ಕೃಷಿ ಕಾಯ್ದೆ: ಕೇಂದ್ರ ಸರ್ಕಾರದ ಕಿವಿ ಹಿಂಡುವ ಪ್ರಶ್ನೆ ಕೇಳಿದ ಕೆಪಿಸಿಸಿ!
ನವದೆಹಲಿ, ಜನವರಿ.20: ಕೇಂದ್ರ ಸರ್ಕಾರ ಜಾರಿಗೊಳಿಸಿದ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ರಾಜ್ಯ ರಾಜಧಾನಿಯಲ್ಲೂ ರೈತರು ರಣಕಹಳೆ ಮೊಳಗಿಸಿದರು. ಅನ್ನದಾತರ ಹೋರಾಟಕ್ಕೆ ರಾಜ್ಯ ಕಾಂಗ್ರೆಸ್ ಸಮಿತಿ ಕೈಜೋಡಿಸಿದ್ದು, ರಾಜಭವನ ಚಲೋ ನಡೆಸಲಾಯಿತು.
Recommended Video
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರೈತರು ನಡೆಸಿದ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿತು. ಕೃಷಿ ಕಾಯ್ದೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದ್ದು, ವಿವಾದಿತ ಕಾಯ್ದೆಗಳನ್ನು ರದ್ದುಗೊಳಿಸುವವರೆಗೂ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಸಂದೇಶವನ್ನು ರವಾನಿಸಲಾಯಿತು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ, ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ರೈತರ ಬೆಂಬಿಲಿಸಿ ಜನವರಿ 20ರಂದು ಬೃಹತ್ ಹೋರಾಟ: ಡಿಕೆ ಶಿವಕುಮಾರ್
ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳಿಗೆ ವಿರೋಧ ವ್ಯಕ್ತವಾಗಿದೆ. ಕಳೆದ 50 ದಿನಗಳಿಂದಲೂ ರೈತರು ನಡೆಸುತ್ತಿರುವ ಸುದೀರ್ಘ ಹೋರಾಟದ ನಡುವೆ ಕೇಂದ್ರ ಸರ್ಕಾರ ಕಾಯ್ದೆಗಳ ಜಾರಿಗೊಳಿಸಲು ಹಠಕ್ಕೆ ಬಿದ್ದಂತೆ ವರ್ತಿಸುತ್ತಿದೆ ಎಂಬ ಆರೋಪಗಳಿವೆ. ಈ ಹಿನ್ನೆಲೆ ಕೃಷಿ ಕಾಯ್ದೆಗಳ ಜಾರಿಗೊಳಿಸಲು ಹೊರಟ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ರಾಜ್ಯ ಕಾಂಗ್ರೆಸ್ ಸಮಿತಿಯು ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ಪ್ರಮುಖ ಪ್ರಶ್ನೆಗಳನ್ನು ಕೇಳಿದೆ. ಈ ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ.
ಸರ್ಕಾರಕ್ಕೆ ಕೇಳಿದ ಪ್ರಶ್ನೆ - 1
"ಕೃಷಿ ಕಾಯ್ದೆಯಂತಹ ಪ್ರಮುಖ ನಿರ್ಧಾರಕ್ಕೆ ಸಾಕಷ್ಟು ವಿಸ್ತೃತ ಚರ್ಚೆ, ವಿಮರ್ಶೆಗಳು ಅಗತ್ಯವಿದ್ದರೂ ಕೊರೊನಾ, ಲಾಕ್ ಡೌನ್ ನಂತಹ ಇಕ್ಕಟ್ಟಿನ ಸಂದರ್ಭದಲ್ಲಿ ಆತುರವಾಗಿ ಸುಗ್ರೀವಾಜ್ಞೆ ಹಾಗೂ ಕಾನೂನು ಬಾಹಿರವಾಗಿ ಧ್ವನಿಮತದ ಮೂಲಕ ಅಸಂವಿಧಾನಿಕ ಅನುಮೋದನೆ ಪಡೆಯುವುದು ಪ್ರಜಾಪ್ರಭುತ್ವ ಗೌರವಿಸುವ ಲಕ್ಷಣವೇ?" ಎಂದು ಪ್ರಶ್ನಿಸಲಾಗಿದೆ.
