ಕಾಂಗ್ರೆಸ್ ಸದಸ್ಯತ್ವ ಪಡೆದು ನಾಯಕರ ಕಿವಿ ಹಿಂಡಿದ ರಮೇಶ್ ಕುಮಾರ್
ಬೆಂಗಳೂರು, ಜುಲೈ 31 : ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕೆ. ಆರ್. ರಮೇಶ್ ಕುಮಾರ್ ಇಂದು ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದರು. ಎಲ್ಲಾರೂ ಒಟ್ಟಾಗಿ ಪಕ್ಷಕ್ಕಾಗಿ ದುಡಿಯೋಣ ಎಂದು ಅವರು ಪಕ್ಷದ ನಾಯಕರಿಗೆ ಕರೆ ನೀಡಿದರು.
2018ರ ಚುನಾವಣೆಯಲ್ಲಿ ಶ್ರೀನಿವಾಸಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯಗಳಿಸಿದ್ದ ರಮೇಶ್ ಕುಮಾರ್ ಸ್ಪೀಕರ್ ಆಗಿ ಆಯ್ಕೆಯಾಗಿದ್ದರು. ಆದ್ದರಿಂದ, ಕಾಂಗ್ರೆಸ್ ಪಕ್ಷದ ಸದ್ಯತ್ವಕ್ಕೆ ರಾಜೀನಾಮೆ ಕೊಟ್ಟಿದ್ದರು.
ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ರಮೇಶ್ ಕುಮಾರ್ ರಾಜೀನಾಮೆ
ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಪುನಃ ಪಕ್ಷದ ಸದಸ್ಯತ್ವ ಸ್ವೀಕಾರ ಮಾಡಿದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಸಿಎಲ್ಪಿ ನಾಯಕ ಸಿದ್ದರಾಮಯ್ಯ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶ್ರೀನಿವಾಸಪುರ ಜನರ ಪಾಲಿನ 70 ಎಂ.ಎಂ. ಸಿನೆಮಾ ಹೀರೋ ರಮೇಶ್ ಕುಮಾರ್
ಕಾಂಗ್ರೆಸ್ ಸದಸ್ಯತ್ವ ಪಡೆದ ಬಳಿಕ ಮಾತಮಾಡಿದ ರಮೇಶ್ ಕುಮಾರ್, "17 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬಹುದು. ಬೂತ್ ಮಟ್ಟದಲ್ಲಿ ನಾವು ಕಣಕ್ಕಿಳಿಯಬೇಕು. ನಾವು ಕೆಲಸ ಮಾಡುವುದು ಬೇರೆಯವರಿಗೆ ಕಾಣಬಾರದು" ಎಂದು ಹೇಳಿದರು.
ರಮೇಶ್ ಕುಮಾರ್: ಬಿಕ್ಕಟ್ಟುಗಳು ಬಂದಾಗೆಲ್ಲಾ ಭಾವನೆಗಳೇ ಅಸ್ತ್ರ!
ಪಕ್ಷಕ್ಕೆ ಫೈವ್ ಸ್ಟಾರ್ ಕಲ್ಚರ್ ಬಂದಿದೆ
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ರಮೇಶ್ ಕುಮಾರ್, "ನಾವು ಪುಟ್ಪಾತ್ನಲ್ಲಿ ಚಿತ್ರಾನ್ನ ತಿಂದು ಬಂದವರು. ಆದರೆ, ಪಕ್ಷಕ್ಕೆ ಇಂದು ಫೈವ್ ಸ್ಟಾರ್ ಕಲ್ಚರ್ ಬಂದಿದೆ.ಹೆಸರಿಗೆ ಫೈವ್ ಸ್ಟಾರ್ ಅಷ್ಟೇ ಒಳಗೆ ಹಳಸಿದ್ದೇ ಸಿಗೋದು.ಹಾಗಾಗಿ ನಮಗೆ ಫೈವ್ ಸ್ಟಾರ್ ಕಲ್ಚರ್ ಬೇಡ. ಬೀದಿಯಲ್ಲಿ ನಿಂತು ಒಟ್ಟಾಗಿ ದುಡಿಯಬೇಕು" ಎಂದು ಕರೆ ನೀಡಿದರು.
