ದಲಿತರು ಸಿಎಂ ಯಾಕಾಗಬಾರದು? ಡಿಕೆಶಿ ಪ್ರಶ್ನೆಗೆ ಬಿಜೆಪಿ ಕೌಂಟರ್
ಬೆಂಗಳೂರು, ಜೂನ್ 27: ಚುನಾವಣೆಯ ಆಸುಪಾಸಿನಲ್ಲಿ ದಲಿತರು ಮುಖ್ಯಮಂತ್ರಿ ಯಾಕಾಗಬಾರದು ಎನ್ನುವ ಪ್ರಶ್ನೆ ಎದ್ದೇಳುವುದು ಹೊಸದೇನಲ್ಲ. ಆದರೆ, ಯಾವುದೇ ಪಕ್ಷಗಳು ಚುನಾವಣೆಗೆ ಮುನ್ನ ಈ ವಿಚಾರದಲ್ಲಿ ಘೋಷಣೆ ಮಾಡುವ ಮನಸ್ಸನ್ನು ಮಾಡುವುದಿಲ್ಲ. ಈಗ, ಮತ್ತೆ ದಲಿತ ಸಿಎಂ ಎನ್ನುವ ವಿಚಾರವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುನ್ನಲೆಗೆ ತಂದಿದ್ದಾರೆ.
ತುಮಕೂರಿನಲ್ಲಿ ಪಕ್ಷದ ನವಸಂಕಲ್ಪ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಡಿ.ಕೆ.ಶಿವಕುಮಾರ್, "ರಾಜ್ಯದಲ್ಲಿ ದಲಿತ ಸಿಎಂ ಕೂಗು ತಪ್ಪೇನಿಲ್ಲ. ಯಾಕೆ ಆಗಬಾರದು, ಪಕ್ಷಕ್ಕೆ ಏನೆಲ್ಲ ಅನುಕೂಲ ಆಗುತ್ತೋ ಅದು ಚರ್ಚೆಯಾಗುತ್ತೆ. ತುಮಕೂರು ಜಿಲ್ಲೆಯನ್ನು ಗೆದ್ದರೆ, ಇಡೀ ರಾಜ್ಯವನ್ನು ಗೆದ್ದಂತೆ ಎನ್ನುವ ಮಾತಿದೆ, ಇಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಶಕ್ತಿ ಮೀರಿ ಶ್ರಮಿಸಬೇಕಿದೆ" ಎಂದು ಹೇಳಿದ್ದರು.
ದಲಿತ ಸಿಎಂ ಕೂಗು ತಪ್ಪೇನಿಲ್ಲ, ಯಾಕೆ ಆಗಬಾರದು?: ಡಿ.ಕೆ.ಶಿವಕುಮಾರ್
ಡಿಕೆಶಿ ಹೇಳಿಕೆಗೆ ಬಿಜೆಪಿಯ ಐಟಿ ಘಟಕ ಪ್ರತಿಕ್ರಿಯೆ ನೀಡಿ, "ಹೌದು, ಡಿಕೆಶಿಯವರೇ ದಲಿತರು ಯಾಕೆ ಮುಖ್ಯಮಂತ್ರಿ ಆಗಬಾರದು? ಆಷಾಢತನ ಬಿಟ್ಟು ದಲಿತರನ್ನು ಮುಖ್ಯಮಂತ್ರಿ ಮಾಡುವ ವಿಚಾರದಲ್ಲಿ ನಿಮ್ಮ ಬದ್ದತೆಯನ್ನು ತೋರಿಸಿ"ಎಂದು ಸವಾಲು ಎಸೆದಿದೆ.
ದಲಿತ ಸಿಎಂ ವಿಚಾರದಲ್ಲಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿಯ ಐಟಿ ಸೆಲ್, ಕೆಂಪೇಗೌಡರ ಜನ್ಮದಿನಾಚರಣೆಯ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಅವರ ಅವಧಿಯಲ್ಲಿನ ಪಠ್ಯಪುಸ್ತಕ ಪರಿಷ್ಕರಣೆಯ ವಿಚಾರದ ಬಗ್ಗೆಯೂ ಟ್ವೀಟ್ ಮಾಡಿದೆ.
ಹೌದು, ಡಿಕೆಶಿಯವರೇ ದಲಿತರು ಯಾಕೆ ಮುಖ್ಯಮಂತ್ರಿ ಆಗಬಾರದು?
"ಹೌದು, ಡಿಕೆಶಿಯವರೇ ದಲಿತರು ಯಾಕೆ ಮುಖ್ಯಮಂತ್ರಿ ಆಗಬಾರದು? ಆದರೆ ಈ ನೀವು ಈ ಪ್ರಶ್ನೆ ಕೇಳಲು ಅರ್ಹರಲ್ಲ, ಏಕೆಂದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮುನ್ನೆಲೆಗೆ ಬಂದ ದಲಿತ ಸಿಎಂ ವಿಚಾರದಲ್ಲಿ ಸರ್ವಾಂಗವನ್ನೂ ಸ್ತಬ್ಧಗೊಳಿಸಿಕೊಂಡಿದ್ದಿರಲ್ಲವೇ?". "ದಲಿತ ಮುಖ್ಯಮಂತ್ರಿ ವಾದ ತೀವ್ರಗೊಂಡಿದ್ದ ಸಂದರ್ಭದಲ್ಲಿ @DKShivakumar ಅವರು ಸೌಜನ್ಯಕ್ಕೂ ಬಾಯಿ ತೆರೆಯಲಿಲ್ಲ. ಸಂಪುಟದಿಂದ ಸಿದ್ದರಾಮಯ್ಯ ನಿಮ್ಮನ್ನು ಕಿತ್ತೊಗೆಯುತ್ತಿದ್ದರು ಎಂಬ ಭಯ ಕಾಡುತ್ತಿತ್ತೇ ಡಿಕೆಶಿ? ಮೂಲ ಕಾಂಗ್ರೆಸ್ಸಿಗರೇ ಎತ್ತಿದ್ದ ಈ ವಾದಕ್ಕೆ ಡಿಕೆಶಿ ಬೆಂಬಲ ನೀಡದೇ ಇದ್ದಿದ್ದೇಕೆ?"ಎಂದು ಬಿಜೆಪಿ ಟ್ವೀಟ್ ಮೂಲಕ ಪ್ರಶ್ನಿಸಿದೆ.
