ಪ್ರಶ್ನೆ ಪತ್ರಿಕೆ ಸಮೇತ ಸಿಸಿಬಿ ಬಲೆಗೆ ಬಿದ್ದ ಲೀಕಾಸುರರು !
ಬೆಂಗಳೂರು, ಜನವರಿ 23: ಕರ್ನಾಟಕ ಲೋಕ ಸೇವಾ ಆಯೋಗ ಭಾನುವಾರ ನಡೆಸಲಿದ್ದ ಸಹಾಯಕ ಮತ್ತು ಪ್ರಥಮ ದರ್ಜೆ ಸಹಾಯಕ ಪರೀಕ್ಷೆ ಪ್ರಶ್ನೆ ಪತ್ರಿಕೆ ಒಂದು ದಿನ ಮೊದಲೇ ಸೋರಿಕೆಯಾಗಿದೆ. ಪರೀಕ್ಷೆಗೂ ಮುನ್ನ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ದ ಇಬ್ಬರು ಲೀಕಾಸುರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ರಾಚಪ್ಪ ಮತ್ತು ಚಂದ್ರು ಬಂಧಿತ ಆರೋಪಿಗಳು. ಆರೋಪಿಗಳ ಬಳಿಯಿದ್ದ ಪ್ರಶ್ನೆ ಪತ್ರಿಕೆಗಳು ಕರ್ನಾಟಕ ಲೋಕ ಸೇವಾ ಆಯೋಗ ಭಾನುವಾರ ನಡೆಸಲಿದ್ದ ಪರೀಕ್ಷೆ ಪ್ರಶ್ನೆ ಪತ್ರಿಕೆಗೆ ಸಾಮ್ಯತೆ ಕಂಡು ಬಂದಿದ್ದು, ಪ್ರಶ್ನೆ ಪತ್ರಿಕೆ ಲೀಕ್ ಆಗಿರುವುದು ಖಚಿತವಾಗಿದೆ. ಸಿಸಿಬಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ ಹಿನ್ನೆಲೆಯಲ್ಲಿ ಭಾನುವಾರ ನಡೆಯಬೇಕಿದ್ದ ಸಹಾಯಕ ಮತ್ತು ಪ್ರಥಮ ದರ್ಜೆ ಸಹಾಯಕ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಯೋಗ ಅನಿರ್ಧಿಷ್ಟ ಅವಧಿಗೆ ಮುಂದೂಡಿದೆ.
ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ: ಭಾನುವಾರದ ಪರೀಕ್ಷೆ ಮುಂದೂಡಿಕೆ
ಭಾನುವಾರ ನಡೆಯಬೇಕಿದ್ದ ಸಹಾಯಕ ಮತ್ತು ಪ್ರಥಮ ದರ್ಜೆ ಸಹಾಯಕ ಪ್ರಶ್ನೆ ಪತ್ರಿಕೆ ಲೀಕ್ ಆಗಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿತ್ತು. ಜ್ಞಾನ ಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಾಳದಲ್ಲಿ ಒಂದಡೆ ಅಭ್ಯರ್ಥಿಗಳನ್ನು ಸೇರಿಸಿ ಅವರಿಗೆ ಪರೀಕ್ಷೆ ಮುನ್ನವೇ ಪ್ರಶ್ನೆ ಪತ್ರಿಕೆ ಕೊಟ್ಟು ಉತ್ತರ ಬರಿಸುತ್ತಿದ್ದರು ಎಂಬ ಖಚಿತ ಮಾಹಿತಿ ಸಿಸಿಬಿ ಪೊಲೀಸರಿಗೆ ಸಿಕ್ಕಿತ್ತು. ಇದರ ಆಧಾರದ ಮೇಲೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಏಜೆಂಟರಾದ ಚಂದ್ರು ಹಾಗೂ ರಾಚಪ್ಪ ಎಂಬುವರು ಸಿಕ್ಕಿಬಿದ್ದಿದ್ದು, ಅವರ ಬಳಿಯಿದ್ದ ಪ್ರಶ್ನೆ ಪತ್ರಿಕೆಗಳನ್ನು ವಶಪಡಿಸಿಕೊಂಡಿದ್ದಾರೆ. ಅವನ್ನು ಆಯೋಗಕ್ಕೆ ನೀಡಿದಾಗ, ಪ್ರಶ್ನೆ ಪತ್ರಿಕೆ ಲೀಕ್ ಆಗಿರುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಲೀಕ್ ಲೀಕ್ : ಪಿಯುಸಿ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ದ ಶಿವಕುಮಾರಸ್ವಾಮಿ ಗ್ಯಾಂಗ್ ಕೆಪಿಎಸ್ ಸಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಲೀಕ್ ಮಾಡಿರುವ ಸಂಗತಿ ಹೊರಗೆ ಬಿದ್ದಿತ್ತು. ಶಿವಕುಮಾರಸ್ವಾಮಿ ಜೈಲಿನಲ್ಲಿದ್ದೇ ಕೆಲವು ಪ್ರಶ್ನೆ ಪತ್ರಿಕೆಗಳನ್ನು ಲೀಕ್ ಮಾಡಿಸಿದ್ದ. ಇದೀಗ ಮತ್ತೊಮ್ಮೆ ಕೆಪಿಎಸ್ ಸಿಯ ವೈಫಲ್ಯ ಬೆಳಕಿಗೆ ಬಂದಿದೆ. ಬಂಧನಕ್ಕೆ ಒಳಗಾಗಿರುವ ಆರೋಪಿಗಳ ಬಳಿಯಿರುವ ಪ್ರಶ್ನೆ ಪತ್ರಿಕೆ ಕೆಪಿಎಸ್ ಸಿ ಭಾನುವಾರ ನಡೆಯಲಿದ್ದ ಪರೀಕ್ಷೆಗೆ ಸಂಬಂಧಿಸಿದ್ದು ಎಂಬುದು ಖಚಿತವಾಗಿದೆ. ಆರೋಪಿಗಳು ಅನೇಕ ಉದ್ಯೋಗಾಂಕ್ಷಿಗಳಿಂದ ಹಣ ಪಡೆದಿದ್ದು, ಇವರ ಸಂಪರ್ಕದಲ್ಲಿರುವ ಅಭ್ಯರ್ಥಿಗಳ ಪತ್ತೆಗೆ ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ. ನೂರಾರು ವಿದ್ಯಾರ್ಥಿಗಳಿಂದ ಮುಂಗಡ ಹಣ ಪಡೆದಿದ್ದು, ಸಿಸಿಬಿ ಪೊಲೀಸರ ಬಲೆಗೆ ಬೀಳದಿದ್ದಲ್ಲಿ, ನಿರೀಕ್ಷೆಯಂತೆ ಹಲವು ಜಿಲ್ಲೆಗಳಿಗೆ ಪ್ರಶ್ನೆ ಪತ್ರಿಕೆ ರವಾನೆಯಾಗುತ್ತಿತ್ತು ಇವತ್ತು ರಾತ್ರಿಯೇ ಉತ್ತರಗಳಿಗೆ ತಯಾರಿ ನಡೆಸಿ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ಉದ್ಯೋಗ ತಪ್ಪಿಸುವ ಅಕ್ರಮಕ್ಕೆ ನಾಂದಿ ಹಾಡಿತ್ತು. ಸಿಸಿಬಿ ಪೊಲೀಸರು ಎಚ್ಚೆತ್ತ ಕಾರಣಕ್ಕೆ ಪರೀಕ್ಷೆ ಮುಂದೂಡಲಾಗಿದೆ.
ಮೊಬೈಲ್ ಲೀಕ್ ರದ್ದು: ಪ್ರಶ್ನೆ ಪತ್ರಿಕೆ ಕೊಡುವುದಾಗಿ ಹಲವು ಅಭ್ಯರ್ಥಿಗಳಿಂದ ಹಣ ಪಡೆದಿದ್ದ ಆರೋಪಿಗಳು ಪ್ರಶ್ನೆ ಪತ್ರಿಕೆ ಲೀಕ್ ಆಗುವ ಸಂಗತಿ ಹೊರಗೆ ಬಾರದಂತೆ ಯೋಜನೆ ರೂಪಿಸಿದ್ದರು. ಹೀಗಾಗಿ ಯಾವುದೇ ಕಾರಣಕ್ಕೂ ಮೊಬೈಲ್ ನಲ್ಲಿ ರವಾನಿಸುವುದಿಲ್ಲ. ನಾವು ಹೇಳಿದ ಸ್ಥಳಕ್ಕೆ ಬಂದರೆ ಅಲ್ಲಿಯೇ ಪ್ರಶ್ನೆ ಪತ್ರಿಕೆ ನೀಡುವುದಾಗಿ ಹೇಳಿದ್ದರು. ಇವರನ್ನು ನಂಬಿ ಅನೇಕ ಅಭ್ಯರ್ಥಿಗಳು ಹಣವನ್ನು ಪಾವತಿಸಿದ್ದು, ಇವತ್ತು ರಾತ್ರಿ ಲಕ್ಷಾಂತರ ರೂಪಾಯಿ ಹಣ ಸಂಗ್ರಹವಾಗಬೇಕಿತ್ತು. ಈ ಜಾಲದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಆರೋಪಿಗಳು ಶಾಮೀಲಾಗಿದ್ದು, ಬಂಧಿತ ಆರೋಪಿಗಳ ಕರೆ ವಿವರಗಳ ಆಧಾರದ ಮೇಲೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.
Recommended Video
ಕೆಪಿಎಸ್ ಸಿ ಲಿಂಕ್ : ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೆಪಿಎಸ್ ಸಿ ಅಧಿಕಾರಿಗಳು ಶಾಮೀಲಾಗಿದ್ದಾರೆ. ಇಲ್ಲವೇ ಜಿಲ್ಲಾ ಕೇಂದ್ರಗಳ ಭದ್ರತಾ ಕೊಠಡಿಯಿಂದ ಲೀಕ್ ಆಗಿರುವ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈವರೆಗೂ ಕೆಪಿಎಸ್ ಸಿ ನಡೆಸಿರುವ ಹಲವು ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳುಸೋರಿಕೆಯಾಗಿದ್ದು, ಈಗಲೂ ಸಹ ಸೋರಿಕೆಯಾಗಿರುವುದು ಕೆಪಿಎಸ್ ಸಿ ನಂಬಿಕೆ ಕಳೆದುಕೊಂಡಂತಾಗಿದೆ.