ಮುಖ್ಯಮಂತ್ರಿ ಯಡಿಯೂರಪ್ಪ ತಮಗೆ ತಾವೇ ಪ್ರಮಾಣ ಪತ್ರ ಕೊಟ್ಟುಕೊಳ್ಳುತ್ತಿರುವುದೇಕೆ?
ಬೆಂಗಳೂರು, ಜ. 02: ಸಿಎಂ ಆದವರು ನಾನೇ ಇನ್ನು 2 ವರ್ಷ ಅಧಿಕಾರದಲ್ಲಿರುತ್ತೇನೆ ಎಂದು ಹೇಳುವ ಅಗತ್ಯವೇನಿದೆ. ಅವರ ಅಧಿಕಾರದ ಬಗ್ಗೆ ನಾವು ಪ್ರಶ್ನಿಸಿದ್ದೇವಾ? ಹಾಗಿದ್ದರೂ ಈ ಬಗ್ಗೆ ಸ್ಪಷ್ಟತೆ ನೀಡುವ ಅಗತ್ಯ ಏನಿದೆ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಶ್ನೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಬಿಜೆಪಿ ಶಾಸಕರೇ ಬೇರೆ ನಾಯಕತ್ವದ ಬಗ್ಗೆ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮಗೆ ತಾವೇ ಪ್ರಮಾಣ ಪತ್ರ ಕೊಟ್ಟುಕೊಳ್ಳುವ ಸ್ಥಿತಿ ಎದುರಾಗಿದೆ ಎಂದರೆ, ಎಲ್ಲೋ ಏನೋ ಯಡವಟ್ಟಾಗಿದೆ, ಅಪಾಯ ಎದುರಾಗಿದೆ ಎಂಬ ಅನುಮಾನ ಮೂಡುತ್ತದೆ ಎಂದಿದ್ದಾರೆ.
ಮತ್ತೆ ಮತ್ತೆ ನಾಯಕತ್ವ ಬದಲಾವಣೆ ಕುರಿತು ಬಜೆಪಿಯಲ್ಲಿ ಹೇಳಿಕೆ-ಪ್ರತಿ ಹೇಳಿಕೆಗಳು ವಿನಿಮಯವಾಗುತ್ತಿವೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ರಾಜ್ಯಕ್ಕೆ ಆಗಮಿಸಿರುವ ಸಂದರ್ಭದಲ್ಲಿ ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರು ಮುಖ್ಯಮಂತ್ರಿ ಬದಲಾವಣೆ ಕುರಿತು ಮಾತನಾಡಿದ್ದಾರೆ. ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಕುತೂಹಲ ಮೂಡಿಸಿದೆ.
ಸರ್ಕಾರಕ್ಕೆ ಕನಿಷ್ಠ ಪರಿಜ್ಞಾನ ಇಲ್ಲ
ಇಂಗ್ಲೆಂಡ್ನಿಂದ ಬಂದವರಿಗೆ ರಾಜ್ಯದಲ್ಲಿ ವಿಳಾಸವಿದೆ. ವಿಮಾನ ನಿಲ್ದಾಣದಲ್ಲೇ ಅವರ ಪರೀಕ್ಷೆ ನಡೆಸಲು ಇವರಿಗೆ ಇದ್ದ ಕಷ್ಟವಾದರೂ ಏನು? ಆಡಳಿತದ ವಿಚಾರದಲ್ಲಿ ಈ ಸರ್ಕಾರ ಎಷ್ಟು ವಿಫಲವಾಗಿದೆ ಎಂಬುದಕ್ಕೆ ಇದೇ ಸಾಕ್ಷಿ. ದೇಶದಲ್ಲಿ ಕೊರೋನಾ ಸೋಂಕು ಹರಡಿಸಿದ್ದೇ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು.
