ಸಾಲ ಪಡೆದು ಸರಕಾರಕ್ಕೆ ಟೋಪಿ ಹಾಕಿ : ಪರಮೇಶ್ವರ್ ಸ್ಪಷ್ಟನೆ
ಬಾಗಲಕೋಟೆ, ಅ 7: ಸಾಲ ತೆಗೆದುಕೊಂಡು ಸರಕಾರಕ್ಕೆ ಟೋಪಿ ಹಾಕಿ ಅನ್ನೋ ಅರ್ಥದಲ್ಲಿ ನಾನು ಮಾತಾಡಿಲ್ಲ, ಅಲ್ಪ ಸಮುದಾಯದವರೂ ಮುಖ್ಯ ವಾಹಿನಿಯಲ್ಲಿ ಬರ ಬೇಕೆನ್ನುವ ಅರ್ಥದಲ್ಲಿ ನಾನು ಹೇಳಿಕೆ ನೀಡಿದ್ದು. ನನ್ನ ಹೇಳಿಕೆಯನ್ನು ಅಪಾರ್ಥ ಮಾಡಿಕೂಳ್ಳ ಬೇಕಾಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್ ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ಕಾರ್ಯ ವೈಖರಿ ನನಗೆ ವೈಯಕ್ತಿಕವಾಗಿ ತೃಪ್ತಿ ತಂದಿದೆ. ನಮ್ಮ ನಡುವೆ ಏನೂ ಭಿನ್ನಾಭಿಪ್ರಾಯವಿಲ್ಲ. ರಾಜ್ಯದೆಲ್ಲಡೆ ಗುಂಡಿ ಬಿದ್ದ ರಸ್ತೆ ರಿಪೇರಿಗೆ ಹಣ ಮಂಜೂರಾಗುತ್ತಿದೆ.
ಭಾರತ ಜಾತ್ಯಾತೀತ ದೇಶ, ಇಲ್ಲಿ ಎಲ್ಲರಿಗೂ ಸಮನಾಗಿ ಬದುಕುವ ಅವಕಾಶವಿದೆ. ಅಲ್ಪಸಂಖ್ಯಾತ ಸಮುದಾಯದವರೂ ಸಾಲ ಪಡೆದು ದೊಡ್ಡ ಕೈಗಾರಿಕೆಗಳನ್ನು ನಡೆಸಲಿ. ಅವರೂ ಆರ್ಥಿಕವಾಗಿ ಸಭಲರಾಗಲಿ ಎನ್ನುವ ಹೇಳಿಕೆ ನೀಡಿದ್ದೇನೆಯೇ ಹೊರತು ಸರಕಾರಕ್ಕೆ ಟೋಪಿ ಹಾಕಿ ಎಂದು ನಾನು ಹೇಳಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷರು ಸ್ಪಷ್ಟನೆ ನೀಡಿದ್ದಾರೆ.
ಬಾಗಲಕೋಟೆಯಲ್ಲಿ ಖಾಸಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಪರಮೇಶ್ವರ್, ನನಗೆ ಮೂಢನಂಬಿಕೆಯಲ್ಲಿ ವಿಶ್ವಾಸವಿಲ್ಲ. ಸಿದ್ದರಾಮಯ್ಯನವರು ಚಾಮರಾಜನಗರಕ್ಕೆ ಭೇಟಿ ನೀಡುತ್ತಿರುವುದನ್ನು ಸ್ವಾಗತಿಸುತ್ತೇನೆ ಎಂದಿದ್ದಾರೆ.
ಡಾ. ಪರಮೇಶ್ವರ್ ಮೊನ್ನೆ ಹೇಳಿದ್ದೇನು? ಮುಂದೆ ಓದಿ..
ಅಲ್ಪಸಂಖ್ಯಾತರ ಕಾರ್ಯಾಗಾರ
ಬೆಂಗಳೂರಿನಲ್ಲಿ ನಡೆದ ಅಲ್ಪಸಂಖ್ಯಾತರ ಕಾರ್ಯಾಗಾರದಲ್ಲಿ ಪರಮೇಶ್ವರ್, ಮುಸ್ಲಿಂ ನಿರ್ದೋಷಿ ಯುವಕರಿಗೆ ಸುಮ್ಮನೆ ಜೈಲು ಶಿಕ್ಷೆಯಾಗಬಾರದು. ಅಲ್ಪಸಂಖ್ಯಾತರ ಏಳಿಗೆಯನ್ನು ಸಹಿಸದ ಬಿಜೆಪಿ, ಅಮಾಯಕ ಮುಸ್ಲಿಮರ ವಿರುದ್ದ ಕೇಸು ದಾಖಲಿಸಿದೆ.
