'ಡಿಕೆಶಿ ಜೊತೆ ಹೆಜ್ಜೆ ಹಾಕುವಾಗ ಹುಷಾರ್, ಹಾಗೇ ತಿಹಾರ್ ಜೈಲಿಗೆ ಕರೆದೊಯ್ದು ಬಿಟ್ಟಾರು'
ಬೆಂಗಳೂರು, ಜ 7: ಮೇಕೆದಾಟು ಪಾದಯಾತ್ರೆ ವಿಚಾರದಲ್ಲಿ ಆಡಳಿತ ಬಿಜೆಪಿ ಮತ್ತು ವಿರೋಧ ಪಕ್ಷವಾದ ಕಾಂಗ್ರೆಸ್ ನಡುವೆ ಆರೋಪ/ಪ್ರತ್ಯಾರೋಪಗಳು ತಾರಕಕ್ಕೇರಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಗೆ ದಿನಗಣನೆ ಆರಂಭವಾಗಿದೆ.
ಪಾದಯಾತ್ರೆ ಆರಂಭವಾಗುವ ಕನಕಪುರದ ಸಂಗಮದಲ್ಲಿ ಪೂರ್ವತಯಾರಿ ಜೋರಾಗಿ ನಡೆಯುತ್ತಿದೆ. ಖುದ್ದು ಬೆಂಗಳೂರು ಗ್ರಾಮಾಂತರ ಸಂಸದರಾದ ಡಿ.ಕೆ.ಸುರೇಶ್ ಅವರು ಗುರುವಾರ (ಜ 6) ಸಂಗಮದ ಬಳಿ ತೆರಳಿ ಸಿದ್ದತೆಯನ್ನು ಅವಲೋಕಿಸಿ ಬಂದಿದ್ದಾರೆ.
'ಮೇಕೆದಾಟು' ರಾಜಕಾರಣ ಪ್ರತಿಯೊಬ್ಬ ಕನ್ನಡಿಗನಿಗೂ ಸತ್ಯ ಗೊತ್ತಿರಲಿ
ಪಾದಯಾತ್ರೆ ಬೆಂಗಳೂರು ನಗರ ವ್ಯಾಪ್ತಿಗೆ ಬರುವ ತನಕ ಅದರ ಉಸ್ತುವಾರಿಯನ್ನು ಡಿ.ಕೆ.ಸುರೇಶ್ ಇದಾದ ನಂತರ ಡಿ.ಕೆ.ಶಿವಕುಮಾರ್ ನೋಡಿಕೊಳ್ಳಲಿದ್ದಾರೆ. ಭಾನುವಾರ ಬೆಳಗ್ಗೆ 8.30ಕ್ಕೆ ಪಾದಯಾತ್ರೆಗೆ ಚಾಲನೆ ಸಿಗಲಿದೆ. ಮೊದಲ ದಿನ ಹದಿನೈದು ಕಿಲೋಮೀಟರ್ ಪಾದಯಾತ್ರೆ ನಡೆಸಲು ಕೆಪಿಸಿಸಿ ನಿರ್ಧರಿಸಿದೆ.
ಪಾದಯಾತ್ರೆಯ ಬಗ್ಗೆ ಗೃಹ ಸಚಿವರು ನೀಡಿದ ಎಚ್ಚರಿಕೆಗೆ ಪ್ರತಿಕ್ರಿಯೆ ನೀಡಿರುವ ಡಿ.ಕೆ.ಶಿವಕುಮಾರ್, 'ಇನ್ನೊಂದು ಜನ್ಮ ಎತ್ತಿ ಬಂದರೂ ನಮ್ಮ ಪಾದಯಾತ್ರೆ ನಿಲ್ಲಿಸಲು ನಿಮ್ಮಿಂದ ಸಾಧ್ಯವಿಲ್ಲ"ಎಂದು ಸವಾಲು ಎಸೆದಿದ್ದಾರೆ. ಈ ನಡುವೆ, ರಾಜ್ಯ ಬಿಜೆಪಿಯ ಐಟಿ ಶೆಲ್, ಡಿಕೆಶಿ ಜೊತೆ ಹೆಜ್ಜೆ ಹಾಕುವಾಗ ಎಚ್ಚರ ಎಂದು ಸಿದ್ದರಾಮಯ್ಯನವರಿಗೆ ಕಿವಿಮಾತನ್ನು ಹೇಳಿದೆ.
