹಿತಿ ಸಂಗ್ರಹಿಸಿತ್ತು. ಆಗ ಕೆ.ಎಸ್.ಭಗವಾನ್ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣ ಬೆಳಕಿಗೆ ಬಂದಿತ್ತು.
ಕೆ.ಟಿ.ನವೀನ್ ಕುಮಾರ್ ಮತ್ತು ಸುಜಿತ್ ಕುಮಾರ್ ಅಲಿಯಾಸ್ ಪ್ರವೀಣ್ ಮಾತುಕತೆಯ ವಿವರಗಳನ್ನು ಎಸ್ಐಟಿ ಸಂಗ್ರಹ ಮಾಡಿತ್ತು. ಬಳಿಕ ಕೆ.ಟಿ.ನವೀನ್ ಕುಮಾರ್ ಬಂಧಿಸಲಾಯಿತು.
ಕರ್ನಾಟಕದ ಬೆಳಗಾವಿ, ಮಹಾರಾಷ್ಟ್ರದ ಸತಾರದಲ್ಲಿ ಐವರು ಆರೋಪಿಗಳು ಭೇಟಿಯಾಗಿ ಹತ್ಯೆ ಸಂಚಿನ ಬಗ್ಗೆ ಚರ್ಚಿಸಿದ್ದರು. 2018ರ ಜನವರಿಯಲ್ಲಿ ಚಾಮರಾಜನಗರದ ಗುಂಡಲ್ ಅರಣ್ಯ ಪ್ರದೇಶದಲ್ಲಿಯೂ ಎಲ್ಲರು ಸಭೆ ನಡೆಸಿದ್ದರು.
ಮೈಸೂರಿನ ಕೆ.ಎಸ್.ಭಗವಾನ್ ಅವರ ನಿವಾಸದ ಬಳಿ ಒಬ್ಬ ವ್ಯಕ್ತಿಯನ್ನು ಆರೋಪಿಗಳು ನಿಯೋಜನೆ ಮಾಡಿದ್ದರು. ಮನೆಯ ಬಳಿ ಎಷ್ಟು ಸಿಸಿಟಿವಿ ಇದೆ?, ಬಡಾವಣೆಯ ಸ್ಥಿತಿಗತಿಗಳ ಬಗ್ಗೆ ಆತ ಮಾಹಿತಿ ಸಂಗ್ರಹ ಮಾಡುತ್ತಿದ್ದ.