ಬೆಂಗಳೂರು : ಕೆ.ಆರ್.ಪುರಂ-ವಿಶಾಖಪಟ್ಟಣ ನಡುವೆ ವಿಶೇಷ ರೈಲು
ಬೆಂಗಳೂರು, ಜೂ. 08 : ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಭಾರತೀಯ ರೈಲ್ವೆ ಎರಡು ವಿಶೇಷ ರೈಲು ಸೇವೆಯನ್ನು ಆರಂಭಿಸಿದೆ. ಕೆ.ಆರ್.ಪುರಂ(ಬೆಂಗಳೂರು)-ವಿಶಾಖಪಟ್ಟಣ ಮತ್ತು ಗೋರಖ್ಪುರ-ಕೆ.ಆರ್.ಪುರಂ ನಡುವೆ ಈ ರೈಲುಗಳು ಸಂಚಾರ ನಡೆಸಲಿವೆ.
ಕೆ.ಆರ್.ಪುರಂ-ವಿಶಾಖಪಟ್ಟಣ ನಡುವೆ ಜೂನ್ 6ರಿಂದ ವಾರದಲ್ಲಿ ಎರಡು ಬಾರಿ ತತ್ಕಾಲ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ವಿಶೇಷ ರೈಲು ಸಂಚಾರ ಆರಂಭಿಸಿದ್ದು ಜೂನ್ 28ರವರೆಗೆ ಸೇವೆ ಲಭ್ಯವಿದೆ. ಪ್ರತಿ ಬುಧವಾರ ಮತ್ತು ಶನಿವಾರ ವಿಶಾಖಪಟ್ಟಣದಿಂದ ಹೊರಡುವ ರೈಲು ಗುರುವಾರ ಮತ್ತು ಭಾನುವಾರ ಮುಂಜಾನೆ 2.50ಕ್ಕೆ ಕೆ.ಆರ್.ಪುರಂ ನಿಲ್ದಾಣ ತಲುಪಲಿದೆ. [ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು ಏಕಿಲ್ಲ?]
ಸಮಲ್ ಕೋಟ್, ರಾಜಮುಂಡ್ರಿ, ಎಲೂರು, ವಿಜಯವಾಡ, ಒಂಗೋಲ್, ಗುಡೂರು, ರೇಣಿಗುಂಟಾ, ಕಟ್ಪಾಡಿ, ಜೋಲಾರ್ ಪೇಟೆ ಮಾರ್ಗವಾಗಿ ರೈಲು ಸಂಚರಿಸಲಿದೆ. ಗುರುವಾರ ಮತ್ತು ಭಾನುವಾರ ಸಂಜೆ 4.30ಕ್ಕೆ ಕೆ.ಆರ್.ಪುರಂನಿಂದ ಹೊರಡುವ ರೈಲು ಶುಕ್ರವಾರ ಮತ್ತು ಸೋಮವಾರ ಬೆಳಿಗ್ಗೆ 11.30ಕ್ಕೆ ವಿಶಾಖಪಟ್ಟಣ ತಲುಪಲಿದೆ. [ಮೈಸೂರು-ಬೆಂಗ್ಳೂರು ಪ್ರಯಾಣದ ಅವಧಿ 1 ಗಂಟೆ 40 ನಿಮಿಷ]
ಗೋರಖ್ಪುರ-ಕೆ.ಆರ್.ಪುರಂ : ಬೆಂಗಳೂರಿನ ಕೆ.ಆರ್.ಪುರಂ ಮತ್ತು ಗೋರಖ್ಪುರ ನಡುವೆ ಜೂನ್ 4ರಿಂದ ವೀಕ್ಲಿ ಎಕ್ಸ್ಪ್ರೆಸ್ ರೈಲು ಸಂಚಾರ ಆರಂಭಿಸಿದ್ದು, ಜೂನ್ 27ರವರೆಗೆ ಈ ಸೇವೆ ಲಭ್ಯವಿರಲಿದೆ. ಪ್ರತಿ ಗುರುವಾರ ರಾತ್ರಿ 8.25ಕ್ಕೆ ಗೋರಖ್ ಪುರದಿಂದ ಹೊರಡುವ ರೈಲು ಶನಿವಾರ ಬೆಳಗ್ಗೆ 11 ಗಂಟೆಗೆ ಕೆ.ಆರ್.ಪುರಂ ತಲುಪಲಿದೆ.
ಶನಿವಾರ ರಾತ್ರಿ 11.55ಕ್ಕೆ ಕೆ.ಆರ್.ಪುರಂನಿಂದ ಹೊರಡುವ ರೈಲು ಮಂಗಳವಾರ ಮಧ್ಯಾಹ್ನ 2.15ಕ್ಕೆ ಗೋರಖ್ಪುರ ತಲುಪಲಿದೆ. ಈ ರೈಲು ಖಲೀಲಾಬಾದ್, ಬಸ್ತಿ, ಗೊಂಡಾ, ಬಾರಾಬಂಕಿ, ಲಖ್ನೋ, ಕಾನ್ಪುರ ಸೆಂಟ್ರಲ್, ಝಾನ್ಸಿ, ಬಿನಾ, ಹಬೀಬ್ಗಂಜ್, ವಾರಂಗಲ್, ವಿಜಯವಾಡ, ತೆನಾಲಿ, ಶ್ರೀ ಕಾಳಹಸ್ತಿ ಮೂಲಕ ಸಂಚಾರ ನಡೆಸಲಿದೆ.