ಮುಖ್ಯಮಂತ್ರಿಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷರು ಬರೆದ ಸುದೀರ್ಘ ಪತ್ರ
ಬೆಂಗಳೂರು, ಆ 20: ರಾಜ್ಯದಲ್ಲಿನ ಭೀಕರ ಪ್ರವಾಹ, ಪರಿಹಾರ ಕೆಲಸಗಳು, ಪ್ರಧಾನಮಂತ್ರಿ ಫಸಲು ಭೀಮಾ ಯೋಜನೆ, ಮುಂತಾದ ವಿಚಾರಗಳ ಮೇಲೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆಯವರು, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರವನ್ನು ಬರೆದಿದ್ದಾರೆ. ಪತ್ರದ ಸಾರಾಂಶ ಇಂತಿದೆ:
ರಾಜ್ಯದಲ್ಲಿ ಭೀಕರ ಪ್ರವಾಹ ಮತ್ತು ಮಹಾ ಮಳೆಯಿಂದಾಗಿ ಲಕ್ಷಾಂತರ ಜನ ನಿರಾಶ್ರಿತರಾಗಿ ಮತ್ತು ಪ್ರವಾಹ ಉಂಟಾಗಿರುವ ಸಂಕಷ್ಟ ಪರಿಸ್ಥಿತಿಯಲ್ಲಿ 2019ನೇ ಸಾಲಿನ ಪ್ರೊಬೆಷನರಿ ಸಹಾಯಕರನ್ನು ಅಲ್ಪಾವಧಿ ತರಬೇತಿಗೆ ಕಳುಹಿಸುತ್ತಿರುವುದನ್ನು ಮುಂದೂಡುವ ಬಗ್ಗೆ. ರಾಜ್ಯದಲ್ಲಿ 22 ಜಿಲ್ಲೆ ಮತ್ತು 103 ತಾಲ್ಲೂಕುಗಳಲ್ಲಿ ಭೀಕರವಾದ ಪ್ರವಾಹ ಮತ್ತು ಮಹಾ ಮಳೆಯಿಂದಾಗಿ ಲಕ್ಷಾಂತರ ಜನ, ಮನೆ, ಜಮೀನು, ಎಲ್ಲಾ ವಸ್ತುಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.
ನಾನು ಖುದ್ದಾಗಿ ಹಲವು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ, ಅಲ್ಲಿಯ ವಾಸ್ತವ ಪರಿಸ್ಥಿತಿ, ಜನರ ಕಷ್ಟ ಮತ್ತು ಅವರ ದಯನೀಯ ಸ್ಥಿತಿ ನೋಡಿದ್ದೇನೆ, ಅವರ ಬದುಕು ಹೇಳದ ರೀತಿಯಲ್ಲಿ ಸಂಪೂರ್ಣ ಅತಂತ್ರವಾಗಿದೆ. ಅದೆಲ್ಲಾ ಸಹಜ ಸ್ಥಿತಿಗೆ ಬರಲು ಬಹಳ ಸಮಯ ಬೇಕಾಗುತ್ತದೆ, ಅವರಿಗೆ ಸಹಕಾರಿಯಾಗಲು ಸಂಪೂರ್ಣ ಪ್ರಯತ್ನ ಸರ್ಕಾರದ ವತಿಯಿಂದ ಯುದ್ದೋಪಾದಿಯಲ್ಲಿ ನಡೆಯಬೇಕಿದೆ.