ತ್ವರಿತ ನ್ಯಾಯಾಲಯ
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಮಾಯಕ ಮುಸ್ಲಿಂರ ವಿರುದ್ದ ದಾಖಲಾಗಿರುವ ಪ್ರಕರಣದ ಇತ್ಯರ್ಥಕ್ಕೆ ತ್ವರಿತ ನ್ಯಾಯಾಲಯ ಸ್ಥಾಪಿಸಿ, ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಲಾಗುವುದು ಎಂದು ಹೇಳಿದ್ದೆವು. ಅದರಂತೆ ನಡೆದುಕೊಳ್ಳಲು ಸಿಎಂ ಜೊತೆ ನಾನೇ ಖುದ್ದಾಗಿ ಮಾತುಕತೆ ನಡೆಸುತ್ತೇನೆ.
ಅಲ್ಪಸಂಖ್ಯಾತರೂ ತಿನ್ನಲಿ ಬಿಡಿ
ಯಾರ್ಯಾರೋ ಸರಕಾರಕ್ಕೆ ಟೋಪಿ ಹಾಕುತ್ತಾರೆ. ಅಲ್ಪಸಂಖ್ಯಾತರೂ ಸಾಲ ಪಡೆದು ತಿರುಗಿ ಕಟ್ಟದೇ ಸರಕಾರಕ್ಕೆ ಟೋಪಿ ಹಾಕಿದರೆ ಹಾಕಲಿ ಬಿಡಿ. ಹಿಂದಿನ ಸರಕಾರ ಉಳ್ಳವರಿಗೆ ಮಾತ್ರ ಜಮೀನು ಕೊಟ್ಟಿದೆ. ಅಲ್ಪಸಂಖ್ಯಾತರಿಗೆ ಕೊಟ್ಟಿಲ್ಲ. ರೈತರು ಭೂಮಿಯನ್ನು ಉಳ್ಳವರಿಗೆ ಕೊಡುವ ನೆಪದಲ್ಲಿ ಸರಕಾರ ಕೋಟ್ಯಾಂತರ ರೂಪಾಯಿ ಲೂಟಿ ಮಾಡಿದೆ.
ವಕ್ಫ್ ಮಂಡಳಿ
ವಕ್ಫ್ ಮಂಡಳಿ ಅಥವಾ ಸರಕಾರ ಅಲ್ಪಸಂಖ್ಯಾತರಿಗೆ 5-10 ಎಕರೆ ಜಮೀನು, ಕೈಗಾರಿಕೆ ಸ್ಥಾಪಿಸಲು 25-50 ಲಕ್ಷ ಸಾಲ ನೀಡಲಿ. ಅವರು ಸಾಲ ಕಟ್ಟದಿದ್ದರೂ ಪರವಾಗಿಲ್ಲ. ಯಾರ್ಯಾರೋ ಸರಕಾರಕ್ಕೆ ಟೋಪಿ ಹಾಕಿದ್ದಾರಂತೆ, ನೀವೂ ಹಾಕಿ ಎಂದು ಪರಮೇಶ್ವರ್ ಹೇಳಿದ್ದರು.
ಯಾರು ಏನೇ ಹೇಳಲಿ..
ನನ್ನ ಈ ಹೇಳಿಕೆಯನ್ನು ಹಿಂದಕ್ಕೆ ಪಡೆಯುವುದಿಲ್ಲ. ಯಾರು ಏನಾದರೂ ಹೇಳಿಕೊಳ್ಳಲಿ, ತಲೆ ಕೆಡಿಸಿಕೊಳ್ಳಲಿ ನಾನು ಕ್ಯಾರೇ ಅನ್ನುವುದಿಲ್ಲ ಎಂದು ಘಂಟಾಘೋಷವಾಗಿ ಕಾರ್ಯಾಗಾರದಲ್ಲಿ ಹೇಳಿಕೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷರು ಒಂದೇ ದಿನದಲ್ಲಿ ಉಲ್ಟಾ ಹೊಡೆದಿದ್ದಾರೆ.