ಆಡಂಬರದ ಬದುಕು ಬಿಡಿ
"17 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬಹುದು. ಬೂತ್ ಮಟ್ಟದಲ್ಲಿ ನಾವು ಕಣಕ್ಕಿಳಿಯಬೇಕು.ನಾವು ಕೆಲಸ ಮಾಡುವುದು ಬೇರೆಯವರಿಗೆ ಕಾಣಬಾರದು. ಆಡಂಬರದ ಬದುಕನ್ನು ಬಿಡಬೇಕು.ಫ್ಲೆಕ್ಸ್, ಬ್ಯಾನರ್ ಹಾಕಿದರೆ ಪಕ್ಷ ಉಳಿಯಲ್ಲ. ಒಂದೊಂದು ಮತವನ್ನೂ ಪಕ್ಷಕ್ಕೆ ಹಾಕಿಸಿದಾಗ ಮಾತ್ರ ನಮಗೆ ಗೆಲುವು. ಉಳ್ಳವರಿಗೆ ನಾವು ಟಿಕೆಟ್ ಕೊಟ್ಟಿದ್ದೆವು. 10 ಲಕ್ಷಕ್ಕೆ ನಮ್ಮ ಮರ್ಯಾದೆ ಕಳೆದು ಹೋದರು" ಎಂದು ರಮೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಹೊಸದಾಗಿ ಪಕ್ಷಕ್ಕೆ ಸೇರುತ್ತಿಲ್ಲ
ಸಿದ್ದರಾಮಯ್ಯ ಮಾತನಾಡಿ, "ರಮೇಶ್ ಕುಮಾರ್ ಹೊಸದಾಗಿ ಪಕ್ಷ ಸೇರುತ್ತಿಲ್ಲ. ಪಕ್ಷದಲ್ಲಿಯೇ ಹಲವು ವರ್ಷದಿಂದ ಇದ್ದಾರೆ. ಕಾಂಗ್ರೆಸ್ ಪಕ್ಷದಿಂದಲೇ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹೈಕಮಾಂಡ್ ಸೂಚನೆಯಂತೆ ಸ್ಪೀಕರ್ ಆಗಿದ್ದರು. ಸ್ಪೀಕರ್, ಸಚಿವ ಸ್ಥಾನಕ್ಕೆ ಅವರು ಆಸೆ ಪಟ್ಟವರಲ್ಲ. ನನ್ನ ಬಲವಂತದಿಂದಲೇ ಸ್ಥಾನ ಪಡೆದಿದ್ದರು. ಮೊನ್ನೆ ಶಾಸಕರನ್ನು ಅನರ್ಹ ಮಾಡಿ ಐತಿಹಾಸಿಕ ತೀರ್ಪು ನೀಡಿದ್ದರು," ಎಂದರು.
ಅಘೋಷಿತ ತುರ್ತು ಪರಿಸ್ಥಿತಿ ಇದೆ
"ಕೋಮುವಾದಿ ಪಕ್ಷವನ್ನು ಎದುರಿಸಲು ನಾವೆಲ್ಲರೂ ಮಾನಸಿಕವಾಗಿ ಸಿದ್ಧರಾಗಬೇಕಿದೆ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಎಲ್ಲಾ ಕೇಸರಿಕರಣವಾದರೆ ಮತ್ತಷ್ಟು ಕಷ್ಟ ಎದುರಾಗುತ್ತದೆ. ಮೋದಿ, ಶಾ ಎಲ್ಲಾ ಸಂಸ್ಥೆಗಳಿಗೆ ಕೈ ಹಾಕಿದ್ದಾರೆ. ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ನಾಶ ಮಾಡುತ್ತಿದ್ದಾರೆ" ಎಂದು ದೂರಿದರು.
ಸದಸ್ಯತ್ವ ಪಡೆದಿದ್ದಾರೆ
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, "ಸ್ಪೀಕರ್ ಆದ ನಂತರ ಪಕ್ಷದ ಜೊತೆ ಗುರುತಿಸಿಕೊಳ್ಳುವಂತಿಲ್ಲ.ಹೀಗಾಗಿ ಸದಸ್ಯ ಸ್ಥಾನದಿಂದ ರಮೇಶ್ ಕುಮಾರ್ ಕೆಳಗಿಳಿದಿದ್ದರು.ಇದೀಗ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆದ್ದರಿಂದ, ಮತ್ತೆ ಪಕ್ಷದ ಸದಸ್ಯತ್ವ ಪಡೆದಿದ್ದಾರೆ" ಎಂದು ಹೇಳಿದರು.