ರಾಜ್ಯದಲ್ಲಿ ಈಗಾಗಲೇ ಅನೇಕ ಅಧಿಕಾರಿಗಳು ಅದರಲ್ಲೂ ವಿಶೇಷವಾಗಿ 2019ರ ಪ್ರೊಬೆಷನರಿ ಸಹಾಯಕ ಅಧಿಕಾರಿಗಳನ್ನು ನೆರೆ ಹಾವಳಿಯಿಂದ ಹಾನಿಗೀಡಾದ ಜಿಲ್ಲೆಗಳಿಗೆ ವಿಶೇಷ ಅಧಿಕಾರಿಗಳನ್ನಾಗಿ ಕರ್ತವ್ಯ ನಿರ್ವಹಿಸಲು ನಿಯೋಜಿಸಲಾಗಿದೆ. ಅವರು ಆಯಾಯ ಜಿಲ್ಲೆಗಳಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಕೃತಿ ವಿಕೋಪದ ಸಂದರ್ಭ
ಇಂತಹ ಪರಿಸ್ಥಿತಿಯಲ್ಲಿ ನೆರೆ ಹಾವಳಿಯ ಪ್ರದೇಶಕ್ಕೆ ನಿಯೋಜಿತವಾದ 58 ಕೆಎಎಸ್ (ಕಿರಿಯ ಶ್ರೇಣಿ) ಅಧಿಕಾರಿಗಳನ್ನು ಆಡಳಿತ ತರಬೇತಿಗೆ ದಿನಾಂಕ 26-8-2019 ರಿಂದ 21-9-2019 ರವರೆಗೆ ಕಳುಹಿಸುವುದು ಸಮಯೋಚಿತವಲ್ಲ. ಏಕೆಂದರೆ ಈಗಾಗಲೇ ಅವರು ಆಯಾ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಇಂತಹ ಪ್ರಕೃತಿ ವಿಕೋಪವಾದ ಸಂದರ್ಭದಲ್ಲಿ ಅವರು ಅಲ್ಲೇ ಇರುವುದು ಬಹಳ ಅವಶ್ಯಕವಾಗಿದೆ.
ಹಾನಿಗೀಡಾದ ಜಿಲ್ಲೆಗಳಲ್ಲಿ ವಿಶೇಷ ಅಧಿಕಾರಿಗಳಾಗಿ ನಿಯೋಜಿಸಲಾದ ಕಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿಗಳು
58 ಅಧಿಕಾರಿಗಳು ಮತ್ತು ಇವರಿಗೆ ಬೋಧನೆ ಮಾಡಲು ಹಲವಾರು ಅಧಿಕಾರಿಗಳನ್ನು ತರಬೇತಿ ಹೆಸರಿನಲ್ಲಿ 4-5 ದಿನಗಳು ಕರ್ನಾಟಕ ದರ್ಶನದಂತ ಪ್ರವಾಸ ಏರ್ಪಡಿಸಿರುವುದು, ನೆರೆ ಪೀಡಿತ ಸಂತ್ರಸ್ತರಿಗೆ ಅನ್ಯಾಯವಾಗುತ್ತದೆ. ಸಂತ್ರಸ್ತರ ತುರ್ತು ಅವಶ್ಯಗಳಿಗೆ ಅನಾವಶ್ಯಕವಾಗಿ ವಿಳಂಬವಾಗುತ್ತಿದೆ. ಆದ್ದರಿಂದ ನೆರೆ ಸಂತ್ರಸ್ತರ ಹಾವಳಿಯಿಂದ ಹಾನಿಗೀಡಾದ ಜಿಲ್ಲೆಗಳಲ್ಲಿ ವಿಶೇಷ ಅಧಿಕಾರಿಗಳಾಗಿ ನಿಯೋಜಿಸಲಾದ ಕಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿಗಳೆಲ್ಲರಿಗೂ ಕರ್ತವ್ಯದಿಂದ ಬಿಡುಗಡೆ ಮಾಡದೇ ಅಲ್ಪಾವಧಿ ತರಬೇತಿ ದಿನಾಂಕ ಮುಂದೂಡಿ ಈ ಸಂಕಷ್ಟದ ಸಮಯ ಮುಗಿದ ನಂತರ ಅವರಿಗೆ ತರಬೇತಿ ಕೊಡುವ ಕಾರ್ಯ ಮಾಡಬೇಕು. ಯಾವುದೇ ಕಾರಣಕ್ಕೂ ಬಿಡುಗಡೆಗೊಳಿಸಬಾರದೆಂದು ವಿನಂತಿಸುತ್ತೇನೆ.