|
ನಿಮ್ಮನ್ನು ಹಾಗೆ ತಿಹಾರ್ ಜೈಲಿನ ಕಡೆಗೆ ಕರೆದೊಯ್ದು ಬಿಟ್ಟಾರು ಜೋಕೆ
ಕಾಂಗ್ರೆಸ್ಸಿನ ಮೇಕೆದಾಟು ಪಾದಯಾತ್ರೆಯ ಬಗ್ಗೆ ವ್ಯಂಗ್ಯವಾಡಿರುವ ಬಿಜೆಪಿಯ ಐಟಿ ಶೆಲ್ ಟ್ವೀಟ್ ಮಾಡಿದ್ದು ಹೀಗೆ, "ಸಿದ್ದರಾಮಯ್ಯನವರೇ, ಡಿಕೆಶಿ ಅವರ ಜತೆ ಹೆಜ್ಜೆ ಹಾಕುವಾಗ ಸ್ವಲ್ಪ ಮುನ್ನೆಚ್ಚರಿಕೆ ವಹಿಸಿ. ಡಿಕೆಶಿ ನಡಿಗೆ ಜೈಲಿನ ಕಡೆಗೆ ಎಂಬ ವಿಚಾರ ನಿಮಗೆ ತಿಳಿಯದ ವಿಚಾರವೇನಲ್ಲ! ನಿಮ್ಮನ್ನು ಹಾಗೆ ತಿಹಾರ್ ಜೈಲಿನ ಕಡೆಗೆ ಕರೆದೊಯ್ದು ಬಿಟ್ಟಾರು ಜೋಕೆ" ಎಂದು ಬಿಜೆಪಿ ಕಾಲೆಳೆದಿದೆ. ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯನವರ ನಡುವಿನ ಶೀತಲ ಸಮರದ ಬಗ್ಗೆ ಬಿಜೆಪಿ ಆಗಾಗ ಕಾಲೆಳೆಯುತ್ತಲೇ ಇದೆ.
ನಿಮಗೆ ಜನತೆಯ ಬಗ್ಗೆ ನಿಜಕ್ಕೂ ಕಾಳಜಿಯಿದೆಯೇ?" ಎಂದು ಬಿಜೆಪಿ ಪ್ರಶ್ನೆ
ಈ ವಿಚಾರದ ಬಗ್ಗೆ ಇನ್ನೊಂದು ಟ್ವೀಟ್ ಮಾಡಿರುವ ಬಿಜೆಪಿಯ ರಾಜ್ಯ ಘಟಕದ ಐಟಿ ಶೆಲ್, "ಕೆಪಿಸಿಸಿ ಅಧ್ಯಕ್ಷ ಪದವಿ ಸ್ವೀಕರಿಸುವ ಸಂದರ್ಭದಲ್ಲೂ @DKShivakumar ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಿ ಪ್ರತಿಜ್ಞಾ ಕಾರ್ಯಕ್ರಮ ನಡೆಸಿದರು. ಈಗ ಕೋವಿಡ್ ನಿಯಂತ್ರಣ ನಿರ್ಬಂಧಗಳ ನಡುವೆಯೂ ಮೇಕೆದಾಟು ಪಾದಯಾತ್ರೆ ಮಾಡಿಯೇ ಸಿದ್ಧ ಎಂದು ತೊಡೆ ತಟ್ಟುತ್ತಿದ್ದಾರೆ. ನಿಮಗೆ ಜನತೆಯ ಬಗ್ಗೆ ನಿಜಕ್ಕೂ ಕಾಳಜಿಯಿದೆಯೇ?" ಎಂದು ಬಿಜೆಪಿ ಪ್ರಶ್ನಿಸಿದೆ.
