ಕೇಂದ್ರ ಬಜೆಟ್: ಮೊದಲು ಪ್ರಧಾನಿ ಮೋದಿ ಕೋವಿಡ್ ಲಸಿಕೆ ಪಡೆಯಲಿ; ಡಿಕೆಶಿ
ಬೆಂಗಳೂರು, ಫೆ. 01: ದೇಶದ ಇತಿಹಾಸದಲ್ಲಿ ಇಂತಹ ನಿರುತ್ಸಾಹದ ಬಜೆಟ್ನ್ನು ನಾನು ನೋಡಿರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದಲ್ಲಿ ತಮ್ಮ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ ಕೇಂದ್ರ ಬಜೆಟ್ 2021ರ ಕುರಿತು ಮಾತನಾಡಿದ್ದಾರೆ.
ಕೇಂದ್ರ ಸರ್ಕಾರ ಬಜೆಟ್ನಲ್ಲಿ ಯಾವ ವರ್ಗಕ್ಕೂ ಸಹಾಯ ಮಾಡಿಲ್ಲ. 36 ಕೋಟಿ ರೂ. ವ್ಯಯಿಸಿ 2 ಕೋಟಿ ಲಸಿಕೆ ತೆಗೆದುಕೊಂಡಿರುವುದಾಗಿ ನಿರ್ಮಲಾ ಸೀತಾರಾಮನ್ ಅವರು ಘೋಷಣೆ ಮಾಡಿದ್ದಾರೆ. ಮೊದಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಸದರು ಕೊರೊನಾ ವೈರಸ್ ಲಸಿಕೆ ಪಡೆಯಬೇಕಾಗಿತ್ತು. ಆದರೆ ಅವರು ಲಸಿಕೆ ಪಡೆಯದೆ ಕೆಳಹಂತದವರನ್ನು ನೂಕಿ ಲಸಿಕೆ ಪಡೆಯುವಂತೆ ಮಾಡಿದ್ದಾರೆ. ಹೀಗಾಗಿ ಎಲ್ಲ ದೃಷ್ಟಿಯಿಂದಲೂ ಜನರ ವಿರುದ್ಧವಾದ ಬಜೆಟ್ ಇದಾಗಿದೆ ಎಂದು ಡಿಕೆಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯುವಕರಿಗೆ ಉದ್ಯೋಗ ಒಡುವ ಬಗ್ಗೆ ಯಾವುದೇ ಯೋಜನೆ ಇಲ್ಲ. ರೈತರ ಹಿತ ರಕ್ಷಣೆಯ ಕಾಯುವ ಕುರಿತು ಒಂದೇ ಒಂದು ಮಾತಿಲ್ಲ. ಬೆಲೆ ನಿಯಂತ್ರಣ, ರಕ್ಷಣೆ ಬಗ್ಗೆ ತಿಳಿಸಿಲ್ಲ. ಸಣ್ಣಪುಟ್ಟ ರಸ್ತೆಗಳನ್ನು ಮಾಡುವ ಬಗ್ಗೆ ಕೇಂದ್ರ ಬಜೆಟ್ನಲ್ಲಿ ಹೇಳಿದ್ದಾರೆ. ಜೊತೆಗೆ ರೈಲುಗಳನ್ನು ಮಾರಾಟಕ್ಕಿಟ್ಟಿದ್ದಾರೆ. ಸಾರ್ವಜನಿಕ ವಲಯದ ಸಂಸ್ಥೆಯನ್ನು ಪ್ರಧಾನಿ ಮೋದಿ ಮಾರಾಟಕ್ಕಿಟ್ಟಿದ್ದಾರೆ ಎಂದು ಕೇಂದ್ರ ಬಜೆಟ್ ಕುರಿತು ಶಿವಕುಮಾರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗುತ್ತಿದೆ. ಇಂಧನದ ಮೇಲೆ ಹೆಚ್ಚೆಚ್ಚು ತೆರಿಗೆಯನ್ನು ಹಾಕಿದ್ದಾರೆ. ಕೊರೊನಾ ಸಂಕಷ್ಟ ಎದುರಿಸಲು 20 ಲಕ್ಷ ಕೋಟಿ ರೂಪಾಯಿ ಘೋಷಣೆ ಮಾಡಿದ್ದರು. ಅದು ಯಾರು ಯಾರಿಗೆ ಸಿಕ್ಕಿದೆಯೋ ಗೊತ್ತಿಲ್ಲ. ಸಾಮಾನ್ಯ ಜನರ ಮೇಲೆಯೂ ದೊಡ್ಡ ಬಾರ ಹಾಕಿದ್ದಾರೆ. ಈ ಬಜೆಟ್ ಯಾರಿಗೂ ಯಾವ ಉತ್ಸಾಹವನ್ನು ಕೊಟ್ಟಿಲ್ಲ. ನಿರುದ್ಯೋಗ, ಕಳ್ಳತನ ಹೆಚ್ಚಳಕ್ಕೆ ಬಜೆಟ್ ಮೂಲಕ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.