ನನ್ನ ಫೋನ್ ಕದ್ದಾಲಿಕೆ ಆಗುತ್ತಿದೆ: ಕೆಪಿಸಿಸಿ ಅಧ್ಯಕ್ಷ ಡಿಕೆಶಿ
ಬೆಂಗಳೂರು, ಆ. 21: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮತ್ತೆ ಫೋನ್ ಟ್ಯಾಪಿಂಗ್ ಆರೋಪ ಮಾಡಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿ ಮಾತನಾಡಿರುವ ಅವರು, ನನ್ನ ಫೋನ್ ಟ್ಯಾಪಿಂಗ್ ಆಗುತ್ತಿದೆ. ಇಲ್ಲಿಯವರೆಗೆ ಚೆನ್ನಾಗಿತ್ತು, ಇವತ್ತು ಬೆಳಗ್ಗೆಯಿಂದ ಸರಿಯಾಗಿ ಬರುತ್ತಿಲ್ಲ. ಈ ಬಗ್ಗೆ ಇವತ್ತು ಬಗ್ಗೆ ದೂರು ಕೊಡುತ್ತೇನೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಹಿಂದೆಯೂ ಕೂಡ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ತಮ್ಮ ಟೆಲಿಫೋನ್ ಟ್ಯಾಪ್ ಆಗುತ್ತಿವೆ ಎಂದು ಆರೋಪಿಸಿದ್ದರು.
Recommended Video
ನಮ್ಮ ಸುದರ್ಶನ್ 25 ಬಾರಿ ಕರೆ ಮಾಡಿದ್ದಾರೆ ಆದರೆ ಕರೆ ಬರುತ್ತಿಲ್ಲ. ಪಾಪ ಏನೇನು ಬೇಕೊ ಅದನ್ನು ಅವರು ಮಾಡಿಕೊಳ್ಳಲಿ ಎಂದು ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ. ಆದರೆ ನನ್ನ ಫೋನ್ ಟ್ಯಾಪಿಂಗ್ ಆಗ್ತಿರೋದು ನೂರಕ್ಕೆ ನೂರು ಸತ್ಯ. ಹಿಂದೆಯೂ ಆಗುತ್ತಿತ್ತು, ಈಗ ಮತ್ತೆ ಆಗಿದೆ ಎಂದು ಫೋನ್ ಟ್ಯಾಪಿಂಗ್ ಬಗ್ಗೆ ಡಿಕೆಶಿ ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ಗೆ ಕುಮಾರಸ್ವಾಮಿ ಬಹಿರಂಗ ಪತ್ರ
ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪವನ್ನು ಕಂದಾಯ ಸಚಿವ ಆರ್. ಅಶೋಕ್ ತಳ್ಳಿ ಹಾಕಿದ್ದಾರೆ. ಫೋನ್ ಟ್ಯಾಪಿಂಗ್ ಹಗರಣದಲ್ಲಿ ಸಿಕ್ಕಿಹಾಕಿಕೊಂಡವರೇ ಆರೋಪ ಮಾಡಿದ್ದಾರೆ. ಇದು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ ಎಂದಿದ್ದಾರೆ. ಆ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
ಪ್ರಕರಣ ಮುಚ್ಚಿಹಾಕುವ ಪ್ರಯತ್ನ
ಮೈಸೂರು ಜಿಲ್ಲೆ ನಂಜನಗೂಡು ಆರೋಗ್ಯ ಅಧಿಕಾರಿ ಡಾ. ನಾಗೇಂದ್ರ ಆತ್ಮಹತ್ಯೆ ಪ್ರಕರಣದ ಬಗ್ಗೆಯೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ತಮ್ಮ ಪ್ರಾಣ ಒತ್ತೆಯಿಟ್ಟು ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆಗೆ ಎಷ್ಟು ಗೌರವ ಕೊಟ್ಟರೂ ಸಾಲದು. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿದ್ದಾರೆ.
