ರಾಹುಲ್ ಗಾಂಧಿ ಇಡಿ ವಿಚಾರಣೆ ವಿರುದ್ದ ಕಾಂಗ್ರೆಸ್ ಪ್ರತಿಭಟನೆ: ಬಿಜೆಪಿ ವ್ಯಂಗ್ಯ
ಬೆಂಗಳೂರು, ಜೂನ್ 13: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ವಾದ್ರಾ ಜಾರಿ ನಿರ್ದೇಶನಾಲಯದ (ಇಡಿ) ಮುಂದೆ ಹಾಜರಾಗಿದ್ದಾರೆ. ದೆಹಲಿಯಲ್ಲಿ ಮತ್ತು ದೇಶದ ಇತರ ಕಡೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಬೆಂಗಳೂರಿನಲ್ಲಿಯೂ ಕೆಪಿಸಿಸಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಕೇಂದ್ರ ಸರಕಾರದ ವಿರುದ್ದ ಧಿಕ್ಕಾರ ಮುಗಿಲುಮುಟ್ಟಿದೆ. ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಪಕ್ಷದ ಐಟಿ ಸೆಲ್ ವ್ಯಂಗ್ಯವಾಡಿದೆ.
"ಕೆಪಿಸಿಸಿ ಅಧ್ಯಕ್ಷರೇ ಇ.ಡಿ ತನಿಖೆಯನ್ನು ತಪ್ಪಿಸಲು ಒದ್ದಾಡುತ್ತಿರುವಾಗ, ಪಕ್ಷದ ಅಧ್ಯಕ್ಷೆ & ಅವರ ಮಗನನ್ನು ಇ.ಡಿ.ಯಿಂದ ರಕ್ಷಿಸೋಕೆ ನಿಂತಿರುವುದು ಕಾಂಗ್ರೆಸ್ಸಿನ ದಿವಾಳಿತನಕ್ಕೆ ಸಾಕ್ಷಿ. ಕೆಪಿಸಿಸಿ ಅಧ್ಯಕ್ಷರು ಒಂದು ಕುಟುಂಬದ ಊಳಿಗ ಮಾಡಲು ಮಾತ್ರ ಎಂದಾಗಿರುವುದು ಕಾಂಗ್ರೆಸ್ಸಿನ ದುರಂತ"ಎಂದು ನಳಿನ್ ಕಟೀಲ್ ಟ್ವೀಟ್ ಮಾಡಿದ್ದಾರೆ.
ಇಡಿ ವಿಚಾರಣೆಗೆ ರಾಹುಲ್, ಪ್ರಿಯಾಂಕಾ: ಕಾಂಗ್ರೆಸ್ ಪ್ರತಿಭಟನೆ
"ದೇಶಕ್ಕಾಗಿ ಮಡಿವ ಸೈನಿಕರ ಪರವಾಗಿ ಒಮ್ಮೆಯೂ ಕಾಂಗ್ರೆಸ್ ದನಿ ಎತ್ತಲಿಲ್ಲ. ರೈತರು ಆತ್ಮಹತ್ಯೆ ಮಾಡಿಕೊಂಡಾಗಲೂ ಕಾಂಗ್ರೆಸ್ ಬೀದಿಗೆ ಬರಲಿಲ್ಲ. ಆದರೆ ನಕಲಿ ಗಾಂಧಿಗಳಿಗೆ #EDNotice ನೀಡಿದರೆ ಕಾಂಗ್ರೆಸ್ ರಸ್ತೆಗೆ ಬಂದು ನಿಂತಿದೆ. ಇದು ಸಂವಿಧಾನಕ್ಕೆಸಗುತ್ತಿರುವ ಅಪಚಾರವಲ್ಲವೇ?"ಎಂದು ಬಿಜೆಪಿ ಪ್ರಶ್ನಿಸಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಗಾಂಧಿ ಕುಟುಂಬದ ವಿರುದ್ಧ ಆರೋಪಪಟ್ಟಿ
"ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ #ED ನಕಲಿ ಗಾಂಧಿ ಕುಟುಂಬದ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ. ತಪ್ಪು ಮಾಡದೇ ಇದ್ದರೆ ಭಯವೇಕೆ? ಸಹಾನುಭೂತಿ ಗಿಟ್ಟಿಸುವುದಕ್ಕಾಗಿ ಕಾಂಗ್ರೆಸ್ ಪ್ರತಿಭಟನೆಯ ನಾಟಕ ಹೆಣೆಯುತ್ತಿದೆ. ಇದೊಂದು ಯೋಜಿತ ಸಂಚು ಅಷ್ಟೇ!". "ತಪ್ಪು ಮಾಡದವರು ಯಾರು ಎಂದು ಒಪ್ಪಿಕೊಂಡು ತನಿಖೆ ಎದುರಿಸುವ ಮುಕ್ತ ಮನಸ್ಸು ನಕಲಿ ಗಾಂಧಿ ಕುಟುಂಬಕ್ಕಿಲ್ಲ. ತಪ್ಪು ಮಾಡದೇ ಇದ್ದರೆ ತನಿಖೆಯ ಅಗ್ನಿ ಪರೀಕ್ಷೆ ಎದುರಿಸಲು ಭಯವೇಕೆ? ಅಷ್ಟಕ್ಕೂ ತನಿಖೆ ಬೇಡ ಎನ್ನಲು, ನಕಲಿ ಗಾಂಧಿ ಕುಟುಂಬವನ್ನು ಹೊರಗಿಟ್ಟು ಭಾರತೀಯ ದಂಡ ಸಂಹಿತೆ ರಚಿಸಲಾಗಿದೆಯೇ?"ಎಂದು ಬಿಜೆಪಿಯ ರಾಜ್ಯ ಐಟಿ ಘಟಕ ಟ್ವೀಟ್ ಮಾಡಿದೆ. (ಚಿತ್ರ: ಪಿಟಿಐ)
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್
"ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಕಾನೂನಿಗೆ ಅತೀತರಾದವರಲ್ಲ. ಅವರು ಇಡಿ ವಿಚಾರಣೆ ಎದುರಿಸಿದರೆ ಕೆಪಿಸಿಸಿ ಅಧ್ಯಕ್ಷರು ತಮ್ಮ ಪಟಾಲಂ ಕಟ್ಟಿ ಯಾಕೆ ಇಡಿ ಕಚೇರಿ ಮುಂದೆ ಪ್ರತಿಭಟನೆ ಮಾಡಬೇಕು. ಇದರಿಂದ ಕಳ್ಳನ ಮನಸ್ಸು ಹುಳ್ಳಗೆ ಎಂದು ಸಾಬೀತಾಗಿದೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಆತ್ಮಗೌರವ ಇಲ್ವೇ? " ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ.