ಸರ್ಕಾರಕ್ಕೆ ಕೇಳಿದ ಪ್ರಶ್ನೆ - 2
"ಪ್ರತಿಭಟನಾ ನಿರತ ರೈತರನ್ನು ಖಲಿಸ್ತಾನಿಗಳು, ಪಾಕ್ ಏಜೆಂಟರು, ದೇಶದ್ರೋಹಿಗಳು ಎಂದೆಲ್ಲಾ ಬಗೆಬಗೆಯಲ್ಲಿ ಅವಮಾನಿಸಿ, ರೈತರನ್ನು ಹೇಡಿಗಳು ಎಂದಿದ್ದೀರಿ. ನೀವು ಈ ವಿಕೃತ ಮನಸ್ಥಿತಿ ಬಿಟ್ಟು ಸೌಜನ್ಯ ಕಲಿಯುವುದು ಯಾವಾಗ, ಪ್ರತಿಭಟನೆ ರೈತರ ಹಕ್ಕು ಎಂದು ಅರಿಯುವುದು ಯಾವಾಗ @BJP4Karnataka?" ಎಂದು ಟ್ವೀಟ್ ಮಾಡಲಾಗಿದೆ.
ವಿವಾದಿತ ಕೃಷಿ ಕಾಯ್ದೆ ಮತ್ತು ರೈತರ ಹೋರಾಟದ ಹಾದಿಯ ಚಿತ್ರಣ
ಸರ್ಕಾರಕ್ಕೆ ಕೇಳಿದ ಪ್ರಶ್ನೆ - 3
"ಕನಿಷ್ಠ ಬೆಂಬಲ ಬೆಲೆ (MSP) ಏಕೆ ಕೃಷಿ ಕಾಯ್ದೆಗಳ ಭಾಗವಾಗಿಲ್ಲ. ಕೇವಲ ಮಾತಿನಲ್ಲಿ ಬೆಂಬಲ ಬೆಲೆ ಮುಂದುವರಿಯುತ್ತವೆ ಎನ್ನುತ್ತಿದ್ದೀರಿ. ಲಿಖಿತ ಭರವಸೆ ಕೊಡುತ್ತೇವೆ ಎನ್ನುತ್ತಿರುವಿರಿ. ಆದರೆ MSPಯನ್ನು ಶಾಸನಬದ್ಧವಾಗಿಸಲು ಹಾಗೂ ಕಾಯ್ದೆಯಲ್ಲಿ ಜಾರಿಗೊಳಿಸಲು ಏಕೆ ಒಪ್ಪುತ್ತಿಲ್ಲ?" ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಸರ್ಕಾರಕ್ಕೆ ಕೇಳಿದ ಪ್ರಶ್ನೆ - 4
"ಕೃಷಿ ಸಂಬಂಧಿತ ಕಾನೂನುಗಳು ರಾಜ್ಯಗಳಿಗೆ ಸಂಬಂಧಿಸಿದ್ದು. ರಾಜ್ಯಗಳ ಹಿತಾಸಕ್ತಿ ಮರೆತು, ರಾಜ್ಯಗಳ ಅಭಿಪ್ರಾಯಗಳನ್ನು ಪಡೆಯದೆ ತುರಾತುರಿಯಲ್ಲಿ ದರೋಡೆಕೋರರಂತೆ ಅಸಂವಿಧಾನಿಕ ಮಾರ್ಗದಲ್ಲಿ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದ್ದೇಕೆ @BJP4Karnataka?" ಎಂದು ಪ್ರಶ್ನಿಸಲಾಗಿದೆ.
ಸರ್ಕಾರಕ್ಕೆ ಕೇಳಿದ ಪ್ರಶ್ನೆ - 5
"ರೈತರನ್ನು ಅದಾನಿ, ಅಂಬಾನಿಗಳ ಜೀತದಾಳುಗಳನ್ನಾಗಿ ಮಾಡುವ ಹುನ್ನಾರ ರೂಪಿಸಿದ್ದು ಬಯಲಾಗಿದೆ. ರಿಲಯನ್ಸ್ ಸಂಸ್ಥೆ ಕೃಷಿ ಮಾರುಕಟ್ಟೆ ಪ್ರವೇಶಿಸುವುದಿಲ್ಲ ಎಂದು ಸುಳ್ಳು ಹೇಳಿಕೆ ನೀಡಿದ ಬೆನ್ನಲ್ಲೇ ಕರ್ನಾಟಕದಲ್ಲಿ ಖರೀದಿಗೆ ಮುಂದಾಗುತ್ತದೆ, ಅದಕ್ಕೆ @BJP4Karnataka ಪ್ರಚಾರ ನೀಡುತ್ತದೆ. ಈ ನವರಂಗಿ ನಾಟಕ ಏಕೆ?" ಎಂಬುದಾಗಿ ಕಾಂಗ್ರೆಸ್ ಕಿಡಿ ಕಾರಿದೆ.