ನಾನು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ಕೊಟ್ಟಾಗ ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದರು. ಇಂದು ಪತಿಯನ್ನ ಕಳೆದುಕೊಂಡ ಹೆಣ್ಣುಮಗಳು ತಮ್ಮ ಧ್ವನಿ ಎತ್ತಿದ್ದಾರೆ. ತಪ್ಪಿತಸ್ಥರನ್ನು ಬಂಧನ ಮಾಡುವುದಕ್ಕೆ ಎಷ್ಟು ದಿನ ಬೇಕು? ವೈದ್ಯಕೀಯ ಶಿಕ್ಷಣ ಸಚಿವರು ಅಲ್ಲಿ ಹೋಗಿ ನಿಂತರೇ ಸಾಕಾ? ಸರ್ಕಾರ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನವನ್ನು ಯಾಕೆ ಮಾಡುತ್ತಿದೆ?
ಕಳೆದ ಆರು ತಿಂಗಳುಗಳಿಂದ ಡಾ. ನಾಗೇಂದ್ರ ಅವರಿಗೆ ಕಿರುಕುಳ ಕೊಡಲಾಗಿದೆ. ಅವರಿಗೆ ಸರಿಯಾಗಿ ಕೆಲಸ ಮಾಡಲೂ ಅವಕಾಶ ಕೊಟ್ಟಿಲ್ಲ. ಅವರು ಆತ್ಮಹತ್ಯೆ ಮಾಡಿಕೊಳ್ಳೋಕೆ ದಾರಿ ಮಾಡಿಕೊಟ್ಟಿದ್ದಾರೆ. ಬೇರೆ ಪ್ರಕರಣವಾದರೆ ಸುಮೋಟೋ ಕೇಸ್ ಹಾಕಿಕೊಳ್ಳುತ್ತಾರೆ. ಆದರೆ ಈ ಪ್ರಕರಣದಲ್ಲಿ ಯಾಕೇ ಸರ್ಕಾರ ಹಿಂದೇಟು ಹಾಕುತ್ತಿದೆ? ಇದೆಲ್ಲವನ್ನೂ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ ಎಂದಿದ್ದಾರೆ.
ಭೂತದ ಬಾಯಲ್ಲಿ...
ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಆರೋಪಕ್ಕೆ ಕಂದಾಯ ಸಚಿವ ಆರ್. ಅಶೋಕ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಹಿಂದೆ ಅವರ ಸರ್ಕಾರ ಇದ್ದಾಗ ಫೋನ್ ಟ್ಯಾಪ್ ಆಗಿದ್ದು ಗೊತ್ತಿದೆ. ಹಿಂದಿನ ಸರ್ಕಾರದ ಫೋನ್ ಟ್ಯಾಪಿಂಗ್ ತನಿಖೆ ಒಂದು ಹಂತಕ್ಕೆ ಬಂದಿದೆ. ಯಾರಿಗೆ ಫೋನ್ ಟ್ಯಾಪ್ ಮಾಡಿ ಅನುಭವ ಇದೆಯೋ, ಯಾವ ಸರ್ಕಾರ ಹಿಂದೆ ಫೋನ್ ಟ್ಯಾಪ್ ಮಾಡಿತ್ತೋ ಅವರೇ ಈಗ ಟ್ಯಾಪಿಂಗ್ ಆರೋಪ ಮಾಡುತ್ತಿರುವುದು ಆಶ್ಚರ್ಯ ತಂದಿದೆ.
ಇದೊಂಥರಾ ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಆ ತರಹ ಸಂಸ್ಕೃತಿಯಿಂದ ಬಂದವರಲ್ಲ. ಇದೆಲ್ಲ ಏನಾದರೂ ಇದ್ದರೆ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ. ಫೋನ್ ಟ್ಯಾಪ್ ಮಾಡುವ ಅಭ್ಯಾಸ, ಅವಶ್ಯಕತೆ ನಮ್ಮ ಸರ್ಕಾರಕ್ಕಿಲ್ಲ. ನಮ್ಮ ಸರ್ಕಾರ ಸುಭದ್ರವಾಗಿದೆ, ಅವರದೇ ಪಕ್ಷದಲ್ಲಿ ಅಭದ್ರತೆ ಇದೆ ಎಂದಿದ್ದಾರೆ.