5000 ಸದಸ್ಯರ ಇಡಗಂಟಿನೊಂದಿಗೆ ಆರಂಭವಾದ ಅಸೋಸಿಯೇಟ್ ಜರ್ನಲ್ ಶೇರು
"ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಗಾಂಧಿ ಕುಟುಂಬ ನಡೆಸಿದ್ದು ಅಕ್ಷರಶಃ ಮನೆಗಳ್ಳತನ! ಕಾಂಗ್ರೆಸ್ ಪಕ್ಷದ 5000 ಸದಸ್ಯರ ಇಡಗಂಟಿನೊಂದಿಗೆ ಆರಂಭವಾದ ಅಸೋಸಿಯೇಟ್ ಜರ್ನಲ್ ಶೇರುಗಳನ್ನು ರಾಹುಲ್ ಗಾಂಧಿ ನೇತೃತ್ವದಲ್ಲಿ ಕಬಳಿಸಲಾಗಿದೆ. ಸ್ವಂತ ಮನೆಗೆ ಕನ್ನ ಹಾಕುವುದೆಂದರೆ ಇದೇ ಅಲ್ಲವೇ?". "ಉಪ್ಪು ತಿಂದ ಮೇಲೆ ನೀರು ಕುಡಿಯ ಬೇಕು, ತಪ್ಪು ಮಾಡಿದ ಮೇಲೆ ಶಿಕ್ಷೆ ಅನುಭವಿಸಬೇಕು. ರಾಹುಲ್ ಗಾಂಧಿ ನೇತೃತ್ವದ ಯಂಗ್ ಇಂಡಿಯಾ ಸಂಸ್ಥೆ ಅಕ್ರಮ ಹಣ ವರ್ಗಾವಣೆ ಮಾಡಿರುವುದಕ್ಕೆ ಜಾರಿ ನಿರ್ದೇಶನಾಲಯದ ಬಳಿ ಸಾಕಷ್ಟು ಸಾಕ್ಷಿಗಳಿವೆ. ಸತ್ಯ ಅನಾವರಣಗೊಳಿಸುವುದು ಕಾಂಗ್ರೆಸ್ ದೃಷ್ಟಿಯಲ್ಲಿ ಮಾತ್ರ ದ್ವೇಷದ ರಾಜಕಾರಣ!" ಬಿಜೆಪಿ ಐಟಿ ಘಟಕ ಮಾಡಿರುವ ಟ್ವೀಟ್.
ಜನಸಾಮಾನ್ಯರ ಕೆಲಸಕ್ಕೂ ಅಡ್ಡಿ ಮಾಡಿಕೊಂಡು, ರಸ್ತೆಗಿಳಿದರೆ ಜನರು ನಿಮ್ಮನ್ನು ಕ್ಷಮಿಸುವರೇ?
"ವಾರದ ಮೊದಲ ದಿನ ಕಾಂಗ್ರೆಸ್ ಕರ್ನಾಟಕದ ಜನತೆಯ ಮೇಲೆ ಹೊರೆ ಹೇರುತ್ತಿದೆ. ಶಾಂತಿಯ ನಾಡಿನಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸುತ್ತಿದೆ ಕಾಂಗ್ರೆಸ್. ರಾಹುಶಾಂತಿಗೋಸ್ಕರ ಸಮಾಜದ ಶಾಂತಿ ಕದಡುತ್ತಿರುವುದು ಖಂಡನೀಯ. ಸ್ವಾಮಿನಿಷ್ಠೆ ಪಾಲಿಸಲು, ತಾಯ್ನೆಲವನ್ನು ಕಾಂಗ್ರೆಸ್ ಅಗೌರವಿಸುತ್ತಿದೆ. "ಡಿಕೆಶಿ ಅವರೇ, ಕೇವಲ ಇಬ್ಬರು ವ್ಯಕ್ತಿಗಳಿಗಾಗಿ, ಕೇವಲ ಒಂದು ಕುಟುಂಬಕ್ಕಾಗಿ ಕೆಲಸ ಕಾರ್ಯ ಬಿಟ್ಟು, ಜನಸಾಮಾನ್ಯರ ಕೆಲಸಕ್ಕೂ ಅಡ್ಡಿ ಮಾಡಿಕೊಂಡು, ರಸ್ತೆಗಿಳಿದರೆ ಜನರು ನಿಮ್ಮನ್ನು ಕ್ಷಮಿಸುವರೇ? ಅಲ್ಲೆಲ್ಲೋ ಬೆಂಕಿ ಬಿದ್ದರೆ, ನಮ್ಮ ನಾಡಿನಲ್ಲಿ ಏಕೆ ಬಾವಿ ತೋಡುತ್ತೀರಿ?" ಎಂದು ಬಿಜೆಪಿ ಪ್ರಶ್ನಿಸಿದೆ.
Recommended Video