ಆರಂಭದಲ್ಲೇ ಇದನ್ನು ನಿಯಂತ್ರಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ನಮ್ಮ ರಾಜ್ಯದಿಂದ ಯಾರೂ ಕೂಡ ಹೊರಗಿನವರಿಗೆ ಸೋಂಕು ಹರಡಿಸಿಲ್ಲ. ಬೇರೆ ಭಾಗದಿಂದ ಬಂದವರಿಂದಲೇ ಸೋಂಕು ಹರಡಿದೆ. ಅವರನ್ನು ಮೊದಲೇ ಪರೀಕ್ಷಿಸಿ ನಿಯಂತ್ರಣ ಮಾಡಬೇಕಿತ್ತು ಎಂದು ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ
ಸಮಾಧಾನ ತಂದ ಫಲಿತಾಂಶ
ಗ್ರಾಮ ಪಂಚಾಯಿತಿ ಫಲಿತಾಂಶದಿಂದ ನಮಗೆ ಸಮಾಧಾನವಾಗಿದೆ. ಈ ಚುನಾವಣೆಯಲ್ಲಿ ಎಷ್ಟೇ ಹಣದ ದುರುಪಯೋಗವಾಗಿದ್ದರೂ, ಬೇರೆ ಒತ್ತಡವಿದ್ದರೂ ನಮ್ಮ ಪಕ್ಷದ ಕಾರ್ಯಕರ್ತರು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದು ಪಕ್ಷಾತೀತ ಚುನಾವಣೆಯಾದರೂ ಪಂಚಾಯ್ತಿಯಿಂದ ಸಂಸತ್ತಿನವರೆಗಿನ ಪಕ್ಷ ರಾಜಕಾರಣವನ್ನು ತಪ್ಪಿಸಲು ಯಾರಿಗೂ ಸಾಧ್ಯವಿಲ್ಲ. ಹೀಗಾಗಿ ಈ ಫಲಿತಾಂಶದಿಂದ ನಮಗೆ ಸಮಾಧಾನವಿದೆ. ಅಧಿಕಾರವಿದೆ ಎಂದು ಕೆಲವರು ನಮ್ಮವರನ್ನು ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ. ವಿರೋಧ ಪಕ್ಷದಲ್ಲಿದ್ದರೂ ನಮಗೆ ಉತ್ತಮ ಫಲಿತಾಂಶ ಸಿಕ್ಕಿದೆ. ಹಳ್ಳಿ ಜನ ಆಪರೇಷನ್ ರಾಜಕಾರಣದ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಎಂದು ಡಿಕೆಶಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ಯಾದ್ಯಂತ ಪ್ರವಾಸ
ಈ ತಿಂಗಳ ಜನವರಿ 5 ರಿಂದ 18ರವರೆಗೂ ರಾಜ್ಯ ಪ್ರವಾಸದಲ್ಲಿರುತ್ತೇನೆ. ಬ್ಲಾಕ್ ಅಧ್ಯಕ್ಷರನ್ನು ಭೇಟಿ ಮಾಡಿ ಅವರ ಧ್ವನಿಯನ್ನು ಆಲಿಸಲು ನಿರ್ಧರಿಸಿದ್ದೇನೆ. 2021ರ ವರ್ಷ ನಮ್ಮ ಪಕ್ಷಕ್ಕೆ ಸಂಘಟನೆಯ ವರ್ಷ. ಸ್ಥಳೀಯವಾಗಿ ಏನೇನು ಸಮಸ್ಯೆ ಇದೆ ಎಂದು ಗಮನದಲ್ಲಿಟ್ಟುಕೊಂಡು ನಾವು ಹೋರಾಟ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ತಮ್ಮ ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಶಾಲೆ ಆರಂಭವಾಗಬೇಕು
ಇನ್ನು ಶಾಲಾ-ಕಾಲೇಜುಗಳ ಆರಂಭದ ಕುರಿತು ಡಿಕೆಶಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಶಾಲೆ ಮುಚ್ಚಬೇಕು ಎಂದು ನಾನು ಹೇಳುವುದಿಲ್ಲ. ಶಾಲೆ ತೆರೆಯಬೇಕು. ಕೋವಿಡ್ ನಿಯಮ ಪಾಲಿಸಲಿ. ಮಕ್ಕಳಿಗೆ ವಿದ್ಯಾಭ್ಯಾಸ ಅಂತರವಿದ್ದರೆ ಕಲಿಕೆ ಗುಣಮಟ್ಟ ಕುಗ್ಗುತ್ತದೆ. ಶಿಕ್ಷಣ ಮೂಲಭೂತ ಅಗತ್ಯ ಆಗಿರುವುದರಿಂದ ಸರ್ಕಾರ ಶಾಲೆ ಆರಂಭಿಸಿದರೆ ನಾವು ಅದನ್ನು ವಿರೋಧಿಸುವುದಿಲ್ಲ ಎಂದು ಶಾಲೆ ಆರಂಭಿಸಲು ತಮ್ಮ ಬೆಂಬಲ ಕೊಟ್ಟಿದ್ದಾರೆ.
Recommended Video