ಸಚಿವ ಈಶ್ವರಪ್ಪನ ಮೇಲೆ ಕಾಂಗ್ರೆಸ್ ಕನಿಕರ ತೋರಲು ಕಾರಣವೇನು?
ಬೆಂಗಳೂರು, ಅ 9: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಮೇಲೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ (ಕೆಪಿಸಿಸಿ) ವ್ಯಂಗ್ಯವಾಗಿ ಕನಿಕರ ತೋರುವ ಟ್ವೀಟ್ ಅನ್ನು ಮಾಡಿದೆ.
"ಚುನಾವಣೆ ಹತ್ತಿರ ಬಂದಾಗಲೆಲ್ಲಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಉತ್ತರಕುಮಾರನ ಪೌರುಷ ತೋರುತ್ತಾರೆ"ಎಂದು ಈಶ್ವರಪ್ಪ ಲೇವಡಿ ಮಾಡಿದ್ದರು.
ಡಿ.ಕೆ ಶಿವಕುಮಾರ್ ಅವರನ್ನು ನಾವು ಕುಗ್ಗಿಸುತ್ತಿಲ್ಲ, ಸಿಬಿಐ: ಕೆ.ಎಸ್ ಈಶ್ವರಪ್ಪ
ಇದಕ್ಕೆ ಪ್ರತಿಕ್ರಿಯಿಸಿರುವ ಕೆಪಿಸಿಸಿ, "ಆಟಕ್ಕೂ ಇಲ್ಲದ ಲೆಕ್ಕಕ್ಕೂ ಇಲ್ಲದಂತಾಗಿರುವ @ikseshwarappa ನವರೇ ಆಗಾಗ ನಿಮ್ಮ ಇರುವಿಕೆ ತೋರಲು ಹೆಣಗುತ್ತಿರುವುದು ಕನಿಕರ ತರಿಸುತ್ತದೆ".
"ನೆರೆಪರಿಹಾರ, ಬರಪರಿಹಾರ, GST ಪಾಲು,ಪಿಎಂ ಕೇರ್ಸ್ ನೆರವು ಇವ್ಯಾವುದನ್ನೂ ಮೋದಿ ಎದುರು ಧ್ವನಿ ಎತ್ತರಿಸಿ ಕೇಳಲಾಗದ ಹೇಡಿಗಳು, ಉತ್ತರಕುಮಾರರು ಯಾರೆಂದು ರಾಜ್ಯದ ಜನತೆಗೆ ಸ್ಪಷ್ಟವಾಗಿ ತಿಳಿದಿದೆ"ಎಂದು ಕೆಪಿಸಿಸಿ ಟ್ವೀಟ್ ಮೂಲಕ ಲೇವಡಿ ಮಾಡಿದೆ.
ಡಿಕೆಶಿ ಮನೆ ಮೇಲೆ ಸಿಬಿಐ ದಾಳಿಯ ಬಗ್ಗೆ ಪ್ರತಿಕ್ರಿಯಿಸುತ್ತಿದ್ದ ಈಶ್ವರಪ್ಪ, "ಸಿಬಿಐ, ಆದಾಯ ತೆರಿಗೆ ತನಿಖೆಯಲ್ಲಿ ಹವಾಲಾ ಹಣ ಸಿಕ್ಕಿತು. ಕಪ್ಪು ಹಣ ಸಿಕ್ಕಿದ್ದರಿಂದಲೇ ಜೈಲಿಗೆ ಹೋಗಿ ಬಂದರು. ಇಷ್ಟೆಲ್ಲ ಆದರೂ ಬುದ್ಧಿ ಬಂದಿಲ್ಲ. ನಾವೇನೂ ಮಾಡಿಲ್ಲ, ಎಲ್ಲ ಸಿಬಿಐ ಮಾಡಿದೆ. ಸಿಬಿಐನವರು ಏನು ದಾಖಲೆ ಕೇಳುತ್ತಾರೋ ಅವನ್ನು ಕೊಡಲಿ"ಎಂದು ಹೇಳಿದ್ದರು.
ಕಾಂಗ್ರೆಸ್ - ಜೆಡಿಎಸ್ ಗೂ ಅದೇ ಸ್ಥಿತಿ ಬಂದಿದೆ; ಈಶ್ವರಪ್ಪ
"ಚುನಾವಣೆ ಎಂದರೆ ಬಿಜೆಪಿ ಎನ್ನುವಂತಾಗಿದೆ. ಯಾವುದೇ ಚುನಾವಣೆ ಬರಲಿ ಬಿಜೆಪಿ ಗೆಲುವು ನಿಶ್ಚಿತ, ಈಗಾಗಲೇ ಲೋಕಸಭಾ ಚುನಾವಣೆ ಇದಕ್ಕೆ ಉತ್ತರ ಕೊಟ್ಟಿದೆ. ಈಗಾಗಲೇ ಅಭ್ಯರ್ಥಿಗಳ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ. ಅಭ್ಯರ್ಥಿಗಳ ಆಯ್ಕೆ ಬಗ್ಗೆ ಕೇಂದ್ರದ ನಾಯಕರು ಎರಡು ದಿನದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಾರೆ"ಎಂದು ಈಶ್ವರಪ್ಪ ಹೇಳಿದ್ದಾರೆ.
Recommended Video