ಸಂವಿಧಾನದಲ್ಲಿ ಏನಿದೆ ಅಂತಾ ಮೊದಲು ಸಚಿವ ಕೆ.ಎಸ್. ಈಶ್ವರಪ್ಪ ಓದಲಿ !
ಬೆಂಗಳೂರು, ನ. 30: ಬೆಳಗಾವಿ ಲೋಕಸಭೆ ಉಪ ಚುನಾವಣೆಗೆ ನಾವು ಮುಸಲ್ಮಾನರಿಗೆ ಟಿಕೆಟ್ ನೀಡುವುದಿಲ್ಲ ಎಂದಿರುವ ಕೆ.ಎಸ್. ಈಶ್ವರಪ್ಪ ಅವರು, ಸಂವಿಧಾನ ಓದಬೇಕು. ಅದರಲ್ಲಿರುವ ಆಶಯ ಏನು ಎಂದು ತಿಳಿದುಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಲಹೆ ನೀಡಿದ್ದಾರೆ.
ಬೆಂಗಳೂರು ಹೊರ ವಲಯದಲ್ಲಿ ನಡೆದ ಕಾಂಗ್ರೆಸ್ ಹಿರಿಯ ನಾಯಕರ ಸಭೆಯಲ್ಲಿ ಭಾಗವಹಿಸಿದ ನಂತರ ಮಾಧ್ಯಮ ಪ್ರತಿನಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಸಿದ್ಧಾಂತವೇ ಅದು. ಅವರಿಗೆ ಸಂವಿಧಾನದ ಬಗ್ಗೆ ಗೊತ್ತಿಲ್ಲ. ಅದರ ಬಗ್ಗೆ ಗೌರವವೂ ಇಲ್ಲ. ಅವರು ಸಂವಿಧಾನ ಸುಡಬೇಕು ಅಂತಲೇ ಕಾಯುತ್ತಿದ್ದಾರೆ. ಈಶ್ವರಪ್ಪ ಅವರಿಂದ ಸಂವಿಧಾನವನ್ನು ಓದಿಸಿ. ಅವರಿಗೆ ಅದರ ಆಶಯಗಳು ಅರ್ಥವಾಗಲಿ. ಬಿಜೆಪಿಯವರು ತಮ್ಮ ಪಕ್ಷದಲ್ಲಿರುವ ಅಲ್ಪಸಂಖ್ಯಾತರ ಘಟಕವನ್ನು ವಿಸರ್ಜಿಸುವುದು ಉತ್ತಮ ಎಂದು ಟೀಕಿಸಿದರು.
ಜನರಿಗೆ ಅಧಿಕಾರ ಕೊಡಬೇಕು
ಗ್ರಾಮ ಪಂಚಾಯ್ತಿ ಚುನಾವಣೆ ನಡೆಯಬೇಕು ಎಂದು ನಾವು ನ್ಯಾಯಾಲಯದ ಮೆಟ್ಟಿಲೇರಿದ್ದೆವು. ನಮ್ಮ ನಿರೀಕ್ಷೆಯಂತೆ ಈಗ ಚುನಾವಣೆ ಘೋಷಣೆಯಾಗಿದೆ. ಜನರಿಗೆ ಅಧಿಕಾರ ಸಿಗಬೇಕು ಎಂಬುದು ನಮ್ಮ ಉದ್ದೇಶ. ಇದು ಪಕ್ಷಾತೀತವಾಗಿ ನಡೆಯುವ ಚುನಾವಣೆ ಇದು. ಈ ಚುನಾವಣೆ ನಡೆಯಬೇಕು ಎಂಬುದು ನಮ್ಮ ಚಿಂತನೆ. ಬೆಂಗಳೂರು ಪಾಲಿಕೆ ಚುನಾವಣೆಯೂ ನಡೆಯಬೇಕು ಎಂಬುದು ನಮ್ಮ ಬಯಕೆ.
ಮುಸ್ಲಿಮರಿಗೆ ಬಿಜೆಪಿ ಟಿಕೆಟ್ ನೀಡಲ್ಲ: ಸಚಿವ ಕೆಎಸ್ ಈಶ್ವರಪ್ಪ
ಈಗಾಗಲೇ ಅವರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ನಡೆದಿವೆ. ಹೀಗಾಗಿ ಗ್ರಾಮ ಪಂಚಾಯ್ತಿ ಚುನಾವಣೆ ನಡೆಸುವುದರಲ್ಲಿ ಅಭ್ಯಂತರವಿಲ್ಲ. ಕೋವಿಡ್ ನಿಯಮ ಪಾಲನೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರ ಹಾಗೂ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಡಿಕೆ ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.
ಸಮೂಹ ನಾಯಕತ್ವ
ರಾಜ್ಯದ ಸಮಸ್ಯೆ ಹಾಗೂ ಸರ್ಕಾರದ ಕೆಲವು ನಿರ್ಣಯಗಳನ್ನು ನಾವು ಗಮನಿಸಿದ್ದೇವೆ. ಈ ವಿಚಾರವಾಗಿ ನಾನೊಬ್ಬ ತೀರ್ಮಾನ ಮಾಡುವುದಿಲ್ಲ. ಎಲ್ಲ ಅಭಿಪ್ರಾಯ ಪಡೆದು ತೀರ್ಮಾನ ತೆಗೆದುಕೊಳ್ಳಲಾಗುವುದು. ನಾನು ಸಾಮೂಹಿಕ ನಾಯಕತ್ವದ ಮೇಲೆ ನಂಬಿಕೆ ಇಟ್ಟಿದ್ದು, ಇಂದು ಹಿರಿಯ ನಾಯಕರೆಲ್ಲ ಸೇರಿ ಚರ್ಚಿಸಿ, ಅವರ ಸಲಹೆ ಪಡೆಯುತ್ತೇನೆ.
ತನಿಖೆ ಆದಲ್ಲಿ ಸತ್ಯಾಂಶ ಹೊರಗೆ
ಸಂತೋಷ್ ಅವರು ಈಗ ಯಾವ ಹೇಳಿಕೆ ಬೇಕಾದರೂ ನೀಡಲಿ. ತಮ್ಮ ಆಂತರಿಕ ವಿಚಾರ ಮುಚ್ಚಿಕೊಳ್ಳಲು ಏನಾದರೂ ಹೇಳಲಿ. ರಾಜಕೀಯ ಕಾರಣಕ್ಕಾಗಿ ಅವರಿಂದ ಈ ಹೇಳಿಕೆ ಕೊಡಿಸಲಾಗಿದೆ. ಸಂತೋಷ ಅವರು ಯಾಕೆ ಆತ್ಮಹತ್ಯೆ ಯತ್ನ ಮಾಡಿದ್ದಾರೆ ಎಂಬುದರ ಬಗ್ಗೆಯೇ ಅವರ ಧರ್ಮಪತ್ನಿ ಶಂಕೆ ವ್ಯಕ್ತಪಡಿಸಿದ್ದಾರೆ. ಈ ವಿಚಾರಕ್ಕಾದರೂ ತನಿಖೆ ನಡೆಯಬೇಕೋ ಬೇಡವೋ? ಅವರು ಯಾವುದೋ ಸಾಮಾನ್ಯ ಹುದ್ದೆಯಲ್ಲಿ ಇರುವವರಲ್ಲ, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಹುದ್ದೆಯಲ್ಲಿದ್ದಾರೆ. ಹೀಗಾಗಿ ಇವರ ಆತ್ಮಹತ್ಯೆ ಯತ್ನ ತನಿಖೆ ಆಗಬೇಕು.'
ಸಿದ್ಧಾಂತದಲ್ಲಿ ರಾಜಿ ಇಲ್ಲ
ಚುನಾವಣೆಗಳ ಗೆಲುವು, ಸೋಲಿನ ಫಲಿತಾಂಶದ ಬಗ್ಗೆ ನಾವು ಆತಂಕ ಪಡುವುದಿಲ್ಲ. ಉಪಚುನಾವಣೆಗಳೇ ಬೇರೆ, ಪ್ರಮುಖ ಚುನಾವಣೆಗಳೇ ಬೇರೆ. ನಾವು ಭವಿಷ್ಯದಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ. ಉಪ ಚುನಾವಣೆ ಫಲಿತಾಂಶದಿಂದ ನಾವು ನಮ್ಮ ಪಕ್ಷದ ಸಿದ್ಧಾಂತದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ನಮಗೆ ನಮ್ಮ ಸಿದ್ಧಾಂತಗಳೇ ಮುಖ್ಯ. ಬಿಜೆಪಿಯ ಆಂತರಿಕ ವಿಚಾರವಾಗಿ ನಾವು ಮಾತನಾಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.