ಬೆಂಕಿ ಹಚ್ಚಿದವರು ಧರ್ಮಾತ್ಮರಾ?
ಇನ್ನು ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರ ಮೇಲೆ ಕಾಂಗ್ರೆಸ್ ನಾಯಕರು ಮಾಡಿರುವ ಆರೋಪಕ್ಕೆ ಅಶೊಕ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಯಾರು ಅಪರಾಧ ಮಾಡಿದ್ದರೋ ಅವರನ್ನು ಹೆಡೆಮುರಿ ಕಟ್ಟೋದಕ್ಕೆ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಸ್ಟೇಷನ್ಗೆ ಬೆಂಕಿ ಹಚ್ಚಿದವರೆಲ್ಲ ಧರ್ಮಾತ್ಮರಾ? ಈ ತರದ ಕಾಂಗ್ರೆಸ್ ಸಂಸ್ಕೃತಿ ಬಿಟ್ಟುಬಿಡಿ. ದಬ್ಬಾಳಿಕೆ ದೌರ್ಜನ್ಯ ಪರಂಪರೆಯನ್ನು ಡಿ.ಕೆ. ಶಿವಕುಮಾರ್ ಅವರು ಬಿಟ್ಟುಬಿಡಲಿ. ಅಧಿಕಾರಿಗಳ ಮೇಲೆ ಒತ್ತಡ ಹಾಕಿ ದೊಂಬಿ ಮಾಡಿದವರನ್ನು ರಕ್ಷಿಸುವ ಪ್ರಯತ್ನ ಮಾಡಬೇಡಿ ಎಂದಿದ್ದಾರೆ.
ಡಿಕೆಶಿಗೆ ಉತ್ತರ ಕೊಟ್ಟಿದ್ದೇನೆ
ಇನ್ನು ಇದೇ ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಮಾತನಾಡಿದ್ದಾರೆ. ಈಗಾಗಲೇ ಡಿಕೆಶಿ ಅವರಿಗೆ ಉತ್ತರ ಕೊಟ್ಟಿದ್ದೇನೆ. 60ಕ್ಕೂ ಹೆಚ್ಚು ದೂರುಗಳು ಸಲ್ಲಿಕೆಯಾಗಿವೆ.
ತನಿಖೆ ನಡೆಯುವ ಸಂದರ್ಭದಲ್ಲಿ ಯಾವುದೇ ರೀತಿ ಪ್ರಭಾವ ಬೀರುವುದು ಸರಿಯಲ್ಲ. ಯಾರೂ ಕೂಡ ತನಿಖೆ ಮಧ್ಯೆ ಪ್ರಭಾವ ಬೀರಿಲ್ಲ. ತನಿಖೆ ಪ್ರಗತಿಯಲ್ಲಿರುವಾಗ ಕೂಡ ಶಾಂತಿ ಸಹನೆ ಕಳೆದುಕೊಳ್ಳಬಾರದು. ನಮ್ಮ ಪೊಲೀಸರು ದಕ್ಷರಾಗಿದ್ದಾರೆ. ಸರ್ಕಾರ ಯಾವುದೇ ಇರಲಿ, ಏನಾದರೂ ಇರಲಿ. ನಿಷ್ಟುರವಾಗಿ, ನಿಷ್ಪಕ್ಷಪಾತ ವಾಗಿ ನಮ್ಮ ಪೊಲೀಸರು ಕೆಲಸ ಮಾಡುತ್ತಾರೆ. ಯಾರ ಪ್ರಭಾವಕ್ಕೂ ಅವರು ಒಳಗಾಗುವುದಿಲ್ಲ. ಹಾಗೆಯೇ ಅಮಾಯಕರಿಗೂ ಕೂಡ ಶಿಕ್ಷೆ ಆಗದಂತೆ ನೋಡಿಕೊಳ್ತೇವೆ ಎಂದಿದ್ದಾರೆ.