ಸುರೇಶ್ ಕುಮಾರ್ ಅವರೇ ಸುಳ್ಳು ಹೇಳಿ ದಾರಿ ತಪ್ಪಿಸಬೇಡಿ!
ಬೆಂಗಳೂರು, ಸೆ. 07: ಕೊರೊನಾ ವೈರಸ್, ಲಾಕ್ಡೌನ್ನಿಂದಾಗಿ ಎಲ್ಲ ಕ್ಷೇತ್ರಗಳ ಕಾರ್ಯಚಟುವಟಿಕೆಗಳು ರೂಪಾಂತರವಾಗಿವೆ. ಕೇವಲ ಐಟಿ ಕ್ಷೇತ್ರಕ್ಕೆ ಸೀಮಿತವಾಗಿದ್ದ ವರ್ಕ್ ಫ್ರಮ್ ಹೋಮ್ ಪರಿಕಲ್ಪನೆಯನ್ನು ಬಹುತೇಕ ಎಲ್ಲ ಕ್ಷೇತ್ರಗಳು ಅಳವಡಿಸಿಕೊಂಡಿವೆ. ಹೀಗಾಗಿ ಕೆಲಸದ ರೀತಿಯ ಬದಲಾಗಿದೆ. ಕೊರೊನಾ ವೈರಸ್ ಪರಿಣಾಮ ಶಿಕ್ಷಣ ಕ್ಷೇತ್ರದ ಮೇಲೂ ಬಹಳಷ್ಟಾಗಿದೆ. ಕೊರೊನಾ ವೈರಸ್ನಿಂದಾಗಿ ಒಂದರಿಂದ ಒಂಭತ್ತನೆ ತರಗತಿಯವರೆಗೆ ವಾರ್ಷಿಕ ಪರೀಕ್ಷೆಯನ್ನು ಶಿಕ್ಷಣ ಇಲಾಖೆ ರದ್ದು ಮಾಡಿತ್ತು. ಬದಲಾದ ಕಾಲದಲ್ಲಿ ಮತ್ತೆ ಗುರುಕುಲ ಶಿಕ್ಷಣವನ್ನು ನೆನಪಿಸುವಂತೆ ವಿದ್ಯಾಗಮ ಎಂಬ ಯೋಜನೆಯಡಿ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವ ಮಾರ್ಗವನ್ನು ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಮಾಡಿದೆ.
Recommended Video
ಆದರೆ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಜಾರಿಗೆ ತಂದಿರುವ ವಿದ್ಯಾಗಮ ಕಲಿಕಾ ಯೋಜನೆಗೆ ಕೆಪಿಸಿಸಿ ಘಟಕ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ವಿದ್ಯಾಗಮ ಯೋಜನೆಗೆ ಸರ್ಕಾರಿ ಶಾಲಾ ಶಿಕ್ಷಕರಿಂದ ವಿರೋಧ ವ್ಯಕ್ತವಾಗಿದೆ.
'ಸರ್ಕಾರದ ಬದ್ಧತೆಯ ಬಗ್ಗೆ ವಿರೋಧ ಪಕ್ಷದ ಕಾಳಜಿ ಅನಗತ್ಯ'
ಶಸ್ರ್ರ ನೀಡದೆ ಸೈನಿಕರನ್ನು ಯುದ್ಧಕ್ಕೆ ಕಳಿಸಿದಂತೆ, ಶಿಕ್ಷಕರಿಗೆ ಯಾವುದೇ ರಕ್ಷಣಾ ವ್ಯವಸ್ಥೆ ಕಲ್ಪಿಸದೇ ಬೀದಿಯಲ್ಲಿ ಪಾಠ ಮಾಡುವಂತೆ ಶಿಕ್ಷಕರ ಮೇಲೆ ಒತ್ತಡ ಹೇರುತ್ತಿದ್ದೀರಿ. ನಿಮ್ಮ ಈ ನಡೆ ಅಮಾನವೀಯ. ಕಳೆದ 4 ತಿಂಗಳುಗಳಿಂದ 2 ಲಕ್ಷಕ್ಕೂ ಅಧಿಕ ಖಾಸಗಿ ಶಾಲಾ ಶಿಕ್ಷಕರಿಗೆ ವೇತನವಾಗಿಲ್ಲ. ನೀವು ಸಹಾಯ ಮಾಡುವ ಭಸರವೆಯನ್ನು ಕೊಟ್ಟಿದ್ದೀರಿ. ಆದರೆ ಭರವಸೆಯನ್ನು ಈಡೇರಿಸಿಲ್ಲ.
ಖಾಸಗಿ ಶಾಲಾ ಶಿಕ್ಷಕರ ಮನೆಯ ಬಾಡಿಗೆ, ವಿದ್ಯುತ್-ಸಿಲೆಂಡರ್ ಬಿಲ್, ಮಕ್ಕಳ ಶಾಲಾ-ಕಾಲೇಜು ಶುಲ್ಕವನ್ನೇನಾದರೂ ಕಟ್ಟಿದ್ದೀರಾ? ಸುಳ್ಳು ಹೇಳಿ ಜನರ ದಾರಿ ತಪ್ಪಿಸಬೇಡಿ ಎಂದು ರಾಜ್ಯ ಕಾಂಗ್ರೆಸ್ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರನ್ನು ತೀವ್ರ ತರಾಟೆ ತೆಗೆದುಕೊಂಡಿದೆ.