ಕೆ.ಎ.ಎಸ್ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ
ಬೆಂಗಳೂರು, ಜೂನ್ 13 : ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ ಸಿ) ವು ಪ್ರೊಬೇಷನರ್ಸ್ 2015-16 ನೇ ಸಾಲಿನ ಗ್ರೂಪ್ 'ಎ' ಮತ್ತು 'ಬಿ' ವೃಂದದ 401 ಹುದ್ದೆಗಳನ್ನು ಭರ್ತಿಮಾಡಲು ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಕೊನೆ ದಿನಾಂಕವನ್ನು ವಿಸ್ತರಿಸಲಾಗಿದೆ.
ಈ ಮುಂಚೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12-06-2017 ಮತ್ತು ಶುಲ್ಕ ಪಾವತಿಸಲು ಕೊನೆಯ ದಿನಾಂಕ: 13-06-2017 ಎಂದು ನಿಗದಿಪಡಿಸಲಾಗಿತ್ತು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 27-06-2017 ಮತ್ತು ಶುಲ್ಕ ಪಾವತಿಸಲು 28-06-2017 ರವರೆಗೆ ವಿಸ್ತರಿಸಲಾಗಿದೆ.
ಈಗಾಗಲೇ ಅಧಿಸೂಚಿಸಿದ ಹುದ್ದೆಗಳೊಂದಿಗೆ ಇನ್ನೂ 10 ಕೆ.ಎ.ಎಸ್. (ಕಿರಿಯ ಶ್ರೇಣಿ) ಸಹಾಯಕ ಆಯುಕ್ತರ ಹುದ್ದೆಗಳು ಹಾಗೂ 12 (ಮೂ.ವೃ) ಮುಖ್ಯಾಧಿಕಾರಿ ಶ್ರೇಣಿ - 1 ರ ಹುದ್ದೆಗಳನ್ನು ಈಗಾಗಲೇ ಅಧಿಸೂಚಿಸಿದ ಹುದ್ದೆಗಳಿಗೆ ಸೇರಿಸಿ ಸೇರ್ಪಡೆ ಅಧಿಸೂಚನೆಯನ್ನು ಹೊರಡಿಸಿದೆ.
ಕೆಪಿಎಸ್ಸಿಯಿಂದ ಗೆಜೆಟೆಡ್ ಪ್ರೊಬೇಷನರ್ಸ್ 401 ಹುದ್ದೆಗೆ ಅರ್ಜಿ
ಸರ್ಕಾರದ ಆದೇಶದಂತೆ ಈ ಅಧಿಸೂಚನೆಗೆ ಅನುಗುಣವಾಗಿ ಅರ್ಜಿ ಸಲ್ಲಿಸುವ ಎಲ್ಲಾ ಅರ್ಹ ಅಭ್ಯರ್ಥಿಗಳಿಗೆ ಹೆಚ್ಚುವರಿಯಾಗಿ ಒಂದು ವರ್ಷದ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
ಇನ್ನು ಪೂರ್ವಭಾವಿ ಪರೀಕ್ಷೆಯನ್ನು ಆಗಸ್ಟ್ 20ರಂದು ನಡೆಸಲು ಉದ್ದೇಶಿಸಲಾಗಿದೆ. ಮುಖ್ಯ ಪರೀಕ್ಷೆಯನ್ನು ಇದೇ ನವೆಂಬರ್ ನಲ್ಲಿ ನಡೆಸಲು ಆಯೋಗವು ನಿರ್ಧರಿಸಿದೆ. ಅನಿವಾರ್ಯ ಕಾರಣಗಳಿದ್ದಲ್ಲಿ ಪರೀಕ್ಷಾ ದಿನಾಂಕವನ್ನು ಬದಲಾವಣೆ ಮಾಡಬಹುದು.
ಸಾಮಾನ್ಯ ಅಭ್ಯರ್ಥಿಗೆ ಈ ಪರೀಕ್ಷೆ ಬರೆಯಲು 5 ಬಾರಿ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗೆ 7 ಬಾರಿ ಅವಕಾಶವಿರುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಪ್ರಯತ್ನಗಳ ಮಿತಿ ಇಲ್ಲ. ಪೂರ್ವಭಾವಿ ಪರೀಕ್ಷೆಯ ಪ್ರತಿಯೊಂದು ಪ್ರಯತ್ನವನ್ನು ಒಂದು ಅವಕಾಶವೆಂದು ಪರಿಗಣಿಸಲಾಗುವುದು.(ಒನ್ಇಂಡಿಯಾ ಸುದ್ದಿ)