ಸರ್ಕಾರಕ್ಕೆ ಕೇಳಿದ ಪ್ರಶ್ನೆ - 6
"ಉದ್ಯಮಿ ಸ್ನೇಹಿತರ ಸಾವಿರಾರು ಕೋಟಿ ಸಾಲ ಮನ್ನಾ ಮಾಡುತ್ತೀರಿ. NPA ಹೆಸರಲ್ಲಿ ದೇಶದ ತೆರಿಗೆದಾರರ ಬೆವರಿನ ಹಣವನ್ನು ದೋಚುವ ಮಾರ್ಗ ಕಂಡುಕೊಂಡಿದ್ದೀರಿ. ಆದರೆ ಸಂಕಷ್ಟ ಎದುರಿಸುತ್ತಿರುವ ರೈತರ ಸಾಲ ಮನ್ನಾ ಮಾಡುವ ಮನಸು ನಿಮಗೇಕಿಲ್ಲ? ರೈತಾಪಿ ವರ್ಗದ ಹಿತರಕ್ಷಣೆಯ ನಿಮಗೆ ಅದ್ಯತೆಯಲ್ಲ ಏಕೆ?" ಎಂದು ಕಾಂಗ್ರೆಸ್ ಕೇಳಿದೆ.
ಸರ್ಕಾರಕ್ಕೆ ಕೇಳಿದ ಪ್ರಶ್ನೆ - 7
"ಹಸಿರು ಟವೆಲ್ ಹಾಕಿಕೊಂಡು ನಾನು ರೈತರ ಮುಖ್ಯಮಂತ್ರಿ ಎಂದಿದ್ದ @BSYBJP ಅವರೇ. ಈಗ ಕಾರ್ಪೊರೇಟ್ಗಳ ಸಿಎಂ ಆಗಿ ಬದಲಾಗಿದ್ದೇಕೆ?. ಪ್ರವಾಹದಲ್ಲಿ ನೊಂದ ರೈತರಿಗೆ ಪರಿಹಾರವಿಲ್ಲ, ಮನೆ ಕಟ್ಟಿಸಲಿಲ್ಲ, ಸಾಂತ್ವಾನವಿಲ್ಲ. ಕೇಂದ್ರದಿಂದ ಪರಿಹಾರ ತರಲಾಗಲಿಲ್ಲ. ಉದ್ಯಮಿಗಳ ಸ್ನೇಹದ ಮುಂದೆ ಹಸಿರು ಟವೆಲ್ ಕಳೆದು ಹೋಯ್ತೆ?" ಎಂದು ಸಿಎಂ ಬಿ.ಎಸ್.ಯಡಿಯೂರಪ್ಪರಿಗೆ ಪ್ರಶ್ನೆ ಮಾಡಲಾಗಿದೆ.
ಸರ್ಕಾರಕ್ಕೆ ಕೇಳಿದ ಪ್ರಶ್ನೆ - 8
"ಬಿಜೆಪಿ ದ್ವಿಗುಣ ಮಾಡುತ್ತಿರುವುದು ರೈತರ ಆದಾಯವನ್ನಲ್ಲ, ಅದಾನಿ, ಅಂಬಾನಿಗಳ ಆದಾಯವನ್ನು. @BJP4Karnataka ರಿಲಯನ್ಸ್ ಸಂಸ್ಥೆ MSPಗಿಂತ ಹೆಚ್ಚು ದರದಲ್ಲಿ ಖರೀದಿಸುತ್ತಿದೆ ಎಂದು ಸುಳ್ಳು ಪ್ರಚಾರ ನೀಡುವ ನೀವು MSPಗೆ ಮೇಲ್ಪಟ್ಟು ರಾಜ್ಯ ಸರ್ಕಾರ ನೀಡುತ್ತಿದ್ದ ಪ್ರೋತ್ಸಾಹ ಧನ ನಿಲ್ಲಿಸಿದ್ದೇಕೆ?" ಎಂದು ಪ್ರಶ್ನಿಸಲಾಗಿದೆ.