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಅನುಷ್ಠಾನ ನೆರೆ ಪೀಡಿತ ಮತ್ತು ಬರಪೀಡಿತ ಪ್ರದೇಶಗಳಲ್ಲಿ ಸಮರ್ಪಕವಾಗಿ ಅನುಷ್ಠಾನವಾಗದಿರುವುದರಿಂದ ಲಕ್ಷಾಂತರ ರೈತರಿಗೆ ಅನ್ಯಾಯವಾಗುತ್ತಿರುವುದನ್ನು ಸರಿಪಡಿಸುವುದರ ಬಗ್ಗೆ. ರಾಜ್ಯದಲ್ಲಿ 22 ಜಿಲ್ಲೆ ಮತ್ತು 103 ತಾಲ್ಲೂಕುಗಳು ಮತ್ತು ಕೆಲವು ಜಿಲ್ಲೆಗಳಲ್ಲಿ ನೆರೆ ಹಾವಳಿ ಮತ್ತು ಬರಗಾಲದಿಂದ ಹಾನಿಗೀಡಾಗಿ ಲಕ್ಷಾಂತರ ರೈತರು ಸಂಕಷ್ಟಕ್ಕೆ ಒಳಗಾಗಿ ನಿರಾಶ್ರಿತರಾಗಿರುವುದು ತಮ್ಮ ಗಮನದಲ್ಲಿದೆ.
ಪ್ರವಾಹ ಸಂದರ್ಭದಲ್ಲಿ ಜಂಟಿ ಸಮಿತಿ ರಚನೆ
ಆದರೆ ಕರ್ನಾಟಕ ರಾಜ್ಯದಲ್ಲಿ ನೆರೆ ಪೀಡಿತ ಪ್ರದೇಶಗಳು ಬೆಳೆ ಹಾನಿಗೆ ತುತ್ತಾದರೂ ಬೆಳೆವಿಮೆ ಪರಿಹಾರ ಕೊಡಿಸಲು ಸರ್ಕಾರದಿಂದ ಇದುವರೆಗೂ ಯಾವುದೇ ರೀತಿಯ ಕ್ರಮ ಜರುಗಿಸದಿರುವುದು ಕಂಡುಬಂದಿರುತ್ತದೆ. ಏಕೆಂದರೆ ಪ್ರವಾಹ ಸಂದರ್ಭದಲ್ಲಿ ಜಂಟಿ ಸಮಿತಿ ರಚನೆಯಾಗಬೇಕು 15 ದಿನಗಳೊಳಗೆ ಬೆಳೆಹಾನಿ ಸಮೀಕ್ಷೆ ನಡೆಸಿ, ವರದಿ ಸಲ್ಲಿಸಿದ 1 ತಿಂಗಳೊಳಗಾಗಿ ವಿಮೆ ಹಣವನ್ನು ಅರ್ಹ ರೈತರ ಖಾತೆಗೆ 25% ಪ್ರತಿಶತ ಹಣ ರೈತರ ಖಾತೆಗೆ ಜಮಾ ಮಾಡಬೇಕು ನಂತರ ಅಂತಿಮವಾಗಿ ಪೂರ್ಣ ಪ್ರಮಾಣದ ಹಣ ಜಮಾ ಮಾಡಬೇಕು.
ವಿಷಯವನ್ನು ಗಂಭೀರವಾಗಿ ಪರಿಗಣಿಸಿ
ಆದ್ದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ 22 ಜಿಲ್ಲೆಗಳಲ್ಲಿ ಬೆಳೆ ಹಾನಿಯಾಗಿದೆ ಮತ್ತು ಇತರೆ ಜಿಲ್ಲೆಗಳಲ್ಲಿ ಬರಗಾಲದಿಂದ ರೈತರ ಬೆಳೆಗಳಿಗೆ ಹಾನಿಯಾಗಿದೆ. ಪ್ರಕೃತಿ ವಿಕೋಪ ಅಡಿಯಲ್ಲಿ ವಿಮಾ ಸಂಸ್ಥೆಯವರು ರೈತರ ಬೆಳೆಗಳಿಗೆ ವಿಮೆ ಹಣವನ್ನು ತಕ್ಷಣವೇ ಬಿಡುಗಡೆಗೊಳಿಸಲು ಕ್ರಮ ಜರುಗಿಸಬೇಕೆಂದು ಒತ್ತಾಯಿಸುತ್ತೇನೆ.