ದಲಿತರು ಮುಖ್ಯಮಂತ್ರಿ ಆದರೆ ತಪ್ಪೇನು ಎಂದು ಅಕಾಲದಲ್ಲಿ ವಾದ
"ದಲಿತರು ಮುಖ್ಯಮಂತ್ರಿ ಆದರೆ ತಪ್ಪೇನು ಎಂದು ಅಕಾಲದಲ್ಲಿ ವಾದ ಮಾಡುವ ಕಾಂಗ್ರೆಸ್ ನಾಯಕರಿಗೆ ಅಧಿಕಾರದಲ್ಲಿ ಇದ್ದಾಗ ದಲಿತರ ಮೇಲಿನ ಕಾಳಜಿ ಮರೆತು ಹೋಗುತ್ತದೆ. ಇದಕ್ಕೆ ಸಿದ್ದರಾಮಯ್ಯನವರೂ ಹೊರತಲ್ಲ, ಡಿಕೆಶಿಯೂ ಅಪವಾದವಲ್ಲ. ಅಧಿಕಾರಕ್ಕಾಗಿ ಓಲೈಕೆ ರಾಗವಷ್ಟೇ!". "ಡಿಕೆಶಿ ಅವರೇ, ನಿಮಗೆ ನಿಜಕ್ಕೂ ದಲಿತರ ಮೇಲೆ ಕಾಳಜಿಯಿದ್ದರೆ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಲಿತರನ್ನೇ ಸಿಎಂ ಮಾಡುತ್ತೇವೆ ಎಂದು ಘೋಷಿಸಿ. ಆಷಾಢಭೂತಿತನದ ಪ್ರದರ್ಶನವೇಕೆ?" ಎಂದು ಟ್ವೀಟ್ ಮಾಡಿದೆ.
ಬೆಂಗಳೂರಿನ ನಿರ್ಮಾರ್ತೃ ಕೆಂಪೇಗೌಡ ಅವರ ಜಯಂತಿ
"ಕೆಪಿಸಿಸಿ ಅಧ್ಯಕ್ಷರು ದಲಿತರನ್ನು ಸಿಎಂ ಮಾಡುವ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು @siddaramaiah? ದಲಿತರನ್ನು ಸಿಎಂ ಮಾಡುವ ಬದ್ಧತೆ ನಿಜಕ್ಕೂ ಕಾಂಗ್ರೆಸ್ ಪಕ್ಷಕ್ಕಿದೆಯೇ?". "ಇಂದು ಬೆಂಗಳೂರಿನ ನಿರ್ಮಾರ್ತೃ ಕೆಂಪೇಗೌಡ ಅವರ ಜಯಂತಿ. ಕಾಂಗ್ರೆಸ್ ಕೆಂಪೇಗೌಡರಿಗೆ ಅವಮಾನ ಮಾಡಿದ್ದು ಸರಿಯೇ? 6 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿದ್ದ ನಾಡಪ್ರಭು ಕೆಂಪೇಗೌಡ ಅವರ ಪಾಠವನ್ನು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತೆಗೆದು ಹಾಕಲಾಯಿತು. ಕೆಂಪೇಗೌಡರಿಗೆ ಕಾಂಗ್ರೆಸ್ ನೀಡುವ ಗೌರವ ಇದೇನಾ?" - ಬಿಜೆಪಿ ಟ್ವೀಟ್.
ನಾಡಪ್ರಭುವಿಗೆ ಮಾಡಿದ ಅವಮಾನವಲ್ಲವೇ?
"ಬೆಂಗಳೂರಿನ ಅಭಿವೃದ್ಧಿಯಲ್ಲಿ ಕೆಂಪೇಗೌಡ ಅವರ ಕೊಡುಗೆಯ ಬಗ್ಗೆ ಇಂದಿನ ಯುವಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಂಪೇಗೌಡರ ಪಠ್ಯವನ್ನು ಸೇರಿಸಿತ್ತು. ಆದರೆ, ಅದೇ ಪಠ್ಯಪುಸ್ತಕವನ್ನು ಕೆಪಿಸಿಸಿ ಅಧ್ಯಕ್ಷ @DKShivakumar ಹರಿದು ಬಿಸಾಡಿದರು. ಇದು ನಾಡಪ್ರಭುವಿಗೆ ಮಾಡಿದ ಅವಮಾನವಲ್ಲವೇ?" ಎಂದು ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದೆ.