ಯಾವ ಕೇಸಿಗೂ ಜಗ್ಗಲ್ಲ, ಬಗ್ಗಲ್ಲಾ: ಸರಕಾರಕ್ಕೆ ಡಿ.ಕೆ.ಶಿವಕುಮಾರ್ ಚಾಲೆಂಜ್
ಬೆಂಗಳೂರು, ಜೂನ್ 29: ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನು ಬದಿಗೊತ್ತಿ, ಮಾಸ್ಕ್ ಹಾಕಿಕೊಳ್ಳುವುದನ್ನು ಮರೆತು, ಇಂಧನ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಾಯಕರು, ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ದ್ವಿಚಕ್ರ ವಾಹನದ ಅಣಕು ಶವಯಾತ್ರೆಯೊಂದಿಗೆ ಕೆಪಿಸಿಸಿ ಕಛೇರಿಯಿಂದ ಆರಂಭವಾದ ಸೈಕಲ್ ಜಾಥಾ ಮೂಲಕ ಸಾಗಿದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಬೆಂಗಳೂರು ಜನತೆಯ ನೆಮ್ಮದಿ ಕಾಂಗ್ರೆಸ್ಗೆ ಬೇಕಿಲ್ಲ!
"ಜಾಥಾ ಮಾಡದಂತೆ ಕಾಂಗ್ರೆಸ್ ಪಕ್ಷಕ್ಕೆ ನೋಟಿಸ್ ಕೂಡಾ ನೀಡಲಾಗಿತ್ತು. ಆದರೂ ಕಾನೂನು ಉಲ್ಲಂಘನೆ ಮಾಡಿ ಸೈಕಲ್ ಜಾಥಾ ನಡೆಸಿದ್ದಾರೆ. ಈ ಸಂಬಂದ ಕಾನೂನು ತಜ್ಞರ ಜೊತೆ ಚರ್ಚಿಸಿ ಕೇಸ್ ದಾಖಲಿಸುತ್ತೇವೆ"ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆಗೆ, ಡಿ.ಕೆ.ಶಿವಕುಮಾರ್ ಖಡಕ್ಕಾಗಿ ಪ್ರತಿಕ್ರಿಯಿಸಿದರು.
"ತೈಲ ಬೆಲೆ ಏರಿಕೆ ವಿರುದ್ದ ನಾವು ಪ್ರತಿಭಟನೆ ನಡೆಸಿದ್ದೇವೆ. ಇದು ಜನಪರ ಹೋರಾಟ. ನಾವು ಯಾವ ಕೇಸಿಗೂ ಬಗ್ಗುವವರಲ್ಲ, ಜಗ್ಗುವವರೂ ಅಲ್ಲ. ಸರಕಾರ ನಮ್ಮ ಮೇಲೆ ಏನು ಬೇಕಾದರೂ ಕೇಸ್ ಹಾಕಿಕೊಳ್ಳಲಿ"ಎಂದು ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿಕೆಶಿ ಸವಾಲು ಎಸೆದರು.
"ಸರಕಾರ ನಮ್ಮ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಶ್ರೀರಾಮುಲು ಮತ್ತು ಕೆ.ಎಸ್.ಈಶ್ವರಪ್ಪ, ಹಲವು ಕಾರ್ಯಕ್ರಮದಲ್ಲಿ ಎಷ್ಟು ಕಾನೂನು ಪಾಲನೆ ಮಾಡಿದ್ದಾರೆ ಎನ್ನುವುದು ನಮಗೂ ಗೊತ್ತಿದೆ"ಎಂದು ಡಿಕೆಶಿ ಹೇಳಿದರು.
"ಬಿಜೆಪಿಯ ಸಚಿವರೇ ಸ್ವಿಮ್ಮಿಂಗ್ ಫೂಲ್ ನಲ್ಲಿದ್ದದ್ದು ಕಾನೂನು ಉಲ್ಲಂಘನೆಯಲ್ಲವೇ"ಎಂದು ಡಾ.ಸುಧಾಕರ್ ಅವರ ಹೆಸರನ್ನು ಉಲ್ಲೇಖಿಸದೇ ಡಿ.ಕೆ.ಶಿವಕುಮಾರ್ ಕಿಡಿಕಾರಿದರು.