|
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್
ಮೇಕೆದಾಟು ವಿಚಾರದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್ ಅನ್ನು ಮಾಡಿ, "ಪ್ರಧಾನಿ @narendramodi ಅವರನ್ನು ಭೇಟಿಯಾಗಲು ಮುಖ್ಯಮಂತ್ರಿಗಳು, ಸಚಿವರು ಇಲ್ಲವೇ @BJP4Karnataka ಸಂಸದರಿಗೆ ಅಂಜಿಕೆಯಾಗುವುದಿದ್ದರೆ ಸರ್ವ ಪಕ್ಷಗಳ ನಿಯೋಗದಲ್ಲಿ ನಾವು ಬಂದು ಮೇಕೆದಾಟು ಯೋಜನೆ ಜಾರಿಗಾಗಿ ಅವರನ್ನು ಒತ್ತಾಯಿಸುತ್ತೇವೆ. ಈಗ ಕಾಂಗ್ರೆಸ್ ಪಕ್ಷವನ್ನು ಯಾಕೆ ದೂರುತ್ತೀರಿ? ಕೇಂದ್ರದಲ್ಲಿರುವುದು ಕಾಂಗ್ರೆಸ್ ಪಕ್ಷದ ಸರ್ಕಾರವೇ? ಮನಮೋಹನ್ ಸಿಂಗ್ ಇಲ್ಲವೇ @RahulGandhi ಪ್ರಧಾನಿಯಾಗಿದ್ದಾರೆಯೇ? ಪ್ರಧಾನಿಯಾಗಿರುವವರು @narendramodi ಅವರು. ಅವರನ್ನು ಭೇಟಿಯಾಗಲು ನಿಮಗೇನು ಕಷ್ಟ @BJP4Karnataka?" ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
|
ಖರ್ಗೆಯವರೇ, ಕಾಂಗ್ರೆಸ್ ಹೈಕಮಾಂಡ್ಗೆ ನಿಜಕ್ಕೂ ದಲಿತರ ಮೇಲೆ ಕಾಳಜಿ ಇದೆಯಾ?
ಪ್ರಧಾನಿ ಮೋದಿಗೆ ಪಂಜಾಬ್ ನಲ್ಲಾದ ಭದ್ರತಾ ಲೋಪದ ಬಗ್ಗೆ ಮಲ್ಲಿಕಾರ್ಜುನ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಐಟಿ ಘಟಕ, "ಖರ್ಗೆಯವರೇ, ಕಾಂಗ್ರೆಸ್ ಹೈಕಮಾಂಡ್ಗೆ ನಿಜಕ್ಕೂ ದಲಿತರ ಮೇಲೆ ಕಾಳಜಿ ಇದ್ದಿದ್ದರೆ ಈ ದೇಶದ ಮೊದಲ ದಲಿತ ಮುಖ್ಯಮಂತ್ರಿ ನೀವೇ ಆಗಬೇಕಿತ್ತು. ಆದರೆ ನೀವು ಏನೇ ಆದರೂ ನಕಲಿ ಗಾಂಧಿ ಕುಟುಂಬದ ಮನೆ ಬಾಗಿಲು ಕಾಯುವುದನ್ನು ನಿಲ್ಲಿಸುವುದಿಲ್ಲ ಎಂದರಿತು ಹುದ್ದೆ ದಯಪಾಲಿಸಲಿಲ್ಲ. ಸ್ವಲ್ಪವಾದರೂ ಸ್ವಾಭಿಮಾನ ರೂಢಿಸಿಕೊಳ್ಳಿ"ಎಂದು ಕಿವಿಮಾತನ್ನು ಹೇಳಿದೆ.
Recommended Video