3800 ಕೋಟಿ ಬರ ಪರಿಹಾರಕ್ಕೆ ಭೈರೇಗೌಡ ಕೇಂದ್ರದ ಮೊರೆ
ನವದೆಹಲಿ, ಅಕ್ಟೋಬರ್. 13: ಬರಪೀಡಿತವಾಗಿರುವ ರಾಜ್ಯಕ್ಕೆ 3800 ಕೋಟಿ ರು. ಪರಿಹಾರ ಬಿಡುಗಡೆ ಮಾಡಬೇಕು ಎಂದು ರಾಜ್ಯದ ಕೃಷಿ ಸಚಿವ ಕೃಷ್ಣ ಭೈರೇಗೌಡ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ನವದೆಹಲಿಯಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಡಿ ವಿ ಸದಾನಂದ ಗೌಡ ಅವರನ್ನು ಮಂಗಳವಾರ ಭೇಟಿ ಮಾಡಿದ ಕೃಷ್ಣ ಭೈರೇಗೌಡ 3800 ಕೋಟಿ ರು. ತುರ್ತು ಪರಿಹಾರ ನೀಡಬೇಕು ಎಂದು ಮನವಿ ಸಲ್ಲಿಕೆ ಮಾಡಿದ್ದಾರೆ.[ಬರ ಪರಿಹಾರ : ಮುಖ್ಯಮಂತ್ರಿಗಳು ನೀಡಿದ ಸೂಚನೆಗಳು]
ರಾಜ್ಯದಲ್ಲಿ ಅನಾವೃಷ್ಟಿ ಪರಿಣಾಮ 136 ತಾಲೂಕುಗಳ ಬರಪೀಡಿತವಾಗಿವೆ. ಬರ ಪರಿಸ್ಥಿತಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕೃಷ್ಣ ಭೈರೇಗೌಡ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿ ಕೊಟ್ಟಿದ್ದಾರೆ. ಮನವಿ ಸಲ್ಲಿಕೆ ವೇಳೆ ಸಚಿವರೊಂದಿಗೆ ರಾಜ್ಯ ಸರ್ಕಾರದ ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿ ರಾಜ್ ಕುಮಾರ್ ಖಾತ್ರಿ ಇದ್ದರು.[ರಾಜ್ಯದಲ್ಲಿ ಕೈ ಕೊಟ್ಟ ಮುಂಗಾರು]
ಬರದಿಂದ 15636 ಕೋಟಿ ರೂ. ನಷ್ಟವಾಗಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್ಡಿಆರ್ಎಫ್) ಮಾನದಂಡ ಪ್ರಕಾರವೇ 3,800 ಕೋಟಿ ರೂ. ರಾಜ್ಯಕ್ಕೆ ಬರಬೇಕಿದ್ದರೂ ಕೇಂದ್ರ ಸರ್ಕಾರ 500 ಕೋಟಿ ರೂ.ಗೆ ಮಾತ್ರ ಒಪ್ಪಿಗೆ ನೀಡಿದೆ. ಸದ್ಯ 207 ಕೋಟಿ ರೂ. ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ ಈಗಾಗಲೇ 521 ಕೋಟಿ ರು. ಪರಿಹಾರ ಕಾರ್ಯ ಕೈಗೊಂಡಿದೆ ಎಂದು ಸಚಿವರು ತಿಳಿಸಿದ್ದಾರೆ.