ಕೆಪಿಎಂಇ ಕಾಯ್ದೆಗೆ ರಾಜ್ಯಪಾಲರ ಅಂಕಿತ, ಫೆಬ್ರವರಿಯಿಂದ ಜಾರಿ ಸಾಧ್ಯತೆ
ಬೆಂಗಳೂರು, ಜನವರಿ 6 : ತೀವ್ರ ವಿವಾದಕ್ಕೀಡಾಗಿದ್ದ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ(ಕೆಪಿಎಂಇ) ಕಾಯ್ದೆಗೆ ಕೊನೆಗೂ ರಾಜ್ಯಪಾಲ ವಜುಭಾಯಿ ವಾಲ ಅವರು ಸಹಿ ಹಾಕಿದ್ದು, ಮುಂದಿನ ತಿಂಗಳೂ ಅಂದರೆ ಫೆಬ್ರವರಿಯಿಂದ ಕಾಯ್ದೆ ಜಾರಿಯಾಗುವ ಸಾಧ್ಯತೆಯಿದೆ.
ಈ ಬಗ್ಗೆ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಮೇಶ್ ಕುಮಾರ್, " ಕೆಪಿಎಂಇ ಕಾಯ್ದೆ ಸಾರ್ವಜನಿಕರಿಗೆ ಪ್ರಯೋಜನವಾಗಲಿದೆ. ಹಾಗೆಯೇ ಖಾಸಗಿ ಆಸ್ಪತ್ರೆಯ ವೈದ್ಯರಿಗೂ ಸಹ ಇದರಿಂದ ಯಾವ ತೊಂದರೆಯಾಗುವುದಿಲ್ಲ" ಎಂದು ಹೇಳಿದರು.
ಸಿದ್ದರಾಮಯ್ಯ ಇಲ್ಲದೆ ಕೆ.ಪಿ.ಎಂ.ಇ ಕಾಯ್ದೆ ಮಂಡನೆ ಆಗುತ್ತಿರಲಿಲ್ಲ : ರಮೇಶ್ ಕುಮಾರ್
ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಅಂಗೀಕಾರವಾದ ನಂತರ ಇದನ್ನು ರಾಜ್ಯಪಾಲರ ಅನುಮೋದನೆಗಾಗಿ ಕಳಿಸಲಾಗಿತ್ತು. ಗುರುವಾರದಂದು ಸಚಿವ ರಮೇಶ್ ಕುಮಾರ್ ರಾಜ್ಯಪಾಲರೊಡನೆ ಚರ್ಚೆ ನಡೆಸಿದ ನಂತರ ಶುಕ್ರವಾರ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.
ಈ ಕಾಯ್ದೆಯಿಂದ ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳು ಮನಸ್ಸಿಗೆ ಬಂದಂತೆ ವಿಧಿಸುವ ಚಿಕಿತ್ಸಾ ದರಕ್ಕೆ ನಿಯಂತ್ರಣ ಬೀಳಲಿದೆ. ಈ ಕಾಯ್ದೆಯನ್ನು ಜಾರಿಗೆ ತರದಂತೆ ಇತ್ತೀಚೆಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದ ವೇಳೆ ರಾಜ್ಯದ ಖಾಸಗಿ ವೈದ್ಯರು ಮೂರ್ನಾಲ್ಕು ದಿನಗಳ ವರೆಗೆ ಆಸ್ಪತ್ರೆಗಳನ್ನು ಮುಚ್ಚಿ ಧರಣಿ ನಡೆಸಿದ್ದರು.
ವೈದ್ಯರ ಪ್ರತಿಭಟನೆಯಿಂದಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದೆ ಹತ್ತಾರು ರೋಗಿಗಳು ಸಾವನ್ನಪ್ಪಿದ್ದರು.