ಸರ್ಕಾರಕ್ಕೆ ಕೇಳಿದ ಪ್ರಶ್ನೆ - 9
"ಕೃಷಿ ಕಾಯ್ದೆಗಳಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಸಂಬಂಧಿಸಿದ ಅಧಿಕಾರಿಗಳು ಕಾಲಕಾಲಕ್ಕೆ ತರಬಹುದಾದ ನಿಯಮಗಳನ್ನು ಯಾರೂ ಪ್ರಶ್ನಿಸದಿರುವಂತೆ ನಿಯಮ ರೂಪಿಸಿದ್ದೇಕೆ?. ರೈತನ ಪ್ರಶ್ನಿಸುವ ಹಕ್ಕು ಕಿತ್ತುಕೊಂಡ ಈ ಸರ್ವಾಧಿಕಾರಿ ನೀತಿಯ ಹಿಂದಿರುವ ನಿಮ್ಮ ಕಾರ್ಪೊರೇಟ್ ಗೆಳೆಯರ ಲಾಭಿ ಎಷ್ಟು ದೊಡ್ಡದು?" ಎಂದು ಪ್ರಶ್ನಿಸಲಾಗಿದೆ.
ಸರ್ಕಾರಕ್ಕೆ ಕೇಳಿದ ಪ್ರಶ್ನೆ - 10
"ಒಪ್ಪಂದ ಕೃಷಿಯ ತಿದ್ದುಪಡಿಯಲ್ಲಿ ರೈತನಿಗೆ ಕಂಪೆನಿಗಳಿಂದ ಅನ್ಯಾಯವಾದಾಗ ನ್ಯಾಯಾಲಯದ ಮೊರೆ ಹೋಗುವ ಅವಕಾಶವನ್ನು ಕಿತ್ತುಕೊಂಡಿದ್ದೀರಿ. ದಂಡಾಧಿಕಾರಿ, ಜಿಲ್ಲಾಧಿಕಾರಿಗಳ ತೀರ್ಮಾನ ಅಂತಿಮಗೊಳಿಸಿ, ರೈತನಿಗೆ ನ್ಯಾಯಾಂಗದ ಬಾಗಿಲು ಮುಚ್ಚಿದ್ದು ಏಕೆ?. ರೈತನನ್ನು ನ್ಯಾಯ ವಂಚಿತನನ್ನಾಗಿಸುವ ಧೂರ್ತತನ ನಿಮ್ಮದೇಕೆ?" ಎಂದು ಕೆಪಿಸಿಸಿ ಪ್ರಶ್ನಿಸಿದೆ.
ಸರ್ಕಾರಕ್ಕೆ ಕೇಳಿದ ಪ್ರಶ್ನೆ - 11
"ರೈತರೇ ಬೇಡವನ್ನುತ್ತಿರುವ ಈ ಕಾನೂನುಗಳನ್ನು ಹಿಂತೆಗೆದುಕೊಳ್ಳಲು ಒಪ್ಪದೆ ಇಷ್ಟು ಮೊಂಡು ಹಠಕ್ಕೆ ಬಿದ್ದಿರುವ ನಿಮ್ಮ ಬಂಡತನಕ್ಕೆ ಕಾರಣಗಳೇನು? @BJP4Karnataka?. ಕೂಡಲೇ ಕಾಯ್ದೆ ಹಿಂಪಡೆಯಿರಿ, ಸಂಸತ್ತಿನಲ್ಲಿ ಚರ್ಚೆಗೆ ಬನ್ನಿ, ವಿಸ್ತೃತವಾಗಿ ಸಾಧಕ ಬಾಧಕಗಳ ಚರ್ಚೆ ನಡೆಯಲಿ" ಎಂದು ಕಾಂಗ್ರೆಸ್ ಆಗ್ರಹಿಸಿದೆ.