ಅಬ್ಬಬ್ಬಾ.. ಅನರ್ಹ ಶಾಸಕರ ಮೇಲೆ ತಣ್ಣಗಾಗದ ಕಾಂಗ್ರೆಸ್ಸಿನ ಸಿಟ್ಟಿನ ಜ್ವಾಲೆ!
ಬೆಂಗಳೂರು, ಆ 1: ತಮ್ಮ ಪಕ್ಷದ ಅತೃಪ್ತ ಶಾಸಕರಿಂದಾಗಿ ಸರಕಾರ ಪತನಗೊಂಡ ಸಿಟ್ಟು, ಇನ್ನೂ ಕಾಂಗ್ರೆಸ್ಸಿಗೆ ತಣ್ಣಗಾದಂತಿಲ್ಲ. ಈಗಾಗಲೇ, ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದಲ್ಲದೇ, ಪಕ್ಷದಿಂದಲೂ ಅವರನ್ನೆಲ್ಲಾ ವಜಾಗೊಳಿಸಿತ್ತು.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಕೆಪಿಸಿಸಿ (ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ), ಇವರ ವಿರುದ್ದ ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಕೇವಿಯಟ್ ಅರ್ಜಿ ಸಲ್ಲಿಸಿದೆ.
ಪ್ರತಿಪಕ್ಷದ ನಾಯಕನ ಹುದ್ದೆ: ಸಿದ್ದರಾಮಯ್ಯನ ಮುಂದಿದೆ ಮುಳ್ಳಿನ ಹಾದಿ
ಅನರ್ಹಗೊಂಡ ಎಂಟು ಶಾಸಕರನ್ನು ಕೆಪಿಸಿಸಿ ಪ್ರತಿವಾದಿಗಳೆಂದು ಅರ್ಜಿ ಸಲ್ಲಿಸಿದ್ದು, ಏಕಪಕ್ಷೀಯವಾಗಿ ಆದೇಶ ನೀಡಬಾರದು, ನಮ್ಮ ವಾದವನ್ನೂ ಆಲಿಸಬೇಕೆಂದು ಕೋರ್ಟಿಗೆ, ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಅರ್ಜಿ ಸಲ್ಲಿಸಿದ್ದಾರೆ.
ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ಎಂಟು ಶಾಸಕರು, ಕೋರ್ಟೀಗೆ ಅರ್ಜಿ ಸಲ್ಲಿಸಿ ಮಧ್ಯಂತರ ಆದೇಶಕ್ಕೆ ಮನವಿ ಮಾಡಬಹುದು. ಅವರ ವಾದವನ್ನು ಮಾತ್ರ ಪರಿಗಣಿಸಬಾರದೆಂದು ಕೆಪಿಸಿಸಿ ಮನವಿ ಸಲ್ಲಿಸಿದೆ.
ಕಾಂಗ್ರೆಸ್ ಪ್ರತಿವಾದಿಗಳನ್ನಾಗಿಸಿರುವ ಎಂಟು ಅನರ್ಹ ಶಾಸಕರೆಂದರೆ, ರೋಷನ್ ಬೇಗ್, ಮುನಿರತ್ನ, ಶಿವರಾಂ ಹೆಬ್ಬಾರ್, ಬಿ ಸಿ ಪಾಟೀಲ್, ಪ್ರತಾಪ್ ಗೌಡ ಪಾಟೀಲ್, ಎಸ್ ಟಿ ಸೋಮಶೇಖರ್, ಭೈರತಿ ಬಸವರಾಜ್ ಮತ್ತು ಎಂಟಿಬಿ ನಾಗರಾಜ್.
ಕರ್ನಾಟಕ ಕಾಂಗ್ರೆಸ್ನ 14 ಮಾಜಿ ಶಾಸಕರು ಉಚ್ಛಾಟನೆ
ಜುಲೈ 30ರಂದು ಕೆಪಿಸಿಸಿ, ತನ್ನ 14 ಮಾಜಿ ಶಾಸಕರನ್ನು ಪಕ್ಷದಿಂದ ಉಚ್ಛಾಟನೆ ಮಾಡಿತ್ತು. 2018ರ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಎಲ್ಲಾ ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಇದಕ್ಕೆ ಮೊದಲು ಅನರ್ಹಗೊಳಿಸಿದ್ದರು.